ಕರ್ನಾಟಕ

karnataka

ಕಡಲ ನಗರಿಯಲ್ಲಿ‌ ಕಳೆಗಟ್ಟಿದ ಗಣೇಶೋತ್ಸವ; ಅದ್ದೂರಿ ಆಚರಣೆಗೆ ಭರದ ಸಿದ್ಧತೆ - Ganesha festival

By ETV Bharat Karnataka Team

Published : Sep 6, 2024, 6:46 PM IST

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಗಣೇಶನ ಹಬ್ಬ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ನಗರದಲ್ಲಿಯೇ 15 ಕ್ಕೂ ಹೆಚ್ಚು ಕಡೆ ಬೃಹತ್ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಗುತ್ತದೆ.

preparations-for-the-grand-celebration-of-ganesha-festival-in-karwar
ಗಣಪತಿಗಳಿಗೆ ಕಲಾಕಾರರಿಂದ ಅಂತಿಮಸ್ಪರ್ಶ (ETV Bharat)

ಕಡಲನಗರಿಯಲ್ಲಿ‌ ಕಳೆಗಟ್ಟಿದ ಗಣೇಶೋತ್ಸವ (ETV Bharat)

ಕಾರವಾರ (ಉತ್ತರ ಕನ್ನಡ):ಗಣೇಶ ಹಬ್ಬಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಕರಾವಳಿ ನಗರಿ ಕಾರವಾರದಲ್ಲಿ ಅದ್ದೂರಿಯಾಗಿ ಆಚರಿಸಲ್ಪಡುವ ಚೌತಿಯನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ನಡೆದಿದ್ದು, ಬಗೆ ಬಗೆಯ ಗಣಪತಿಗಳಿಗೆ ಕಲಾಕಾರರಿಂದ ಅಂತಿಮಸ್ಪರ್ಶ ನೀಡಲಾಗುತ್ತಿದೆ.

ಹೌದು, ಕರಾವಳಿ ಜಿಲ್ಲೆ ಉತ್ತರ ಕನ್ನಡದ ಕಾರವಾರದಲ್ಲಿ ಗಣೇಶನ ಹಬ್ಬ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಅದರಲ್ಲೂ ಸಾರ್ವಜನಿಕ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಕಾರವಾರ ನಗರದಲ್ಲಿಯೇ 15ಕ್ಕೂ ಹೆಚ್ಚು ಬೃಹತ್ ಬಗೆಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಗುತ್ತದೆ.

ಮನೆಗಳಲ್ಲಿ ಆಚರಿಸುವುದರ ಜೊತೆಗೆ ಎಲ್ಲರೂ ಒಟ್ಟಾಗಿ ಸಾರ್ವಜನಿಕ ಮೂರ್ತಿಗಳನ್ನು ಸ್ಥಾಪಿಸಿ, 9 ರಿಂದ 11 ದಿನಗಳ ಕಾಲ ಇಡುವುದರಿಂದ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. ಜೊತೆಗೆ ಮೂರ್ತಿ ನಿಮಜ್ಜನ ಕಾರ್ಯಕ್ರಮ ಸಹ ವಿಜೃಂಭಣೆಯಿಂದ ಜರುಗುತ್ತದೆ.

'ಈಗಾಗಲೇ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಪೆಂಡಾಲ್ ಹಾಕಿ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಹಿಂದಿಗಿಂತಲೂ ದೊಡ್ಡದಾದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಮಳೆ ಬರುವ ಸೂಚನೆ ಇದೆ. ಅಲ್ಲದೇ ಮಾರುಕಟ್ಟೆಗಳಲ್ಲಿ ದರ ಕೂಡ ಡಬಲ್ ಆಗಿದೆ. ಆದರೂ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ' ಎನ್ನುತ್ತಾರೆ ಗಣೇಶೋತ್ಸವ ಸಮಿತಿ ಸದಸ್ಯ ರೋಶನ್ ಹರಿಕಂತ್ರ.

ಗಣೇಶ ಚತುರ್ಥಿ ವೇಳೆ ಪ್ರತಿವರ್ಷ ಕಾರವಾರ ನಗರದಲ್ಲೇ ಸುಮಾರು 15ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸ್ಥಾಪನೆ ಮಾಡಲಾಗುತ್ತದೆ. ರಿಕ್ಷಾ ಚಾಲಕರು, ವಿವಿಧ ಸಂಘ ಸಂಸ್ಥೆಗಳು, ಯುವಕರ ತಂಡ, ಪೊಲೀಸರು, ನಗರಸಭೆ ಸೇರಿದಂತೆ ಹಲವರು ಸಾರ್ವಜನಿಕ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸಿ 9 ರಿಂದ 11 ದಿನಗಳ ಕಾಲ ಪೂಜೆ ಸಲ್ಲಿಸುತ್ತಾರೆ.

ನಂತರ ಅವುಗಳನ್ನ ನಗರದಲ್ಲಿ ಡಿಜೆ ಹಾಡಿನೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಸಮುದ್ರದಲ್ಲಿ ನಿಮಜ್ಜನ ಮಾಡಲಾಗುತ್ತದೆ. ಇದನ್ನ ನೋಡುವುದಕ್ಕೆ ಅಂತಾನೇ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಮನೆಗಳಲ್ಲೂ ಸಹ ಸಾಕಷ್ಟು ಮಂದಿ ವೈಯಕ್ತಿಕವಾಗಿ ಮೂರ್ತಿ ಸ್ಥಾಪನೆ ಮಾಡಿ, ಪೂಜೆ ಸಲ್ಲಿಸುತ್ತಾರೆ. ಈಗಾಗಲೇ ಮೂರ್ತಿ ತಯಾರಕರೂ ಸಹ ಹಗಲು ರಾತ್ರಿ ಕುಳಿತು ಗಣೇಶನ ವಿಭಿನ್ನ ಬಗೆಯ ಮೂರ್ತಿಗಳನ್ನ ತಯಾರಿಸಿದ್ದು, ಅಂತಿಮ ಸ್ಪರ್ಶ ನೀಡುವುದರಲ್ಲಿ ನಿರತರಾಗಿದ್ದಾರೆ.

ಈ ಬಗ್ಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯ ಪ್ರಸಾದ್ ಅವರು ಮಾತನಾಡಿ, 'ನಮ್ಮ ಜಿಲ್ಲೆಯಲ್ಲಿ ಗೋವಾ, ಮಹಾರಾಷ್ಟ್ರದ ಸಂಸ್ಕೃತಿಯಂತೆ ಇಲ್ಲಿ ಪೂಜೆ, ಅನ್ನಸಂತರ್ಪಣೆ ಮಾಡುತ್ತೇವೆ. ಈ 11 ದಿನಗಳಲ್ಲಿಯೂ ಒಂದೊಂದು ವಿಶೇಷ ಪೂಜೆ ಇಟ್ಟುಕೊಂಡಿರುತ್ತೇವೆ. 11 ನೇ ದಿನಕ್ಕೆ ಶ್ರದ್ದಾ, ಭಕ್ತಿಯಿಂದ ಗಣಪತಿಯನ್ನು ಹೇಗೆ ಬರಮಾಡಿಕೊಂಡಿರುತ್ತೇವೋ ಹಾಗೆಯೇ ನಿಮಜ್ಜನ ಮಾಡುತ್ತೇವೆ' ಎಂದಿದ್ದಾರೆ.

ಇದನ್ನೂ ಓದಿ :ನಾಳೆ ಗಣೇಶ ಚತುರ್ಥಿ: ವಿನಾಯಕನ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದರು - Ganesh Chaturthi

ABOUT THE AUTHOR

...view details