ಹುಬ್ಬಳ್ಳಿ:ಯಡಿಯೂರಪ್ಪ ಅವರ ಹಿರಿತನ, ವಯಸ್ಸು ನೋಡಿದರೆ ಇದರಲ್ಲಿ ಷಡ್ಯಂತ್ರವಿದೆ ಅನಿಸುತ್ತದೆ. ಎಫ್ಐಆರ್ ಆಗಿದೆ ತನಿಖೆಯಾಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಣದ ಕೈಗಳ ಕೈವಾಡವಿದೆ. ಅವರು ಹಿರಿಯರು ಅವರು ಈ ರೀತಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಯಲಿ ಆಮೇಲೆ ಸತ್ಯಾಸತ್ಯತೆ ಗೊತ್ತಾಗುತ್ತದೆ. ಬಿಜೆಪಿ 28 ಸ್ಥಾನ ಗೆಲುತ್ತದೆ ಎಂಬ ವಾತಾವರಣ ನಿರ್ಮಾಣವಾದ ಮೇಲೆ ಷಡ್ಯಂತ್ರ ರೂಪಿತವಾಗಿದೆ ಎಂದರು.
ಶೆಟ್ಟರ್ ಬೆಳಗಾವಿಗೆ ನಿಲ್ಲುವಂತೆ ವರಿಷ್ಠರು ಸೂಚನೆ:ಜಗದೀಶ್ ಶೆಟ್ಟರ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಶೆಟ್ಟರ್ ಅವರು ಹಿರಿಯ ನಾಯಕರು ಅವರನ್ನು ಗೌರವಯುತವಾಗಿ ನಮ್ಮ ನಾಯಕರು ನಡೆಸಿಕೊಳ್ಳುತ್ತಾರೆ. ನನ್ನ ಮಾಹಿತಿ ಪ್ರಕಾರ ಬೆಳಗಾವಿಗೆ ನಿಲ್ಲುವಂತೆ ಶೆಟ್ಟರ್ ಅವರಿಗೆ ವರಿಷ್ಠರು ಮನವಿ ಮಾಡಿದ್ದಾರೆ. ಆದಷ್ಟು ಬೇಗ ಗೊಂದಲ ನಿವಾರಣೆಯಾಗಲಿದೆ ಎಂದರು.
ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ನಾಯಕರು ಸ್ವಂತ ಹಾಗೂ ಸಾಂಸ್ಥಿಕದೊಳಗೆ ನಂಬಿಕೆ ಕಳೆದುಕೊಂಡಿದೆ. ಸುಪ್ರೀಂ ಕೋರ್ಟ್ ಬಗ್ಗೆ, ಚುನಾವಣೆ ಆಯೋಗ ಸೇರಿದಂತೆ ಯಾವ ಸಂಸ್ಥೆಗಳ ಮೇಲಿಯೂ ನಂಬಿಕೆಯಿಲ್ಲ. ಕಾಂಗ್ರೆಸಿಗರಿಗೆ ಯಾರ ಬಗ್ಗೆಯೂ ನಂಬಿಕೆಯಿಲ್ಲ. ಎಲ್ಲ ಕಡೆಯೂ ನಂಬಿಕೆ ಕಳೆದುಕೊಂಡಿದ್ದಾರೆ. ಮಾಹಿತಿ ಹಕ್ಕು, ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಹೀಗೆ ಎಲ್ಲದರಲ್ಲೂ ನಂಬಿಕೆ ಕಳೆದುಕೊಂಡಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.