ಕರ್ನಾಟಕ

karnataka

ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ನೆಫೀಸಾ ದೆಹಲಿ ಸ್ವಾತಂತ್ರ್ಯೋತ್ಸವಕ್ಕೆ ವಿಶೇಷ ಅತಿಥಿ; ರಾಜ್ಯದಲ್ಲಿ 6 ಗ್ರಾ.ಪಂ ಅಧ್ಯಕ್ಷರಿಗೆ ಈ ಗೌರವ - Independence Day Special Guest

By ETV Bharat Karnataka Team

Published : Aug 13, 2024, 6:48 PM IST

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗಿಯಾಗಲು ದ.ಕ.ಜಿಲ್ಲೆಯ ಪೆರುವಾಯಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನೆಫೀಸಾ ಅವರನ್ನು ಆಯ್ಕೆ ಮಾಡಲಾಗಿದೆ.

PERUAI PANCHAYAT PRESIDENT NEFISA
ಪೆರುವಾಯಿ ಗ್ರಾಪಂ ಅಧ್ಯಕ್ಷೆ ನೆಫೀಸಾ (ETV Bharat)

ಬಂಟ್ವಾಳ: ದೆಹಲಿಯ ಕೆಂಪುಕೋಟೆಯಲ್ಲಿ ಆ.15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲು ಕರ್ನಾಟಕದ 6 ಪಂಚಾಯತ್ ಮಹಿಳಾ ಅಧ್ಯಕ್ಷರನ್ನು ಆಹ್ವಾನಿಸಲಾಗಿದ್ದು, ದ.ಕ.ಜಿಲ್ಲೆಯ ಪೆರುವಾಯಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನೆಫೀಸಾ ಅವರನ್ನು ಆಯ್ಕೆ ಮಾಡಲಾಗಿದೆ. ನೆಫೀಸಾ ಪೆರುವಾಯಿ ಗ್ರಾ.ಪಂ. ಅಧ್ಯಕ್ಷರಾಗಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದು, ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದರು.

ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ವಾಹನ ಚಲಾಯಿಸಿ ಕಸ ಮತ್ತು ತ್ಯಾಜ್ಯ ಸಂಗ್ರಹ ಮಾಡಿ, ಸೂಕ್ತ ಕ್ರಮ ಕೈಗೊಂಡ ಬಗ್ಗೆ ವಿಶೇಷವಾಗಿ ಗುರುತಿಸಲ್ಪಟ್ಟಿದ್ದರು. ಅವರ ಈ ಸೇವೆಯನ್ನು ಗುರುತಿಸಿ, ವರ್ಲ್ಡ್ ಯೂತ್ ಸ್ಕಿಲ್ ಡೇ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಗೌರವಿಸಿದ್ದರು. ಪಂಚಾಯತ್ ವ್ಯಾಪ್ತಿಯ ರಸ್ತೆ, ಎಡಬ್ಲ್ಯೂಸಿ, ನರೇಗ ಇತ್ಯಾದಿ ಅಭಿವೃದ್ಧಿ ಯೋಜನೆಗಳಲ್ಲಿ ಇವರು ಶ್ರಮಿಸಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ಉದಾರವಾಗಿ ನೀಡುವ ಮೂಲಕ ಗಮನ ಸೆಳೆದಿರುವ ನೆಫೀಸಾ, ರಾಜ್ಯ ಇನ್ಸ್​ಟಿಟ್ಯೂಟ್​ ಆಫ್ ರೂರಲ್ ಡೆವೆಲಪ್ಮೆಂಟ್ ಇನ್ ಸಾಲಿಡ್ ವೇಸ್ಟ್ ಮೆನೇಜ್ಮೆಂಟ್​ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.

ಇದೀಗ ಹಳ್ಳಿಯಿಂದ ದೆಹಲಿಗೆ ತೆರಳಿರುವ ನೆಫೀಸಾ, ದ.ಕ.ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಅಧ್ಯಕ್ಷೆ ಕೂಡ ಹೌದು. ಪೆರುವಾಯಿ ಗ್ರಾ.ಪಂ. ಸದಸ್ಯರಾದ ಬಳಿಕ ಹಂತ ಹಂತವಾಗಿ ಉಪಾಧ್ಯಕ್ಷರಾಗಿ, ರಾಜ್ಯ ರಾಜಧಾನಿಯಲ್ಲಿ ಗುರುತಿಸಿ, ಗೌರವಿಸಲ್ಪಟ್ಟು, ಅಧ್ಯಕ್ಷರಾಗಿ ಇದೀಗ ದೇಶದ ರಾಜಧಾನಿಗೆ ತೆರಳುವ ಯೋಗ ಪಡೆದಿದ್ದಾರೆ.

ರಾಜ್ಯದ ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲೂ ಸ್ವಚ್ಛ ಸಂಕೀರ್ಣವನ್ನು ನಿರ್ಮಿಸಿ ವಾಹನದ ಮೂಲಕ ತ್ಯಾಜ್ಯ ಸಂಗ್ರಹಣಾ ಕಾರ್ಯ ಕಡ್ಡಾಯಗೊಳಿಸಲಾಗುತ್ತಿದ್ದು, ಪೆರುವಾಯಿಯಲ್ಲಿ ಸ್ವತಃ ವಾಹನ ಚಲಾಯಿಸುವ ಮೂಲಕ ಗಮನ ಸೆಳೆದಿದ್ದರು ನೆಫೀಸಾ.

ನೆಫೀಸಾ ಉಪಾಧ್ಯಕ್ಷರಾಗಿದ್ದ ಸಂದರ್ಭ, ಸ್ವಚ್ಛತೆಗಾಗಿ ಕಸ ಕೊಂಡೊಯ್ಯುವ ವಾಹನವನ್ನು ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಮನೆ, ಅಂಗಡಿಗಳಿಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಕಾರ್ಯಕ್ಕೆ ಪ್ರೇರಣೆ ನೀಡುವ ಮೂಲಕ ಇತರರಿಗೂ ಮಾದರಿಯಾಗಿದ್ದರು.

ಇದನ್ನೂ ಓದಿ:77ನೇ ಸ್ವಾತಂತ್ರ್ಯೋತ್ಸವ: ಪ್ರಧಾನಿ ಕಾರ್ಯಕ್ರಮಕ್ಕೆ ಬೆಳಗಾವಿಯ ಮೂವರು ವಿದ್ಯಾರ್ಥಿಗಳು, ಓರ್ವ ಉಪನ್ಯಾಸಕಿ ಆಯ್ಕೆ - PM Modi Independence Day Program

ABOUT THE AUTHOR

...view details