ಕರ್ನಾಟಕ

karnataka

ETV Bharat / state

ಚನ್ನಪಟ್ಟಣ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿಯನ್ನ ವರಿಷ್ಠರು ನಿರ್ಧರಿಸಲಿದ್ದಾರೆ : ನಿಖಿಲ್​ ಕುಮಾರಸ್ವಾಮಿ

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಅವರು ಚನ್ನಪಟ್ಟಣದ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಬಗ್ಗೆ ಮಾತನಾಡಿದ್ದಾರೆ. ಮೈತ್ರಿ ಅಭ್ಯರ್ಥಿಯನ್ನು ವರಿಷ್ಠರು ಆಯ್ಕೆ ಮಾಡಲಿದ್ದಾರೆ ಎಂದಿದ್ದಾರೆ.

By ETV Bharat Karnataka Team

Published : 5 hours ago

nikhil-kumaraswamy
ನಿಖಿಲ್​ ಕುಮಾರಸ್ವಾಮಿ (ETV Bharat)

ಹಾವೇರಿ : ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಮೈತ್ರಿ ಅಭ್ಯರ್ಥಿಯನ್ನ ಅಂತಿಮವಾಗಿ ವರಿಷ್ಠರು ನಿರ್ಧಾರ ಮಾಡಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ತಿಳಿಸಿದ್ದಾರೆ.

ಜಿಲ್ಲೆಯ ಶಿಗ್ಗಾಂವ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ಸ್ಪರ್ಧಿಸಿದರೆ ಕಾಂಗ್ರೆಸ್ ಸೋಲಿಸಬಹುದು ಎಂಬ ಬಗ್ಗೆ ಈಗಾಗಲೇ ಪಕ್ಷದ ಹಿರಿಯರು ಮಾಹಿತಿ ಕಲೆಹಾಕಿದ್ದಾರೆ ಎಂದು ತಿಳಿಸಿದರು.

ಚನ್ನಪಟ್ಟಣ ಉಪಚುನಾವಣೆ ಮೈತ್ರಿ ಅಭ್ಯರ್ಥಿಯನ್ನ ವರಿಷ್ಠರು ನಿರ್ಧರಿಸಲಿದ್ದಾರೆ : ನಿಖಿಲ್​ ಕುಮಾರಸ್ವಾಮಿ (ETV Bharat)

ಇಂದು ಸಂಜೆ ಬೆಂಗಳೂರಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ಇದೆ. ನಾನೂ ಕೂಡಾ ಸಂಜೆ ಸಭೆಗೆ ಹೋಗುವೆ. ಕೋರ್ ಕಮಿಟಿ ಮಿತ್ರರು, ನಮ್ಮ ಶಾಸಕರೂ ಸಭೆಯಲ್ಲಿ ಇರ್ತಾರೆ. ಸಣ್ಣ ಪುಟ್ಟ ಗೊಂದಲ ಬಗೆಹರಿಸಲು ಸಭೆ ಏರ್ಪಾಡು ಮಾಡಲಾಗಿದೆ ಎಂದು ತಿಳಿಸಿದರು.

ಎಲ್ಲ ಬಗೆಹರಿಸುವ ನಿಟ್ಟಿನಲ್ಲಿ ಇಂದು ಸಭೆ ನಡೆಯಲಿದೆ. ಕುಮಾರಣ್ಣ ಅವರ ಸ್ವಕ್ಷೇತ್ರ ಚನ್ನಪಟ್ಟಣ. ಆದರೆ ಅನೀರಿಕ್ಷಿತ ಬೆಳವಣಿಗೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ, ಈಗ ಕೇಂದ್ರ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರ ತೆರವಾಗಿದೆ. ಪಕ್ಷ ಪ್ರಬಲವಾಗಿದೆ. ನಮ್ಮದೇ ಸಾಂಪ್ರದಾಯಿಕ ಮತಗಳಿವೆ ಎಂದು ನಿಖಿಲ್​ ಹೇಳಿದರು.

ಎನ್​ಡಿಎ ಅಭ್ಯರ್ಥಿ ಗೆಲ್ಲಲಿದ್ದಾರೆ : ಜೆಡಿಎಸ್​ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿದರೂ 70 ರಿಂದ 80 ಸಾವಿರ ಮತಗಳನ್ನು ಪಡೆಯಲಿದ್ದಾರೆ. ಚುನಾವಣಾ ಇತಿಹಾಸ ನೋಡಿದರೆ ಗೊತ್ತಾಗುತ್ತೆ. ಜನತಾದಳ ಪಕ್ಷ ಅಂದರೆ ಒಟ್ಟಾರೆಯಾಗಿ ಎನ್​ಡಿಎ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜನತಾ ದಳದ ಕಾರ್ಯಕರ್ತರಿಗೆ ಯಾರಿಗಾದರೂ ಅವಕಾಶ ಮಾಡಿಕೊಡಿ ಅನ್ನೋದು ಕಾರ್ಯಕರ್ತರ, ಮುಖಂಡರ ಅಭಿಲಾಷೆಯಾಗಿದೆ. ನನಗೆ ಪಕ್ಷದಲ್ಲಿ ಒಂದು ಜವಾಬ್ದಾರಿ ಕೊಟ್ಟಿದ್ದಾರೆ. 7 ಜಿಲ್ಲೆ ಪ್ರವಾಸ ಮುಗಿಸಿದ್ದೇನೆ. ನನ್ನ ಮುಂದೆ ಪ್ರಾದೇಶಿಕ ಪಕ್ಷದ ಸಂಘಟನೆ ಜವಾಬ್ದಾರಿ ಇದೆ. ಪಕ್ಷ ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದು ಹೇಳಿದರು.

ಹೆಚ್​ ಡಿ ದೇವೇಗೌಡರು 62 ವರ್ಷದ ರಾಜಕಾರಣದ ಬದುಕಿನಲ್ಲಿ ಮೊದಲನೇ ಬಾರಿ ಬಿಜೆಪಿ ಜೊತೆ ಇದ್ದಾರೆ. ಪ್ರಧಾನ ಮಂತ್ರಿ ಮೋದಿಯವರ ಕಾರ್ಯವೈಖರಿ ಮೆಚ್ಚಿ ಅವರ ನಾಯಕತ್ವದ ಜೊತೆ ನಾವೂ ಹೆಜ್ಜೆ ಹಾಕಬೇಕು ಅಂತ ದೇವೇಗೌಡರು ತೀರ್ಮಾನ ಮಾಡಿ ಬಂದಿದ್ದಾರೆ ಎಂದರು.

ಯಾವುದೇ ಗೊಂದಲಕ್ಕೆ ಎಡೆಮಾಡಿಕೊಟ್ಟಿಲ್ಲ. ಜೆಡಿಎಸ್​ಗೆ ಟಿಕೆಟ್ ಕೊಡಬೇಕು ಎಂಬ ವಿಚಾರದಲ್ಲಿ ನನ್ನ ಒತ್ತಾಯ ಏನೂ ಇಲ್ಲ. ನಾನು ಸಾರ್ವಜನಿಕವಾಗಿ ಹೇಳಿಕೆ ಕೊಡಲು ಸಿದ್ಧಇಲ್ಲ. ನನ್ನ ಕಡೆಯಿಂದ ಗೊಂದಲ ಆಗಬಾರದು. ಮೈತ್ರಿಗೆ ಯಾವುದೇ ತೊಂದರೆ ಆಗಬಾರದು. ಅತಿ ಶೀಘ್ರದಲ್ಲಿ ಬಗೆಹರಿಸ್ತೀವಿ ಎಂಬ ವಿಶ್ವಾಸವನ್ನ ನಿಖಿಲ್ ಕುಮಾರಸ್ವಾಮಿ ವ್ಯಕ್ತಪಡಿಸಿದರು.

ಸಿ. ಪಿ ಯೋಗೇಶ್ವರ್ ಸಹ ಪ್ರಬಲ ಆಕಾಂಕ್ಷಿ: ಚನ್ನಪಟ್ಟಣ ವಿಚಾರದಲ್ಲಿ ಯಾರು ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂಬ ಕುತೂಹಲ ಇದೆ. ಕುತೂಹಲವೇ ಒಂದು ತರ ಆತಂಕ ಇದ್ದ ಹಾಗೆ. ಸಿ. ಪಿ ಯೋಗೇಶ್ವರ್ ಸಹ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇಂದು ಸಂಜೆ ಸಭೆಯಲ್ಲಿ ಸ್ವಲ್ಪ ಸ್ಪಷ್ಟತೆ ಬರಬಹುದು ಎಂದು ಹೇಳಿದರು.

ಇದನ್ನೂ ಓದಿ :ನಿಖಿಲ್ ಅಥವಾ ಸಿಪಿವೈ ಯಾರೇ ಆಗಲಿ, 2 ಪಕ್ಷಗಳ ನಾಯಕರ ತೀರ್ಮಾನವೇ ಅಂತಿಮ: ನಿಖಿಲ್ ಕುಮಾರಸ್ವಾಮಿ

ABOUT THE AUTHOR

...view details