ವಿಜಯಪುರ :ಚಾಲುಕ್ಯ ನಗರದ ಮನೆಯೊಂದರ ಮುಂದೆ ಅಪರಿಚಿತರು ಮೃತ ನವಜಾತ ಗಂಡು ಶಿಶುವಿನ ಮೃತದೇಹವನ್ನು ಇಟ್ಟು ಪರಾರಿಯಾಗಿದ್ದಾರೆ. ಡಿ ಆರ್ ಸಜ್ಜನ ಎನ್ನುವರ ಮನೆಮುಂದೆ ಮಗುವಿನ ಮೃತದೇಹ ಪತ್ತೆಯಾಗಿದೆ. ಬೆಳಗಿನ ಜಾವ ಮನೆಯವರು ಬಾಗಿಲು ತೆಗೆದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ನವಜಾತ ಗಂಡು ಶಿಶು ಅದಾಗಲೇ ಮೃತಪಟ್ಟಿದ್ದು ತಿಳಿದು ಬಂದಿದೆ. ಮನೆಯ ಗೇಟಿಗೆ ಬೀಗ ಜಡಿದು ಮಲಗಿದ್ದರೂ, ಗೇಟ್ನಿಂದ ಜಿಗಿದು ಮನೆಯ ಅಂಗಳದಲ್ಲಿ ನವಜಾತ ಶಿಶುವನ್ನಿಟ್ಟು ಹೋಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಗುವಿನ ಕಾಲಿನಲ್ಲಿ ಐಸಿಯು ಎಂದು ಬರೆದಿರುವ ಲೇಬಲ್ ಕಂಡು ಬಂದಿದೆ. ಶಿಶುವಿನ ಮೃತದೇಹವನ್ನು ನೋಡಲು ಸ್ಥಳೀಯರು ನೆರೆದಿದ್ದರು. ಕೂಡಲೇ ಮನೆಯವರು ಪೊಲೀಸರಿಗೆ ತುರ್ತು ಕರೆ ಮಾಡಿದರೂ ಯಾರೂ ಸ್ಪಂದಿಸಿಲ್ಲ. ಕೊನೆಗೆ ಆದರ್ಶ ನಗರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ಸಲ್ಲಿಸಿದ ನಂತರ ಸ್ಥಳಕ್ಕೆ ಬಂದ ಪೊಲೀಸರು ಮೃತ ನವಜಾತ ಶಿಶುವನ್ನು ಕೊಂಡೊಯ್ದಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ಚಾಲುಕ್ಯ ನಗರದಲ್ಲಿ ತಡರಾತ್ರಿ ಮನೆಯೊಂದರಲ್ಲಿ ಕಳ್ಳತನವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳ್ಳತನ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಇಂತಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಪೊಲೀಸ್ ಬೀಟ್ ವ್ಯವಸ್ಥೆ ಹೆಚ್ಚಳ ಮಾಡಬೇಕೆಂದು ಚಾಲುಕ್ಯ ನಗರ ನಿವಾಸಿಗಳು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.