ಕರ್ನಾಟಕ

karnataka

By ETV Bharat Karnataka Team

Published : Jan 23, 2024, 5:11 PM IST

ETV Bharat / state

ಜ.27, 28ರಂದು ಬೆಳಗಾವಿಯಲ್ಲಿ ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಿಳಾ ಸಮಾವೇಶ: ಜಾಮದಾರ್ ಮಾಹಿತಿ

ಬೆಳಗಾವಿಯಲ್ಲಿ ಎರಡು ದಿನ ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಿಳಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್ ಎಮ್ ಜಾಮದಾರ್ ತಿಳಿಸಿದರು.

national-lingayat-first-womens-conference-will-held-in-belgavi-on-27th-and-28th-jan
ಜ.27, 28ರಂದು ಬೆಳಗಾವಿಯಲ್ಲಿ ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಿಳಾ ಸಮಾವೇಶ: ಜಾಮದಾರ್ ಮಾಹಿತಿ

ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಿಳಾ ಸಮಾವೇಶ ಕುರಿತ ಮಾಧ್ಯಮಗೋಷ್ಠಿ

ಬೆಳಗಾವಿ:ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಿಳಾ ಸಮಾವೇಶವನ್ನು ಇದೇ ಜನವರಿ 27, 28ರಂದು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್ ಎಮ್ ಜಾಮದಾರ್ ತಿಳಿಸಿದರು.

ಇಂದು ಬೆಳಗಾವಿ ನಗರದಲ್ಲಿರುವ ಜಾಗತಿಕ‌ ಲಿಂಗಾಯತ ಮಹಾಸಭೆ ಕೇಂದ್ರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದ ತತ್ವ ಸಿದ್ಧಾಂತ ಹಾಗೂ ಆಚರಣೆಗಳನ್ನು ಗಟ್ಟಿಯಾಗಿ‌ ನೆಲೆಗೊಳಿಸುವುದು ಮತ್ತು ಲಿಂಗಾಯತ ಮಹಿಳೆಯರು ಹೆಚ್ಚೆಚ್ಚು ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ವಿಚಾರಗೋಷ್ಠಿಗಳನ್ನು ಹಮ್ಮಿಕೊಂಡಿದ್ದೇವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ 5 ಸಾವಿರ ಮಹಾಸಭೆ ಪ್ರತಿನಿಧಿಗಳು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ತೋಂಟದ ಸಿದ್ಧರಾಮ‌‌ ಸ್ವಾಮೀಜಿ‌ಯಿಂದ ಕಾರ್ಯಕ್ರಮ‌ ಉದ್ಘಾಟನೆ: ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ಸಮಾವೇಶದ ಸರ್ವಾಧ್ಯಕ್ಷರಾಗಿ ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಡಾ ಗಂಗಾ ಮಾತಾಜಿ ಅವರನ್ನು ಆಯ್ಕೆ ಮಾಡಲಾಗಿದೆ. 27ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಆರ್​ಎನ್​ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಗದಗ-ಡಂಬಳ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ‌‌ ಸ್ವಾಮೀಜಿ‌ ಕಾರ್ಯಕ್ರಮ‌ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಬೀದರ ಲಿಂಗಾಯತ ಮಹಾಮಠದ ಡಾ. ಅಕ್ಕ ಅನ್ನಪೂರ್ಣ ತಾಯಿ ನೇತೃತ್ವ ವಹಿಸಲಿದ್ದಾರೆ. ಅತ್ತಿವೇರಿ ಬಸವಧಾಮದ ಬಸವೇಶ್ವರಿ ತಾಯಿ ಆಶಯ ನುಡಿಗಳನ್ನಾಡುವರು‌. ಇದಕ್ಕೂ ಮೊದಲು ಶ್ರೀನಗರ ಉದ್ಯಾನದಿಂದ ಸರ್ವಾಧ್ಯಕ್ಷರ ಮತ್ತು ವಚನದ ಕಟ್ಟುಗಳ ಮೆರವಣಿಗೆಯು ಆರಂಭವಾಗಿ ಶಿವಬಸವ ನಗರ ಲಿಂಗಾಯತ ಭವನ, ಕೆಇಬಿ ಮಾರ್ಗವಾಗಿ ಆರ್​ಎನ್ ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿರುವ ಶರಣೆ ನೀಲಾಂಬಿಕಾ ಮಹಾದ್ವಾರದ ಮೂಲಕ ಸಭಾಭವನ ತಲುಪಲಿದೆ ಎಂದು ಮಾಹಿತಿ ನೀಡಿದರು.

ಬಳಿಕ ಮಧ್ಯಾಹ್ನ 2.30ಕ್ಕೆ "ಲಿಂಗಾಯತ ಮಹಿಳೆಯರನ್ನು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕವಾಗಿ ಸಂಘಟಿಸುವಲ್ಲಿ ಮಹಿಳಾ ರಾಜಕಾರಣಿಗಳ ಪಾತ್ರ" ಕುರಿತು ಪ್ರಥಮ ಸಭೆ ನಡೆಯಲಿದ್ದು, ಇದಕ್ಕೆ ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಡಾ. ಅಕ್ಕ ಅನ್ನಪೂರ್ಣ ತಾಯಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವರಾದ ರಾಣಿ ಸತೀಶ್​, ಲೀಲಾದೇವಿ ಆರ್. ಪ್ರಸಾದ, ಮೀನಾಕ್ಷಿ ಬಾಳಿ‌ ವಿಷಯ ಮಂಡಿಸಲಿದ್ದಾರೆ ಎಂದರು.

ಸಂಜೆ 4.30ಕ್ಕೆ ನಡೆಯಲಿರುವ ದ್ವಿತೀಯ ಸಭೆಯಲ್ಲಿ "ಲಿಂಗಾಯತ ಧರ್ಮ, ಶರಣ ತತ್ವಗಳ ಅನುಷ್ಠಾನದಲ್ಲಿ ಮಹಿಳಾ ಮಠಾಧೀಶರ ಪಾತ್ರ"ದ ಕುರಿತು ಡಾ. ಗಂಗಾಂಬಿಕಾ ತಾಯಿ, ಬಸವಾಂಜಲಿ ತಾಯಿ ಬಸವಗೀತಾ ತಾಯಿ ವಿಷಯ ಮಂಡಿಸಲಿದ್ದಾರೆ. 28ರಂದು ಬೆಳಿಗ್ಗೆ 10 ಗಂಟೆಗೆ ತೃತೀಯ ಸಭೆ ನಡೆಯಲಿದ್ದು, "ಲಿಂಗಾಯತ ನಿಜಾಚರಣೆ ಅನುಷ್ಠಾನಗೊಳಿಸುವಲ್ಲಿ ಮಹಿಳೆಯರ ಪಾತ್ರ"ದ ಕುರಿತು ಪ್ರೇಮಕ್ಕ ಅಂಗಡಿ, ಸವಿತಕ್ಕ ನಡಕಟ್ಟಿ ವಿಷಯ ಮಂಡಿಸಲಿದ್ದಾರೆ ಎಂದು ಹೇಳಿದರು.

ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್:ಮಧ್ಯಾಹ್ನ 12.30ಕ್ಕೆ ಚತುರ್ಥ ಸಭೆಯಲ್ಲಿ "ವಚನ ಸಾಹಿತ್ಯ ಸಂಶೋಧನೆ, ಪ್ರಸಾರ ಮತ್ತು ಪ್ರಚಾರದಲ್ಲಿ ಲಿಂಗಾಯತ ಮಹಿಳಾ ಸಾಹಿತಿಗಳ ಪಾತ್ರ"ದ ಬಗ್ಗೆ ಮೈಸೂರಿನ ಪ್ರೊ. ಎಂ.ಎಸ್. ಆಶಾದೇವಿ, ವಿಜಯಪುರದ ಪ್ರೊ. ವಿಜಯಶ್ರೀ ಸಬರದ, ಪ್ರೊ.‌ವಿಜಯಾದೇವಿ ಭದ್ರಾವತಿ ವಿಷಯ ಮಂಡಿಸಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜಾಗತಿಕ ಲಿಂಗಾಯತ ಮಹಿಳಾ ಘಟಕದ ಮಹಾರಾಷ್ಟ್ರ ಅಧ್ಯಕ್ಷೆ ಸರಳಾತಾಯಿ ಪಾಟೀಲ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸಿಮರು, ರಾಮ ನಮ್ಮ ಮನಸ್ಸಿನಲ್ಲಿಯೇ ಇದ್ದಾನೆ: ಈಶ್ವರ್ ಖಂಡ್ರೆ

ABOUT THE AUTHOR

...view details