ಕರ್ನಾಟಕ

karnataka

ETV Bharat / state

ಇಂದಿನಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಕರ್ಷಕ ಡ್ರೋನ್ ಶೋ - Mysuru Dasara Drone Show

ಮೈಸೂರು ದಸರಾ 4ನೇ ದಿನಕ್ಕೆ ಕಾಲಿಟ್ಟಿದೆ. ಟಾಂಗಾ ಸವಾರಿ, ಪಾರಂಪರಿಕ ನಡಿಗೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದರ ನಡುವೆ ಇಂದಿನಿಂದ ಡ್ರೋನ್​ ಶೋ ನಡೆಯಲಿದೆ.

By ETV Bharat Karnataka Team

Published : 4 hours ago

ಒಟ್ಟು 4 ದಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಡ್ರೋನ್ ಪ್ರದರ್ಶನ
ವಿದ್ಯುದ್ದೀಪಾಲಂಕಾರದಿಂದ ಜಗಮಗಿಸುತ್ತಿರುವ ಮೈಸೂರು ಅರಮನೆ (ETV Bharat)

ಮೈಸೂರು:ವಿಶ್ವಪ್ರಸಿದ್ಧ ಮೈಸೂರು ದಸರಾದಲ್ಲಿ ಇಂದಿನಿಂದ ಡ್ರೋನ್​​ ಪ್ರದರ್ಶನ ಆರಂಭವಾಗಲಿದ್ದು, ಉಚಿತವಾಗಿ ವೀಕ್ಷಿಸಬಹುದು. ಅಕ್ಟೋಬರ್​​ 6, 7, 11, ಮತ್ತು 12ರಂದು ಡ್ರೋನ್​ ಶೋ ಆಯೋಜಿಸಲಾಗಿದ್ದು, ದಿನಾಂಕ 6 ಮತ್ತು 7ರಂದು ಶೋ ವೀಕ್ಷಣೆಗೆ ಉಚಿತ ಮತ್ತು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಸೆಸ್ಕ್‌ ತಾಂತ್ರಿಕ ವಿಭಾಗದ ನಿರ್ದೇಶಕ ಮುನಿ ಗೋಪಾಲರಾಜು ಮಾಹಿತಿ ನೀಡಿದ್ದಾರೆ.

ನಗರದ ಸೆಸ್ಕ್‌ ಪ್ರಧಾನ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮುಖ್ಯಮಂತ್ರಿಗಳ ಸಲಹೆಯಂತೆ ಸ್ಥಳೀಯ ವೃತ್ತಿಪರರಿಂದ ಹೆಚ್ಚು ವಿನ್ಯಾಸ ಹಾಗೂ ಆಕರ್ಷಕ ರೀತಿಯಲ್ಲಿ ದಸರಾ ದೀಪಾಲಂಕಾರ ಮಾಡಲಾಗಿದೆ. ಪ್ರತಿಯೊಂದು ರಸ್ತೆ ಹಾಗೂ ವೃತ್ತಗಳಲ್ಲೂ ಹೆಚ್ಚು ಮುತುವರ್ಜಿಯಿಂದ ದೀಪಾಲಂಕಾರ ಮಾಡಲಾಗಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಾರಿ ದಸರಾ ಡ್ರೋನ್ ಶೋ‌ ವಿಶೇಷ ಅನುಭವ ನೀಡಲಿದೆ. ಬನ್ನಿಮಂಟಪದ‌ ಪಂಜಿನ ಕವಾಯತು ಮೈದಾನದಲ್ಲಿ ಅ.6 ಮತ್ತು 7 (ಇಂದು ಮತ್ತು ನಾಳೆ)ರಂದು ನಡೆಯಲಿರುವ ಡ್ರೋನ್​ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಹಾಗೆಯೇ, ಅ.11 ಹಾಗೂ 12ರಂದು ನಡೆಯುವ ಡ್ರೋನ್​​ ಶೋ ವೀಕ್ಷಣೆಗೆ ಪಾಸ್​ ವ್ಯವಸ್ಥೆ ಇರಲಿದೆ. ಮೊದಲ ಬಾರಿಗೆ ಈ ಮಟ್ಟದಲ್ಲಿ ಮಾಡಲಾಗಿರುವ ಡ್ರೋನ್‌ ಶೋನಲ್ಲಿ 1,500 ಸಾವಿರ ಡ್ರೋನ್‌ ಆಗಸದಲ್ಲಿ ಬೆಳಕಿನ‌ ಚಿತ್ತಾರ ಮೂಡಿಸಲಿದೆ" ಎಂದು ಅವರು ತಿಳಿಸಿದರು.

ಇನ್ನು ದೀಪಾಲಂಕಾರದ ಜೊತೆಗೆ ಮೊದಲ ಬಾರಿಗೆ ಸೆಸ್ಕ್‌ ವತಿಯಿಂದ ವಿದ್ಯುತ್‌ ರಥ ನಿರ್ಮಿಸಲಾಗಿದ್ದು, ಈ ರಥ ನಗರದ ಹಲವೆಡೆಗಳಲ್ಲಿ ಸಂಚರಿಸಲಿದೆ. ಇದರಲ್ಲಿ ವಿದ್ಯುತ್ ಸುರಕ್ಷತೆ, ಸೋಲಾರ್​ ಬಳಕೆ ಹಾಗೂ ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ.

ಇದಕ್ಕೂ ಮುನ್ನ ಮಾತನಾಡಿದ ದಸರಾ ದೀಪಾಲಂಕಾರ ಉಪ ಸಮಿತಿ(ಅಧಿಕಾರೇತರ)ಅಧ್ಯಕ್ಷ ಸೈಯ್ಯದ್​​​​ ಇಕ್ಬಾಲ್​, "ಉಪ ಸಮಿತಿಯ ಸದಸ್ಯರ ಹೆಸರುಗಳು ಪ್ರಕಟವಾಗುತ್ತಿದ್ದಂತೆ ಎಲ್ಲರೂ ತಕ್ಷಣ ಕಾರ್ಯಪ್ರವೃತ್ತರಾಗಿದ್ದೇವೆ. ಸೆಸ್ಕ್‌ ವತಿಯಿಂದ ಈ ಬಾರಿಯ ದಸರಾದಲ್ಲಿ ಉತ್ತಮ ರೀತಿಯಲ್ಲಿ ದೀಪಾಲಂಕಾರ ಮಾಡಲಾಗಿದೆ" ಎಂದರು.

ಸುದ್ದಿಗೋಷ್ಠಿಯಲ್ಲಿ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ, ಅಧೀಕ್ಷಕ ಇಂಜಿನಿಯರ್‌ ಸುನೀಲ್‌ ಸೇರಿದಂತೆ ಸೆಸ್ಕ್‌ ಅಧಿಕಾರಿಗಳು, ಉಪ ಸಮಿತಿ ಸದಸ್ಯರು ಇದ್ದರು.

ವಿದ್ಯುತ್​ ದೀಪಗಳನ್ನು ಮುಟ್ಟದಿರಿ: "ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸಾಕಷ್ಟು ಮಳೆಯಾಗುತ್ತಿದೆ. ಇದರಿಂದಾಗಿ ಕೆಲವೊಮ್ಮೆ ವಿದ್ಯುತ್​ ಸೋರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ದೀಪಾಲಂಕಾರ ವೀಕ್ಷಿಸುವ ವೇಳೆ ಹಾಗೂ ಫೋಟೋಗಳನ್ನು ತೆಗೆಸಿಕೊಳ್ಳುವ ಸಂದರ್ಭದಲ್ಲಿ ವಿದ್ಯುತ್‌ ದೀಪಗಳನ್ನು ಮುಟ್ಟದಂತೆ ಎಚ್ಚರವಹಿಸಬೇಕೆಂದು" ಎಂದು ಸೆಸ್ಕ್‌ ತಾಂತ್ರಿಕ ವಿಭಾಗದ ನಿರ್ದೇಶಕ ಮುನಿ ಗೋಪಾಲರಾಜು ಮನವಿ ಮಾಡಿದರು.

ಯೋಗ ದಸರಾ:"ಮೈಸೂರಿನ ಯೋಗ ಕಾರ್ಯಕ್ರಮ ವಿಶ್ವ ಪ್ರಸಿದ್ಧಿ ಪಡೆದಿದ್ದು, ಎಲ್ಲ ವಯೋಮಾನದವರೂ ತೊಡಗಿಸಿಕೊಳ್ಳಬಹುದು" ಎಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಎಸ್​.ಶ್ರೀವತ್ಸ ಹೇಳಿದರು.

ನಿನ್ನೆ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಯೋಗ ದಸರಾ ಉಪ ಸಮಿತಿ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಶಾಸಕರು, "ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದಲ್ಲಿ ಹೆಸರು ಮಾಡಿದವರು ಮೈಸೂರಿನಲ್ಲಿ ಯೋಗ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಯಾವುದೇ ವಯೋಮಾನದವರು ಕೂಡಾ ಯೋಗಾಭ್ಯಾಸ ಮಾಡಬಹುದು. ಆರೋಗ್ಯದ ಕಡೆಗೆ ಗಮನ ಕೊಡಬೇಕೆಂಬುದರ ಸಲುವಾಗಿ ಮೈಸೂರಿನಲ್ಲಿ ಯೋಗ ದಸರಾ ಪ್ರಾರಂಭಿಸಲಾಗಿದೆ. ಯೋಗ ದಸರಾ ಗಿನ್ನಿಸ್​​​ ಮಟ್ಟದಲ್ಲಿ ದಾಖಲೆ ಮಾಡಬೇಕೆಂದು ಎಂದು‌ ಹೇಳಿದ್ದೆ. ಆದರೆ, ಕಾರಣಾಂತರಗಳಿಂದ ಆಗಲಿಲ್ಲ" ಎಂದರು.

ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸೇರಿದಂತೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿ ಕಲಾವಿದರ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಶನಿವಾರ ಯೋಗಾಪಟುಗಳಿಗೆ ಯೋಗಾಸನ ಸ್ಪರ್ಧೆ ಏರ್ಪಡಿಸಿದ್ದು 2,000 ಸಾವಿರಕ್ಕೂ ಅಧಿಕ ಯೋಗಪಟುಗಳು ಭಾಗವಹಿಸಿದ್ದರು. ಇದರಲ್ಲಿ ವಿಶೇಷಚೇತನ ಮಕ್ಕಳು, ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಆಸನಗಳನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಯೋಗ ದಸರಾ ಉಪ ಸಮಿತಿಯ ಅಧ್ಯಕ್ಷ ಎಂ.ಮಹೇಶ್, ಉಪಾಧ್ಯಕ್ಷ ಜಮೀರ್ ಅಹ್ಮದ್, ಪ್ರಕಾಶ್, ಸಿದ್ದರಾಜು, ಚಿಕ್ಕಸ್ವಾಮಿ, ಸದಸ್ಯರಾದ ಕೆ.ವಿ.ಭರತ್ ರಾಜ್, ಎಚ್.ಯೋಗೇಶ್, ಪ್ರಭು, ಹರೀಶ್, ಎಂ.ಬಿ.ವಿಕೇಶ್ ಶರ್ಮ, ಪುಟ್ಟಸ್ವಾಮಿ, ಶ್ರೀಕಂಠ, ಜಗದೀಶ್, ಸಮಿತಿಯ ಉಪ ವಿಶೇಷಾಧಿಕಾರಿ ರಮ್ಯ, ಸಮಿತಿಯ ಅಧಿಕಾರಿಗಳಾದ ಡಾ.ಪುಷ್ಪ ಹಾಜರಿದ್ದರು‌.

ಇದನ್ನೂ ಓದಿ:ಮೈಸೂರು ದಸರಾ‌: ಪಾರಂಪರಿಕ ಉಡುಗೆಯಲ್ಲಿ 50 ಜೋಡಿಗಳಿಂದ ಟಾಂಗಾ ಸವಾರಿ - Tanga Raid In Mysuru Dasara

ABOUT THE AUTHOR

...view details