ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / state

ಆದಿ ಉಡುಪಿ ಎಪಿಎಂಸಿಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ ಆರೋಪ; 12 ಟನ್ ಬೆಳ್ಳುಳ್ಳಿ ವಶಕ್ಕೆ - Official Raid Adi Udupi APMC

ರಾಸಾಯನಿಕ ಮಿಶ್ರಿತ ಚೀನಾ ಬೆಳ್ಳುಳ್ಳಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಂದು ಆದಿ ಉಡುಪಿ ಎಪಿಎಂಸಿ ಮಾರುಕಟ್ಟೆಯ ಮೇಲೆ ನಗರಸಭಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

APMC
ಆದಿ ಉಡುಪಿ ಎಪಿಎಂಸಿ (ETV Bharat)

ಉಡುಪಿ:ನಗರದ ಆದಿ ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ನಿಷೇಧಿತ ಚೀನಾ ಬೆಳ್ಳುಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದು ಉಡುಪಿ ನಗರಸಭಾ ಅಧಿಕಾರಿಗಳು ದಾಳಿ ನಡೆಸಿ, ಸುಮಾರು 12 ಟನ್​ ಬೆಳ್ಳುಳ್ಳಿ ವಶಕ್ಕೆ ಪಡೆದರು.

ರಾಸಾಯನಿಕ ಮಿಶ್ರಿತ ಚೀನಾ ಬೆಳ್ಳುಳ್ಳಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ನಗರಸಭಾ ಪೌರಾಯುಕ್ತ ರಾಯಪ್ಪ ನೇತೃತ್ವದ ತಂಡ ಮಾರುಕಟ್ಟೆಗೆ ಆಗಮಿಸಿ, ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಎಪಿಎಂಸಿ ಅಧಿಕಾರಿಗಳು ಕೂಡ ಹಾಜರಿದ್ದರು. ಬಳಿಕ ವ್ಯಾಪಾರಸ್ಥರಿಂದ ಮಾಹಿತಿ ಪಡೆದು, ಮಾರಾಟಕ್ಕೆ ತಂದಿದ್ದ ರಾಸಾಯನಿಕ ಮಿಶ್ರಿತ ಚೀನಾ ಬೆಳ್ಳುಳ್ಳಿ ಎಂಬ ಶಂಕೆಯ ಮೇರೆಗೆ ಸುಮಾರು 12 ಟನ್ ಬೆಳ್ಳುಳ್ಳಿಯನ್ನು ವಶಕ್ಕೆ ಪಡೆದರು.

ನಗರಸಭಾ ಪೌರಾಯುಕ್ತ ರಾಯಪ್ಪ ಹೇಳಿಕೆ (ETV Bharat)

"ಎಪಿಎಂಸಿ ಮಾರುಕಟ್ಟೆಗೆ ಚೀನಾ ಬೆಳ್ಳುಳ್ಳಿ ಬಂದಿದೆ ಎಂಬ ಮಾಹಿತಿ ಬಂದ ಕೂಡಲೇ ಆಗಮಿಸಿ, ಪರಿಶೀಲನೆ ಮಾಡಿದ್ದೇವೆ. ಇಲ್ಲಿಗೆ ಬಂದ ಎಲ್ಲ ಬೆಳ್ಳುಳ್ಳಿಗಳನ್ನು ವಶಪಡಿಸಿಕೊಂಡು, ಅದರ ಮಾದರಿಯನ್ನು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿನ ವರದಿಯಂತೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು. ಉಡುಪಿ ನಗರಸಭೆ ವ್ಯಾಪ್ತಿಯ ಮಾರುಕಟ್ಟೆ, ಎಪಿಎಂಸಿಯಲ್ಲಿ ಯಾವುದೇ ಕಾರಣಕ್ಕೂ ಇಂತಹ ರಾಸಾಯನಿಕ ಮಿಶ್ರಿತ ಆಹಾರ ಪದಾರ್ಥ, ತರಕಾರಿ, ಬೆಳ್ಳುಳ್ಳಿ ಮಾರಾಟ ಮಾಡಲು ಅವಕಾಶ ನೀಡಲ್ಲ. ಅಂತಹ ತರಕಾರಿಗಳನ್ನು ಮಾರಾಟ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಅಲ್ಲದೆ, ಅವುಗಳ ಬಗ್ಗೆ ನಿಗಾ ಇಡಲು ಸಿಬ್ಬಂದಿಯನ್ನೂ ಕೂಡ ನೇಮಿಸಲಾಗುವುದು" ಎಂದು ಪೌರಾಯುಕ್ತ ರಾಯಪ್ಪ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಶಿವಮೊಗ್ಗ: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ, ಅಧಿಕಾರಿಗಳಿಂದ ದಾಳಿ - Chinese Garlic

ABOUT THE AUTHOR

...view details