ಕರ್ನಾಟಕ

karnataka

ತುಂಗಭದ್ರಾ ಕ್ರಸ್ಟ್ ಗೇಟ್ ಚೈನ್ ಡಿಲಿಂಕ್​: ಸಚಿವ ಎಂ.ಬಿ. ಪಾಟೀಲ್​ ಹೇಳಿದ್ದೇನು? - M B Patil

By ETV Bharat Karnataka Team

Published : Aug 11, 2024, 3:32 PM IST

Updated : Aug 11, 2024, 5:05 PM IST

ತುಂಗಭದ್ರಾ ಕ್ರಸ್ಟ್ ಗೇಟ್ ಚೈನ್ ಡಿಲಿಂಕ್​ ಯಾವ ಕಾರಣಕ್ಕಾಗಿ ಆಯ್ತು ಹಾಗೂ ಟೆಕ್ನಿಕಲ್ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ಸಚಿವ ಎಂ.ಬಿ.ಪಾಟೀಲ್‌
ಸಚಿವ ಎಂ.ಬಿ.ಪಾಟೀಲ್‌ (ETV Bharat)

ಸಚಿವ ಎಂ.ಬಿ. ಪಾಟೀಲ್​ (ETV Bharat)

ವಿಜಯಪುರ: ಯಾವ ಕಾರಣಕ್ಕೆ ತುಂಗಭದ್ರಾ ಜಲಾಶಯದ 19ನೇ ತುಂಗಭದ್ರಾ ಕ್ರಸ್ಟ್ ಗೇಟ್ ಚೈನ್ ಕಟ್​ ಆಗಿದೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ. ಶಿವಕುಮಾರ್ ಅವರು ತಿಳಿದುಕೊಳ್ಳುತ್ತಾರೆ. ಇದು ಯಾವ ಕಾರಣಕ್ಕಾಗಿ ಆಯ್ತು ಹಾಗೂ ಟೆಕ್ನಿಕಲ್ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಡಿ. ಕೆ. ಶಿವಕುಮಾರ್ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವಲಿ ಬಳಿ ಟಿಬಿ ಡ್ಯಾಂ ಸಮಾನಾಂತರ ಜಲಾಶಯ ನಿರ್ಮಿಸಿದ್ದರೆ ನೀರು ಪೋಲು ಆಗುತ್ತಿರಲಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ನವಲಿ ‌ಸಮಾನಾಂತರ ಜಲಾಶಯ ನಿರ್ಮಾಣ ಅಂತರ್​ ರಾಜ್ಯ ವಿವಾದಕ್ಕೊಳಪಟ್ಟಿದೆ. ಟಿಬಿ ಬೋರ್ಡ್​ನಲ್ಲಿ ಎರಡು ರಾಜ್ಯಗಳ ಚರ್ಚೆಯೂ ಆಗಬೇಕಾಗುತ್ತದೆ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತೆ. ನಾನು ಜಲಸಂಪನ್ಮೂಲ ಸಚಿವರೊಂದಿಗೆ ಮಾತನಾಡುತ್ತೇನೆ. ನವಲಿ ಬಳಿ ಟಿಬಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಒತ್ತು ಕೊಡಬೇಕು ಅಂತ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಮಾತನಾಡುವೆ ಎಂದು ತಿಳಿಸಿದರು.

ನಿರ್ವಹಣೆ ಕೊರತೆಯಿಂದ ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಚೈನ್​ ಕಟ್​ ಆಗಿದೆ ಎಂಬ ಆರೋಪದ ಬಗ್ಗೆ ಮಾತನಾಡಿ, ಸುಮ್ಮನೆ ಆರೋಪ ಮಾಡೋದು ಸರಿಯಲ್ಲ. ಏನಾಗಿದೆ ಅಂತ ನೋಡೋಣ. ಸದ್ಯ ಯಾಕೆ ಹೀಗಾಗಿದೆ ಅಂತ ಅರ್ಥ ಮಾಡಿಕೊಳ್ಳೋಣ. ಟಿಬಿ ಡ್ಯಾಂ ಘಟನೆಯಿಂದ ಇತರೆ ಜಲಾಶಯಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಸರ್ಕಾರ ಮತ್ತು ಅಧಿಕಾರಿಗಳ ಜವಾಬ್ದಾರಿ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ನನ್ನ ಪ್ರಕಾರ ಬಿಜೆಪಿಯಲ್ಲಿ 15 ರಿಂದ 20 ಬಣಗಳಿವೆ:ಶಾಸಕರಾದ ರಮೇಶ್​ ಜಾರಕಿಹೊಳಿ, ಬಸನಗೌಡ ಪಾಟೀಲ್​ ಯತ್ನಾಳ್ ಅವರ ನೇತೃತ್ವದಲ್ಲಿ ಮತ್ತೊಂದು ಪಾದಯಾತ್ರೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ಹದಿನೈದಿಪ್ಪತ್ತು ಬಣ ಇವೆ. ಇಪ್ಪತ್ತೂ ಬಣದಿಂದ ಒಂದೊಂದು ಪಾದಯಾತ್ರೆ ಮಾಡಲಿ. ವಿಜಯೇಂದ್ರ, ಬಿಎಸ್​ವೈ ಒಂದು ಬಣ, ಆರ್.ಅಶೋಕ್ ಅವರದೊಂದು ಬಣ, ಅಶ್ವತ್ಥ್​ ನಾರಾಯಣ ಅವರದೊಂದು ಬಣ, ರಮೇಶ್​ ಜಾರಕಿಹೊಳಿ, ಯತ್ನಾಳ್, ಬಿ.ಎಲ್. ಸಂತೋಷ ಒಂದು ಬಣ ಹೀಗೆ ಬಹಳಷ್ಟು ಬಣಗಳಿವೆ. ನನ್ನ ಪ್ರಕಾರ 15 ರಿಂದ 20 ಬಣಗಳಿವೆ ಎಂದರು.

ವಿಜಯಪುರ ಜಿಲ್ಲೆಯಲ್ಲಿಯೂ ಕೈಗಾರಿಕೋದ್ಯಮ ಅಭಿವೃದ್ಧಿ ಮತ್ತು ಈ ಹಿಂದೆ ಕೈಗಾರಿಕೆಗಳಿಗಾಗಿ ಭೂಸ್ವಾಧೀನ ಪಡಿಸಿಕೊಂಡ ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಿ ಅಭಿವೃದ್ಧಿಪಡಿಸಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೂ ಒತ್ತು ನೀಡುತ್ತಿದ್ದೇವೆ. ಉದ್ದಿಮೆಗಳ ಪ್ರಾರಂಭ ವಿಚಾರವಾಗಿಯೂ ಮಾತುಕತೆಗಳು ನಡೆದಿವೆ. ವಿಜಯಪುರ ಜಿಲ್ಲೆ ಅಭಿವೃದ್ಧಿಯ ದೃಷ್ಟಿಯಿಂದ ಉದ್ದಿಮೆಗಳು ಬರಬೇಕು. ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶ ಸಿಗಬೇಕು. ಆ ಪ್ರಯತ್ನ ನಡೆದಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ:ತುಂಗಭದ್ರಾ ಡ್ಯಾಂ ಗೇಟ್ ಚೈನ್ ಲಿಂಕ್ ಕಟ್: 2 ಲಕ್ಷ ಕ್ಯೂಸೆಕ್​ ನೀರು ಹರಿಬಿಡುವ ಸಾಧ್ಯತೆ - Tungabhadra Dam

Last Updated : Aug 11, 2024, 5:05 PM IST

ABOUT THE AUTHOR

...view details