ಕರ್ನಾಟಕ

karnataka

ಮೂಡಿಗೆರೆ ಆನೆ ಕಾರಿಡಾರ್​​ನಲ್ಲಿ ವಾಹನಗಳ ರ‍್ಯಾಲಿ: ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ - Vehicle Rally In Elephant Corridor

By ETV Bharat Karnataka Team

Published : Sep 2, 2024, 6:49 AM IST

ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ ವಾಹನಗಳ ರ‍್ಯಾಲಿ ನಡೆಸಿರುವ ಆರೋಪ ಸಂಬಂಧ ತನಿಖೆ ನಡೆಸಿ ಕ್ರಮ ವಹಿಸುವಂತೆ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ishwar khandre
ಈಶ್ವರ್ ಖಂಡ್ರೆ (ETV Bharat)

ಬೆಂಗಳೂರು:ಚಿಕ್ಕಮಗಳೂರು ಜಿಲ್ಲೆಯಮೂಡಿಗೆರೆಯ ಬೈರಾಪುರ ಹೊಸಕೆರೆಯ ಆನೆ ಕಾರಿಡಾರ್​​ ವ್ಯಾಪ್ತಿಯ ಪ್ರದೇಶದಲ್ಲಿ ಫೋರ್ ವ್ಹೀಲರ್ ವಾಹನಗಳ ರ‍್ಯಾಲಿ ನಡೆಸಿರುವ ಸಂಬಂಧ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ತಮ್ಮ ಟಿಪ್ಪಣಿಯಲ್ಲಿ ಸಚಿವರು, ಪಶ್ಚಿಮಘಟ್ಟ ಮತ್ತು ಅರಣ್ಯ ಮೋಜು, ಮಸ್ತಿಯ ತಾಣಗಳಲ್ಲ. ಈ ಪ್ರದೇಶದಲ್ಲಿ ನೂರಾರು ಪ್ರಭೇದದ ಖಗ, ಮೃಗ, ಕೀಟ, ಸಸ್ಯ ಸಂಕುಲಗಳಿವೆ. ಇವುಗಳೆಲ್ಲದರ ಸಂರಕ್ಷಣೆಯ ಹೊಣೆ ಅರಣ್ಯ ಇಲಾಖೆಯ ಮೇಲಿದೆ. ಆದರೆ, ಆಗಸ್ಟ್‌ 31ರಂದು ಮೂಡಿಗೆರೆ ತಾಲೂಕು ಬಾಳೂರು ಸಮೀಪದ ಬೈರಾಪುರ ಹೊಸಕೆರೆಯ 9 ಗುಡ್ಡಗಳ ವ್ಯಾಪ್ತಿಯಲ್ಲಿ, ಅದೂ ಆನೆ ಕಾರಿಡಾರ್ ಇರುವ ಕಾಡಿನೊಳಗೆ ಅಕ್ರಮವಾಗಿ ಪ್ರವೇಶಿಸಿ, ಫೋರ್ ವ್ಹೀಲ್ ಡ್ರೈವ್ ವಾಹನಗಳ ರ‍್ಯಾಲಿ ನಡೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.

ರ‍್ಯಾಲಿಯಲ್ಲಿ ಸುಮಾರು 52 ವಾಹನಗಳು ಭಾಗಿಯಾಗಿದ್ದವು ಎಂಬ ಮಾಹಿತಿ ಇದೆ. ಇದರಿಂದ ಪರಿಸರದ ಹಾನಿಯ ಬಗ್ಗೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ಪರಿಶೀಲನೆ ನಡೆಸಬೇಕು. ಅರಣ್ಯದೊಳಗೆ ರ‍್ಯಾಲಿ ನಡೆದಿದ್ದಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಬೇಕು. ಜೊತೆಗೆ, ಪರಿಸರ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಸಾರ್ವಜನಿಕರ ನೆಮ್ಮದಿ ಭಂಗ ಪ್ರಕರಣ ದಾಖಲಿಸಲು ತುರ್ತು ಕ್ರಮ ವಹಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ರೈಲ್ವೆ ಬ್ಯಾರಿಕೇಡ್​ನಲ್ಲಿ ಸಿಲುಕಿದ ಸಲಗ: ಒದ್ದಾಡುತ್ತಿದ್ದ ಆನೆ ಕೊನೆಗೂ ಬಚಾವ್​- ವಿಡಿಯೋ - elephant rescue

ABOUT THE AUTHOR

...view details