ಕರ್ನಾಟಕ

karnataka

ETV Bharat / state

ದೇಶದಲ್ಲೇ ಮೊದಲು! ಮಾಲ್‍ಗಳಲ್ಲಿ 'ಆಹಾರ ಪದಾರ್ಥಗಳ ಕಲಬೆರಕೆ' ಪತ್ತೆಗೆ ಪರೀಕ್ಷಾ ಕೇಂದ್ರ

ಬೆಂಗಳೂರಿನ ಮಾಲ್ ಆಫ್ ಏಷ್ಯಾದಲ್ಲಿ ಆಹಾರ ತಪಾಸಣಾ ರ‍್ಯಾಪಿಡ್ ಟೆಸ್ಟಿಂಗ್​ ಕಿಟ್ಸ್​ಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಚಾಲನೆ ನೀಡಿದರು.

dinesh-gundu-rao
ಆಹಾರ ತಪಾಸಣಾ ರ‍್ಯಾಪಿಡ್ ಟೆಸ್ಟಿಂಗ್​ ಕಿಟ್ಸ್​ಗಳಿಗೆ ಚಾಲನೆ ನೀಡಿದ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ (ETV Bharat)

By ETV Bharat Karnataka Team

Published : 5 hours ago

Updated : 5 hours ago

ಬೆಂಗಳೂರು:ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ವಿಚಾರಕ್ಕಾಗಿ ಇನ್ಮು ಮುಂದೆ ಸಾರ್ವಜನಿಕರೇ ಖುದ್ದು ಫುಡ್ ಕೋರ್ಟ್​ಗಳಲ್ಲಿ ಆಹಾರ ತಪಾಸಣೆ ಮಾಡಿಕೊಳ್ಳಬಹುದು. ಬೆಂಗಳೂರಿನ ಮಾಲ್ ಆಫ್ ಏಷ್ಯಾದಲ್ಲಿ ಇಂದು ಆಹಾರ ತಪಾಸಣಾ ರ‍್ಯಾಪಿಡ್ ಟೆಸ್ಟಿಂಗ್ ಕಿಟ್ಸ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.

ಬಳಿಕ ಸಚಿವರು, ಆಹಾರ ಪದಾರ್ಥಗಳ ಟೆಸ್ಟಿಂಗ್​ಗೆ ಮುಂದಾಗುವ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಒದಗಿಸುವ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಮಾತನಾಡಿದರು (ETV Bharat)

ಸಾರ್ವಜನಿಕರು ತ್ವರಿತಗತಿಯಲ್ಲಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳಬಹುದು. ಆರಂಭಿಕ ಹಂತದಲ್ಲಿ ಬೆಂಗಳೂರಿನ 10 ಮಾಲ್​ಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಆಹಾರ ಪದಾರ್ಥಗಳ ಕಲಬೆರಕೆ ಪತ್ತೆ ಹಚ್ಚುವ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಈ ಮಾಲ್‍ಗಳಲ್ಲಿ ಪ್ರತಿದಿನ ಬಳಸುವ ಆಹಾರ ಪದಾರ್ಥಗಳಾದ ಬೇಳೆ ಕಾಳುಗಳು, ಸಕ್ಕರೆ, ಅಡುಗೆ ಎಣ್ಣೆ, ಟೀ ಪುಡಿ, ಉಪ್ಪು, ಹಾಲು ಮತ್ತು ಹಾಲಿನ ಉತ್ಪನ್ನಗಳಾದ ತುಪ್ಪ, ಪನೀರ್, ಬೆಣ್ಣೆ, ತರಕಾರಿಗಳು, ಧನಿಯಾ ಪುಡಿ, ಕುಡಿಯುವ ನೀರು ಇತ್ಯಾದಿ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ತ್ವರಿತ ಪರೀಕ್ಷೆಗಳಿಂದ ಖಚಿತಪಡಿಸಿಕೊಳ್ಳಬಹುದು ಎಂದರು.

ಮಾಲ್‍ಗಳಲ್ಲಿ 'ಆಹಾರ ಪದಾರ್ಥಗಳ ಕಲಬೆರಕೆ' ಪತ್ತೆಗೆ ಪರೀಕ್ಷಾ ಕೇಂದ್ರ (ETV Bharat)

ಅಲ್ಲದೇ, ಬೆಂಗಳೂರಿನ ತರಕಾರಿ ಮತ್ತು ಆಹಾರ ಧಾನ್ಯಗಳನ್ನು ಮಾರಾಟ ಮಾಡುವ ಮೋರ್, ರಿಲಾಯನ್ಸ್ ಪ್ರೆಶ್​ ಸೇರಿದಂತೆ ಸೂಪರ್ ಮಾರ್ಕೆಟ್​ಗಳಲ್ಲೂ ಫುಡ್ ಟೆಸ್ಟಿಂಗ್ ಕಿಟ್​ಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ ಸಚಿವರು, ಇದರಿಂದ ಹಣ್ಣು, ತರಕಾರಿಗಳು ಹಾಗೂ ಆಹಾರ ಧಾನ್ಯಗಳ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಆಹಾರ ಗುಣಮಟ್ಟದ ವಿಚಾರದಲ್ಲಿ ಇತ್ತೀಚಿಗೆ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಆಹಾರ ತಯಾರಕರಿಗೆ ತೊಂದರೆ ಕೊಡುವ ಉದ್ದೇಶದಿಂದಲ್ಲ. ಬದಲಿಗೆ ನಮ್ಮ ಜನರಲ್ಲಿ ಅರಿವು ಮೂಡಿಸುವುದು ನಮ್ಮ ಮುಖ್ಯ ಉದ್ದೇಶ.‌ ಶುದ್ಧವಾದ ಆಹಾರ ಸೇವನೆಯಿಂದ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಹೀಗಾಗಿ ಆಹಾರ ಕಲಬೆರಕೆಯ ನಿರ್ಮೂಲನೆಗಾಗಿ ಕೈ ಜೋಡಿಸುವಂತೆ ಇದೇ ವೇಳೆ ಸಚಿವ ಗುಂಡೂರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮಾಲ್‍ಗಳಲ್ಲಿ 'ಆಹಾರ ಪದಾರ್ಥಗಳ ಕಲಬೆರಕೆ' ಪತ್ತೆಗೆ ಪರೀಕ್ಷಾ ಕೇಂದ್ರ (ETV Bharat)

ತಿರುಪತಿ ಲಡ್ಡು ಪ್ರಕರಣದ ಹಿನ್ನೆಲೆಯಲ್ಲಿ ತುಪ್ಪದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗಳು ತಲೆದೋರಿದ್ದವು. ದನದ ಕೊಬ್ಬಿನಾಂಶ ಬಳಸುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಪತಂಜಲಿ ಸೇರಿದಂತೆ 230 ಬಗೆಯ ತುಪ್ಪಗಳನ್ನು ಪರೀಕ್ಷಿಸಲಾಗಿದ್ದು, ಯಾವುದೇ ತುಪ್ಪ ಅನ್ ಸೇಫ್ ಎಂದು ಪತ್ತೆಯಾಗಿಲ್ಲ. ಅಲ್ಲದೇ ದನದ ಮಾಂಸದ ಕೊಬ್ಬಿನಾಂಶ ತುಪ್ಪಗಳಲ್ಲಿ ಪತ್ತೆಯಾಗಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನ ಯಾವ ಮಾಲ್​ಗಳಲ್ಲಿದೆ ರ‍್ಯಾಪಿಡ್ ಫುಡ್ ಟೆಸ್ಟಿಂಗ್ ಕಿಟ್ಸ್: ವೈಷ್ಣವಿ ಸಫೈರ್ ಸೆಂಟರ್ ತುಮಕೂರು ರಸ್ತೆ, ಎಲಿಮೆಂಟ್ಸ್ ಮಾಲ್ ಥಣಿಸಂದ್ರ, ಫೀನಿಕ್ಸ್ ಮಾಲ್ ಆಫ್ ಏಷ್ಯಾ ಬಳ್ಳಾರಿ ರಸ್ತೆ, ಮೀನಾಕ್ಷಿ ಮಾಲ್ ಬನ್ನೇರುಘಟ್ಟ ರಸ್ತೆ, ಶೋಭಾ ಮಾಲ್ ಚರ್ಚ್ ಸ್ಟ್ರೀಟ್, ಸೆಂಟ್ರಲ್ ಮಾಲ್ ಬೆಳ್ಳಂದೂರು, ಗೋಪಾಲನ್ ಸಿಗ್ನೇಚರ್ ಮಾಲ್ ಬೆನ್ನಿಗಾನಹಳ್ಳಿ, ನೆಕ್ಸಸ್ ಫೋರಂ ಮಾಲ್ ಕೋರಮಂಗಲ, ಭಾರತೀಯ ಮಾಲ್ ಆಫ್ ಬೆಂಗಳೂರು ಥಣಿಸಂದ್ರ ಹಾಗೂ ಮಾಗಡಿ ರಸ್ತೆಯಲ್ಲಿರುವ ಜಿಟಿ ವರ್ಲ್ಡ್ ಮಾಲ್​ಗಳಲ್ಲಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.

ಇದನ್ನೂ ಓದಿ:ವೈದ್ಯರ ಸುರಕ್ಷತಾ ಕ್ರಮಗಳ ಬಗ್ಗೆ ವರದಿ ನೀಡಲು ಕಾರ್ಯಪಡೆ ರಚಿಸಲು ತೀರ್ಮಾನ: ಸಚಿವ ದಿನೇಶ್ ಗುಂಡೂರಾವ್ - Doctors Safety Measures

Last Updated : 5 hours ago

ABOUT THE AUTHOR

...view details