ಕರ್ನಾಟಕ

karnataka

ETV Bharat / state

ಬಿಜೆಪಿ ಎಂಬ ಮೊಸಳೆಗೆ ಜೆಡಿಎಸ್ ಬಲಿಯಾಗುತ್ತಾ, ದಡ ಸೇರುತ್ತಾ?: ಮೈತ್ರಿ ಟೀಕಿಸಿದ ಮರಿತಿಬ್ಬೇಗೌಡ - ವಿಧಾನ ಪರಿಷತ್ ಕಲಾಪ

ನಮ್ಮ ಪಕ್ಷವನ್ನೂ ಸೇರಿಸಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸುವುದೇ ಬಿಜೆಪಿಯವರ ಕಾರ್ಯತಂತ್ರ ಎಂದು ಜೆಡಿಎಸ್ ರೆಬೆಲ್ ಸದಸ್ಯ ಮರಿತಿಬ್ಬೇಗೌಡ ಹೇಳಿದರು.

JDS rebel member Marithibbe Gowda
ಜೆಡಿಎಸ್ ರೆಬೆಲ್ ಸದಸ್ಯ ಮರಿತಿಬ್ಬೇಗೌಡ

By ETV Bharat Karnataka Team

Published : Feb 29, 2024, 4:12 PM IST

Updated : Feb 29, 2024, 6:36 PM IST

ಜೆಡಿಎಸ್ ರೆಬೆಲ್ ಸದಸ್ಯ ಮರಿತಿಬ್ಬೇಗೌಡ

ಬೆಂಗಳೂರು: "ಬಿಜೆಪಿ ಎನ್ನುವ ದೊಡ್ಡ ಮೊಸಳೆಯ ಮೇಲೆ ಜೆಡಿಎಸ್​ನವರು ಬಹಳ ದೂರ ಸಾಗಿದ್ದಾರೆ. ಅವರು ದಡ ಸೇರ್ತಾರೋ ಇಲ್ಲವೇ ಅದಕ್ಕೆ ಬಲಿಯಾಗ್ತಾರೋ ಎಂಬುದು ಗೊತ್ತಿಲ್ಲ. ಅವರು ಅದರಿಂದ ಪಾರಾಗಲಿ ಅನ್ನೋದು ನನ್ನ ಆಶಯ. ಇಲ್ಲಿಯವರೆಗೆ ಮೊಸಳೆ ಬಿಜೆಪಿ ಎಲ್ಲ ಮೀನುಗಳನ್ನು ತಿಂದ ಉದಾಹರಣೆಗಳೇ ಇದ್ದು, ಬದುಕಿಸಿದ್ದಿಲ್ಲ" ಎಂದು ಮೈತ್ರಿ ಕುರಿತ ಜೆಡಿಎಸ್ ನಿರ್ಧಾರವನ್ನು ಜೆಡಿಎಸ್ ರೆಬೆಲ್ ಸದಸ್ಯ ಮರಿತಿಬ್ಬೇಗೌಡ ಟೀಕಿಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ಇಂದು ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, "ಈ ದೇಶದಲ್ಲಿ ಧರ್ಮ, ಜಾತಿ, ದೇವರ ಹೆಸರಿನಲ್ಲಿ ಉದ್ಧಾರ ಮಾಡಲು ಆಗಲ್ಲ, ಬಿಜೆಪಿಯವರಿಗೆ ಶ್ರೀರಾಮನ ಹೆಸರು ಹೇಳುವ ನೈತಿಕತೆ ಇಲ್ಲ. ರಾಜ್ಯಕ್ಕೆ ಗ್ಯಾರಂಟಿಗಳನ್ನು ನೀಡಿದ ಸಿದ್ದರಾಮಯ್ಯ ನಿಜವಾದ ಶ್ರೀರಾಮಚಂದ್ರ. ಯಾರೋ ದೇಶವಿರೋಧಿ ಘೋಷಣೆ ಕೂಗಿದರು ಎಂದು ಬಿಜೆಪಿಯವರು ಕಲಾಪ ಸಮಯ ಹಾಳು ಮಾಡುತ್ತಿದ್ದಾರೆ. ರೈತರ ಪರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದಿಂದ ನಾಡಿನ ಪಾಲನ್ನು ಕೇಳಲು ಇವರಿಂದ ಆಗಿಲ್ಲ, ಇವರು ದೇಶದ್ರೋಹಿ ಹೆಸರಲ್ಲಿ ಹೋರಾಟ ಮಾಡುತ್ತಿದ್ದಾರೆ" ಎಂದು ಹೇಳಿದರು.

"ಬೀಚಿ ಅವರನ್ನು ಯಾರೋ ಕೇಳಿದ್ರಂತೆ, ದೇಶ ಪ್ರೇಮಿಗಳಿಗೂ, ದೇಶದ್ರೋಹಿಗಳಿಗೂ ಏನು ವ್ಯತ್ಯಾಸ ಅಂತ. ಆಗ ಬೀಚಿ ಹಿಂದೆ ವ್ಯತ್ಯಾಸ ಇತ್ತು, ಈಗ ಇಬ್ಬರ ನಡುವೆ ಏನೂ ವ್ಯತ್ಯಾಸ ಇಲ್ಲ ಅಂದಿದ್ರಂತೆ. ಈ ಬಿಜೆಪಿಯವರು ಅದೇ ರೀತಿ ಆಗಿದ್ದಾರೆ. ಕೇಂದ್ರ ಸರ್ಕಾರ ಹೆಚ್ಚಿನ ಸಾಲ ಮಾಡಿದೆ. ಬಿಜೆಪಿಯವರು ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಭರವಸೆ ನೀಡಿದ್ದರು. ಆದರೆ ಏನೂ ಮಾಡಿಲ್ಲ. ಬಿಜೆಪಿಯ ಭ್ರಷ್ಟಾಚಾರದಿಂದಾಗಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇವರ ಕಾಲದಲ್ಲಿ ಭ್ರಷ್ಟಾಚಾರದಲ್ಲಿ ದೇಶ ನಂಬರ್ ಒನ್ ಆಗಿದೆ" ಎಂದು ವಾಗ್ದಾಳಿ ನಡೆಸಿದರು.

"ಜೆ.ಎಚ್.ಪಟೇಲ್ ಅವರನ್ನು ಯಾರೋ ಒಮ್ಮೆ ಭ್ರಷ್ಟಾಚಾರ ಹೆಚ್ಚಾಗಿದೆ, ಇದನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ವಾ ಎಂದು ಕೇಳಿದ್ದರು. ಆಗ ಪಟೇಲರು ಕಾಂಗ್ರೆಸ್‌ ಹಳೇ ಮಡಿಕೆ ಆಗಿದೆ. ಎಲ್ಲವನ್ನೂ ಹೀರಿಕೊಂಡು ಹಳೇ ಮಡಿಕೆಯಾಗಿದೆ. ನಾವು ಈಗ ಬಂದಿದ್ದೇವೆ. ಹೊಸ ಮಡಿಕೆಯಲ್ಲಿ ನಾವು ಸ್ವಲ್ಪ ಹೀರಿಕೊಳ್ಳುತ್ತೇವೆ ಎಂದಿದ್ದರು. ಈ ಬಿಜೆಪಿಯವರ ಸ್ಥಿತಿ ಅದೇ ಆಗಿದೆ, ಇವರದ್ದು ಹೊಸ ಮಡಿಕೆ" ಎಂದರು.

"ದೇಶದ್ರೋಹಿ ಘೋಷಣೆ ಕೂಗಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದಕ್ಕೆ ನನ್ನ ಬೆಂಬಲ ಇದೆ. ಆದರೆ ಬಿಜೆಪಿ ಸದನ ನಡೆಯದಂತೆ ಮಾಡುತ್ತಿದ್ದಾರೆ. ಇವರು ಪ್ರಜಾಪ್ರಭುತ್ವ ಉಳಿಸುತ್ತಾರಾ? ಪೀಠದ ತೀರ್ಮಾನ ಗೌರವಿಸಲ್ಲ. ಸಂವಿಧಾನಕ್ಕೆ ದೊಡ್ಡ ಪೆಟ್ಟು ಬಿಜೆಪಿಯಿಂದ ಬಿದ್ದಿದೆ. ಮಾನವ ಹಕ್ಕುಗಳಿಗೆ ಬಿಜೆಪಿಯಿಂದ ರಕ್ಷಣೆ ಇಲ್ಲ, ಸಿದ್ದರಾಮಯ್ಯ ಸಮಸ್ತರ ರಕ್ಷಣೆಗಾಗಿ ಐದು ಗ್ಯಾರಂಟಿ ಮಾಡಿದ್ದಾರೆ. ಎಂಟೇ ತಿಂಗಳಲ್ಲಿ ಜಾರಿ ಮಾಡಿದ್ದಾರೆ" ಎಂದು ಬಣ್ಣಿಸಿದರು.

"ಬರೀ ಸುಳ್ಳು ಹೇಳಿ ದೇವರ ತೋರಿಸಿಕೊಂಡು ಭಾವನಾತ್ಮಕ ವಿಚಾರ ತುಂಬಿ, ದ್ವೈತ, ಅದ್ವೈತ, ಊಳಿಗಮಾನ್ಯ ಸಂಸ್ಕೃತಿಯನ್ನು ಜನರಿಗೆ ತುಂಬಿ ಅಧಿಕಾರ ಹಿಡಿಯಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಇವರು ಶ್ರೀಮಂತರ ಪರ ಇರುವವರು. ಆದರೆ ಬಡವರ ಪರ ಸರ್ಕಾರ ಕಾಂಗ್ರೆಸ್​ನದ್ದಾಗಿದೆ. ಈಗ ಈ ಕೋಮುವಾದಿ ಬಿಜೆಪಿ ಜೊತೆ ನಮ್ಮ ಪಕ್ಷದ ನಾಯಕರೂ ಹೊರಟಿದ್ದಾರೆ. ಇದು ಬಹಳ ನೋವಾಗಿದೆ. ನಮ್ಮ ಪಕ್ಷವನ್ನೂ ಒಳಗೊಂಡಂತೆ ಪ್ರಾದೇಶಿಕ ಪಕ್ಷವನ್ನು ಮುಗಿಸೋದೇ ಬಿಜೆಪಿಯ ಕಾರ್ಯತಂತ್ರ. ನನಗೆ ಇದರ ಬಗ್ಗೆ ಬೇಸರ ಇದೆ. ಬಿಜೆಪಿ ಆಡಳಿತದ ಬಗ್ಗೆ ನನ್ನ ಧಿಕ್ಕಾರ ಇದೆ. ಜನಪರ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಳಜಿಗೆ ನನ್ನ ಕೋಟಿಕೋಟಿ ನಮನಗಳು" ಎಂದು ಹೇಳಿದರು.

ಇದನ್ನೂ ಓದಿ:ಇಂದೂ ಮುಂದುವರೆದ ಬಿಜೆಪಿ-ಜೆಡಿಎಸ್ ಧರಣಿ: ಕಾಗದಪತ್ರ ಹರಿದು ತೂರಿ, ಸರ್ಕಾರದ ವಿರುದ್ಧ ಘೋಷಣೆ

Last Updated : Feb 29, 2024, 6:36 PM IST

ABOUT THE AUTHOR

...view details