ಕರ್ನಾಟಕ

karnataka

ETV Bharat / state

ಸಿಸಿಬಿ ಕಾರ್ಯಾಚರಣೆ: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಕೊನೆಗೂ ಸಿಕ್ಕಿಬಿದ್ದ

ಸುಮಾರು 30 ವರ್ಷಗಳಿಂದ ಸಿಗದೇ ತಪ್ಪಿಸಿಕೊಂಡಿದ್ದ ಕೊಲೆ ಆರೋಪಿ ಈಗ ಸಿಸಿಬಿ ಬಲೆ ಬಿದ್ದಿದ್ದಾನೆ. ಎರ್ನಾಕುಳಂ ಜಿಲ್ಲೆಯ ತ್ರಿಪ್ಪುಳಿತ್ತುರಂ ಈತ ತಲೆಮರೆಸಿಕೊಂಡಿದ್ದ.

ಬಂಧಿತ ಜೋಸ್ ಕುಟ್ಟಿ
ಬಂಧಿತ ಜೋಸ್ ಕುಟ್ಟಿ (ETV Bharat)

By ETV Bharat Karnataka Team

Published : 6 hours ago

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಸತತ ಕಾರ್ಯಾಚರಣೆ ಮೂಲಕ ಸುಮಾರು 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಜೋಸ್ ಕುಟ್ಟಿ (60) ಬಂಧಿತ. ಈತ ಕೇರಳದ ಎರ್ನಾಕುಳಂ ಜಿಲ್ಲೆಯ ತ್ರಿಪ್ಪುಳಿತ್ತುರಂ ಎಂಬಲ್ಲಿ ತಲೆಮರೆಸಿಕೊಂಡಿದ್ದ. ಈ ಆರೋಪಿ 1995 ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಹಾಗೂ ಹಲ್ಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.

ಪ್ರಕರಣದ ವಿವರ:1995ರಲ್ಲಿ, ಸುರತ್ಕಲ್ ಠಾಣಾ ವ್ಯಾಪ್ತಿಯ ಭಾಳ ಗ್ರಾಮದಲ್ಲಿರುವ ಎಂಆರ್‌ಪಿಎಲ್ ಟೌನ್ ಶಿಪ್ ಸೈಟ್​​ನಲ್ಲಿ ರಕ್ಷಕ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಇನ್ಸಿಟ್ಯೂಟ್ ಮಾಲೀಕರಾದ ಅಬ್ದುಲ್ಲಾ ಅವರು ನೇಮಿಸಿದ್ದ 5 ಮಂದಿ ಸೆಕ್ಯೂರಿಟಿ ಗಾರ್ಡುಗಳಲ್ಲಿ ನಾರಾಯಣ, ಸುರೇಶ್, ದೇವಣ್ಣ ಎಂಬವರು ಕಾರ್ಯನಿರ್ವಹಿಸುತ್ತಿದ್ದರು. 1995ರ ಮಾರ್ಚ್ 12 ರಂದು ರಾತ್ರಿ 10:30ರ ಸುಮಾರಿಗೆ ಮೂರು ಅಪರಿಚಿತರು ಆ ಪ್ರದೇಶಕ್ಕೆ ಆಗಮಿಸಿದಾಗ, ಈ ಸಮಯದಲ್ಲಿ ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಕೇಳಿದ ಸಮಯದಲ್ಲಿ ಜಗಳ ನಡೆದಿದೆ. ಈ ಜಗಳದ ವೇಳೆ, ಅಪರಿಚಿತರು ನಾರಾಯಣ್ ಅವರ ಮೇಲೆ ಗಂಭೀರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದರು.

ಪ್ರಕರಣದಲ್ಲಿ ಭಾಗಿಯಾಗಿದ್ದ ಅಚ್ಚನ್ ಕುಂಞ, ಜೋಸ್ ಕುಟ್ಟಿ, ಮತ್ತು ಇತರ ಆರೋಪಿಗಳು ಕೃತ್ಯ ಮಾಡಿದ ನಂತರ ತಲೆಮರೆಸಿಕೊಂಡಿದ್ದರು. 30 ವರ್ಷಗಳ ಕಾಲ ಈ ಪ್ರಕರಣದ ಆರೋಪಿಗಳನ್ನು ಹುಡುಕಲು ಪೋಲಿಸರು ನೂರಾರು ಪ್ರಯತ್ನ ಮಾಡಿದರೂ ಯಶಸ್ವಿಯಾಗಿರಲಿಲ್ಲ.

ಆರೋಪಿಗಳ ಪೈಕಿ ಅಚ್ಚನ್ ಕುಂಞ 8 ವರ್ಷಗಳ ಹಿಂದೆ ಮೃತಪಟ್ಟಿದ್ದು, ಜೋಸ್ ಕುಟ್ಟಿ ಮಾತ್ರ ತಲೆಮರೆಸಿಕೊಂಡಿದ್ದನು. ಮಂಗಳೂರು ಸಿಸಿಬಿ ಪೊಲೀಸರು ಸತತ ಮಾಹಿತಿಯನ್ನು ಸಂಗ್ರಹಿಸಿದ್ದರು. ಖಚಿತ ಮಾಹಿತಿ ಮೇರೆಗೆ 2024ರ ಅಕ್ಟೋಬರ್ 23 ರಂದು ಕಾಯಾರ್ಚರಣೆ ಕೈಗೊಂಡು, ಕೇರಳದ ಎರ್ನಾಕುಳಂ ಜಿಲ್ಲೆಯ ತ್ರಿಪ್ಪುಳಿತ್ತುರಂ ಎಂಬಲ್ಲಿ ಆರೋಪಿ ಜೋಸ್ ಕುಟ್ಟಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿಯನ್ನು ಮಂಗಳೂರಿಗೆ ಕರೆತಂದು ಎರಡನೇ ಜೆಎಂಎಫ್​ಸಿ ಕೋರ್ಟ್​ಗೆ ಹಾಜರುಪಡಿಸಲಾಗಿದೆ. ಆರೋಪಿಗೆ ಸದ್ಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್, ಇನ್ಸ್‌ಪೆಕ್ಟರ್ ಶ್ಯಾಮ್ ಸುಂದರ್ ಹೆಚ್.ಎಂ, ಎಎಸ್ಐ ಮೋಹನ್ ಕೆ.ವಿ ಹಾಗೂ ಸಿಸಿಬಿ ಸಿಬ್ಬಂದಿ ಭಾಗವಹಿಸಿದ್ದರು. 30 ವರ್ಷಗಳ ಹಳೆಯ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿದ ಸಿಸಿಬಿ ತಂಡವನ್ನು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಬುದ್ಧಿವಂತರ ನಾಡಿನಲ್ಲಿ ಸಾಲು ಸಾಲು ಆನ್​ಲೈನ್​ ವಂಚನೆ: 99 ಲಕ್ಷ ಕಳೆದುಕೊಂಡ ಮಂಗಳೂರ ನಿವಾಸಿಗಳು! ​

ABOUT THE AUTHOR

...view details