ಕರ್ನಾಟಕ

karnataka

ಭರ್ತಿಯತ್ತ ಕೆಆರ್​ಎಸ್​ ಜಲಾಶಯ: ಮುಂಜಾಗ್ರತ ಕ್ರಮವಾಗಿ ಕಾವೇರಿ ನದಿಗೆ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ - 15 THOUSAND CUSECS WATER RELEASED

By ETV Bharat Karnataka Team

Published : Jul 20, 2024, 7:34 PM IST

Updated : Jul 20, 2024, 10:27 PM IST

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಹತ್ತು ಕ್ರೆಸ್ಟ್ ಗೇಟ್​ಗಳ ಮೂಲಕ 15 ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಟ್ಟಿದ್ದಾರೆ. ಹೀಗಾಗಿ ಕಾವೇರಿಗೆ ಮತ್ತೆ ಜೀವಕಳೆ ಬಂದಿದೆ.

KRS Dam
ಕೆಆರ್​ಎಸ್​ ಡ್ಯಾಂ (ETV Bharat)

ಮಂಡ್ಯ:ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕನ್ನಂಬಾಡಿ ಅಣೆಕಟ್ಟೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಳೇ ಮೈಸೂರು ಭಾಗದ ಜನರ ಜೀವನಾಡಿ, ಕೆಆರ್​ಎಸ್ ಜಲಾಶಯ ಭರ್ತಿಯಾಗಲು ಕೇವಲ ನಾಲ್ಕು ಅಡಿ ಮಾತ್ರ ಬಾಕಿ ಇದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಜಲಾಯಶದಿಂದ ಕಾವೇರಿ ನದಿಗೆ ಹದಿನೈದು ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ.

ಕೆಆರ್​ಎಸ್​ ಡ್ಯಾಂ (ETV Bharat)

124.80 ಅಡಿ ಗರಿಷ್ಠ ಸಾಮರ್ಥ್ಯದ ಕೆಆರ್​ಎಸ್ ಜಲಾಶಯದಲ್ಲಿ ಇದೀಗ 120 ಅಡಿಯ ಲೇವಲ್​​ಗೆ ನೀರಿನ ಪ್ರಮಾಣ ತಲುಪಿದೆ. ಜಲಾಶಯ ಭರ್ತಿಯಾಗಲು ಕೇವಲ ನಾಲ್ಕು ಅಡಿ ಮಾತ್ರ ಬಾಕಿ ಇದೆ. ಇನ್ನು ಜಲಾಶಯಕ್ಕೆ 51 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಮತ್ತೊಂದು ಕಡೆ ಹಾರಂಗಿ ಹಾಗೂ ಹೇಮಾವತಿ ಜಲಾಶಯದಿಂದಲೂ ನೀರು ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ವೇಳೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ಹೀಗಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಹತ್ತು ಕ್ರೆಸ್ಟ್ ಗೇಟ್​ಗಳ ಮೂಲಕ 15 ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಟ್ಟಿದ್ದಾರೆ. ಹೀಗಾಗಿ ಕಾವೇರಿಗೆ ಮತ್ತೆ ಜೀವಕಳೆ ಬಂದಿದೆ. ಇದು ಜಿಲ್ಲೆಯ ರೈತರ ಮಂದಹಾಸಕ್ಕೂ ಕೂಡ ಕಾರಣವಾಗಿದೆ.

ಅಂದಹಾಗೆ ಕಳೆದ ವರ್ಷ ಮಳೆಯಾಗದ ಹಿನ್ನೆಲೆಯಲ್ಲಿ ಕನ್ನಂಬಾಡಿ ಕಟ್ಟೆ ಭರ್ತಿಯಾಗಿರಲಿಲ್ಲ. ಕೆಲವೇ ದಿನಗಳ ಕೆಳಗೆ ಕೆಆರ್​ಎಸ್ ಜಲಾಶಯ ಕೂಡ ಖಾಲಿ ಖಾಲಿಯಾಗಿತ್ತು. ಆದರೆ, ಇದೀಗ ನಿರಂತರ ಮಳೆಯಿಂದ ಭರ್ತಿ ಹಂತಕ್ಕೆ ಬಂದಿದೆ. ಇನ್ನು ಕಾವೇರಿ ನದಿಗೆ ನೀರು ಬಿಟ್ಟಿರುವುದರಿಂದ ನದಿಯಲ್ಲಿ ನೀರಿನ ಸೆಳೆತವಿದ್ದು, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಾತ್ಕಲಿಕವಾಗಿ ಬೋಟಿಂಗ್ ಸ್ಥಗಿತ ಮಾಡಿದ್ದಾರೆ.

ಮಂಡ್ಯ ಜಿಲ್ಲಾಡಳಿತ ಕೂಡ ಅಲರ್ಟ್ ಆಗಿದ್ದು, ನದಿ ಪಾತ್ರದ 92 ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚನೆ ಕೂಡ ನೀಡಿದೆ. ಅಲ್ಲದೇ ಜಿಲ್ಲಾಧಿಕಾರಿ ಡಾ.ಕುಮಾರ್ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

KRS ಡ್ಯಾಂನ ಇಂದಿನ ನೀರಿನ‌ ಮಟ್ಟ

ಗರಿಷ್ಠ ಮಟ್ಟ 124.80 ಅಡಿ
ಇಂದಿನ ಮಟ್ಟ 119.90 ಅಡಿ
ಗರಿಷ್ಠ ಸಾಂದ್ರತೆ 49.453 ಟಿಎಂಸಿ
ಇಂದಿನ ಸಾಂದ್ರತೆ 42.916 ಟಿಎಂಸಿ
ಒಳ ಹರಿವು 51,375 ಕ್ಯೂಸೆಕ್
ಹೊರ ಹರಿವು 14,714 ಕ್ಯೂಸೆಕ್

ಇದನ್ನೂ ಓದಿ:ಹೆಚ್ಚಿದ ಮಳೆಯಿಂದ ಜಲಾಶಯಗಳಿಗೆ ಜೀವಕಳೆ: ಕಬಿನಿ ಡ್ಯಾಂ ಬಹುತೇಕ ಭರ್ತಿ, ನದಿಗೆ ಇಳಿಯದಂತೆ ಜನರಿಗೆ ಎಚ್ಚರಿಕೆ - Karnataka Rain

Last Updated : Jul 20, 2024, 10:27 PM IST

ABOUT THE AUTHOR

...view details