ಕರ್ನಾಟಕ

karnataka

ಕೊಪ್ಪಳದಲ್ಲಿ ಬಿಜೆಪಿ-ಕಾಂಗ್ರೆಸ್ ಗದ್ದುಗೆ ಗುದ್ದಾಟ; ಕ್ಷೇತ್ರಕ್ಕೆ ಯಾರು ಈ ಬಾರಿ 'ರಾಜ'? - Koppal Lok Sabha Constituency

ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಡಾ.ಬಸವರಾಜ ಶರಣಪ್ಪ ಕ್ಯಾವಟರ್ ಹಾಗೂ ಕಾಂಗ್ರೆಸ್​ನ ಕೆ.ರಾಜಶೇಖರ ಹಿಟ್ನಾಳ ನಡುವೆ ಭಾರೀ ಜಿದ್ದಾಜಿದ್ದು ಇದ್ದು, ಮತದಾರರು ಯಾರನ್ನು ದೆಹಲಿಗೆ ಕಳುಹಿಸುತ್ತಾರೆ ಎಂಬುದೇ ಕುತೂಹಲ.

By ETV Bharat Karnataka Team

Published : Jun 2, 2024, 6:40 PM IST

Published : Jun 2, 2024, 6:40 PM IST

BJP's Dr. K Basavaraja, Congress's K. Rajashekar Hitnal
ಬಿಜೆಪಿಯ ಡಾ. ಕೆ.ಬಸವರಾಜ, ಕಾಂಗ್ರೆಸ್​ನ ಕೆ.ರಾಜಶೇಖರ ಹಿಟ್ನಾಳ (ETV Bharat)

ಕೊಪ್ಪಳ: ಲೋಕಸಭೆ ಚುನಾವಣೆಯ ಫಲಿತಾಂಶ ಇನ್ನೆರಡೇ ದಿನದಲ್ಲಿ ಪ್ರಕಟವಾಗಲಿದೆ. ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ತೀವ್ರ ಪೈಪೋಟಿ ಕಂಡಿರುವ ಕೊಪ್ಪಳ ಕ್ಷೇತ್ರದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಹ್ಯಾಟ್ರಿಕ್​ ಗೆಲುವು ಕಂಡ ಕ್ಷೇತ್ರವನ್ನು ಹೊಸಮುಖ ಡಾ.ಬಸವರಾಜ ಶರಣಪ್ಪ ಕ್ಯಾವಟರ್ ಮೂಲಕ ಉಳಿಸಿಕೊಳ್ಳುವ ವಿಶ್ವಾಸ ಬಿಜೆಪಿಯದ್ದು. ಮತ್ತೊಂದೆಡೆ, ಕಾಂಗ್ರೆಸ್​ನ ಒಂದು ಕಾಲದ ಭದ್ರಕೋಟೆಯಾಗಿದ್ದ ಕೊಪ್ಪಳವನ್ನು ಮರಳಿ ಪಡೆಯುವ ತವಕದಲ್ಲಿ ಪಕ್ಷದ​ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಇದ್ದಾರೆ.

ಕೊಪ್ಪಳ ಜಿಲ್ಲೆಯ ಐದು, ರಾಯಚೂರು ಜಿಲ್ಲೆಯ ಎರಡು ಮತ್ತು ಬಳ್ಳಾರಿ ಜಿಲ್ಲೆಯ ಒಂದು ವಿಧಾನಸಭೆ ಕ್ಷೇತ್ರವನ್ನು ಕೊಪ್ಪಳ ಲೋಸಕಭೆ ಕ್ಷೇತ್ರ ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಇದುವರೆಗೆ 10 ಬಾರಿ ಕಾಂಗ್ರೆಸ್​ ಗೆದ್ದ ದಾಖಲೆ ಹೊಂದಿದ್ದರೆ, ಕಳೆದ ಮೂರು ಅವಧಿಗಳಿಂದ ಬಿಜೆಪಿ ಹಿಡಿತ ಸಾಧಿಸಿಕೊಂಡು ಬಂದಿದೆ. 2009ರಲ್ಲಿ ಶಿವರಾಮಗೌಡ ಬಿಜೆಪಿಯಿಂದ ಕಣಕ್ಕಿಳಿದು ಮೊದಲ ಬಾರಿಗೆ ಖಾತೆ ತೆರೆದಿದ್ದರು. 2014ರ ಹಾಗೂ 2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಸಂಗಣ್ಣ ಕರಡಿ ಸತತ ಜಯ ದಾಖಲಿಸಿದ್ದರು.

2014ರ ಚುನಾವಣೆಯಲ್ಲಿ ಸಂಗಣ್ಣ ಕರಡಿ ವಿರುದ್ಧ ಕಾಂಗ್ರೆಸ್​ನ ಮಾಜಿ ಶಾಸಕ ಬಸವರಾಜ ಹಿಟ್ನಾಳ ಸೋಲುಂಡಿದ್ದರು. ತಂದೆಯ ಸೋಲಿನ ಅನುಕಂಪದ ನಡುವೆಯೂ ರಾಜಶೇಖರ ಹಿಟ್ನಾಳ 2019ರಲ್ಲಿ ಮತ್ತದೇ ಸಂಗಣ್ಣ ಕರಡಿ ವಿರುದ್ಧ ಸುಮಾರು 38 ಸಾವಿರ ಮತಗಳಿಂದ ಪರಾಭವಗೊಂಡಿದ್ದರು. ಈ ಬಾರಿ ರಾಜಶೇಖರ ಹಿಟ್ನಾಳ ಮತ್ತೊಮ್ಮೆ ಕಣದಲ್ಲಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಕರಡಿ ಕುಟುಂಬದ ಹೊರತಾದ ಅಭ್ಯರ್ಥಿಯೊಂದಿಗೆ ಚುನಾವಣೆ ಎದುರಿಸಿದ್ದಾರೆ. ಆದ್ದರಿಂದ ಚುನಾವಣಾ ಫಲಿತಾಂಶ ಕುತೂಹಲ ಕೆರಳಿಸಿದೆ.

ಮೂರು ಚುನಾವಣೆಗಳ ಮತ ಪ್ರಮಾಣ: 2009ರ ಚುನಾವಣೆಯಲ್ಲಿ ಶೇ.55.40ರಷ್ಟು ಮತದಾನವಾಗಿತ್ತು. ಇದರಲ್ಲಿ ಬಿಜೆಪಿಯ ಶಿವರಾಮಗೌಡ ಶೇ.38.65ರಷ್ಟು ಮತ ಪಡೆದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಸವರಾಜ ರಾಯರೆಡ್ಡಿ ಶೇ.27.81ರಷ್ಟು ಮತ ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಶೇ.10.84ರಷ್ಟು ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ನಂತರದ ಎರಡು ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವಿನ ಮತ ಪ್ರಮಾಣ ತುಂಬಾ ಕಡಿಮೆಯಾಗಿದೆ.

2014ರ ಚುನಾವಣೆಯಲ್ಲಿ ಶೇ.65.63ರಷ್ಟು ಮತದಾನವಾಗಿತ್ತು. ಆಗ ಬಿಜೆಪಿಯ ಸಂಗಣ್ಣ ಕರಡಿ ಶೇ.48.95ರಷ್ಟು ಮತ ಗಳಿಸಿದ್ದರು. ಕಾಂಗ್ರೆಸ್​ನ ಬಸವರಾಜ್ ಹಿಟ್ನಾಳ ಶೇ.45.69ರಷ್ಟು ಮತ ಪಡೆದು, ಶೇ.3.26 ಮತಗಳ ಅಂತರದಿಂದ ಸೋತಿದ್ದರು. 2019ರ ಚುನಾವಣೆಯಲ್ಲಿ ಒಟ್ಟು ಮತದಾನ ಶೇ.68.54ರಷ್ಟಾಗಿತ್ತು. ಸಂಗಣ್ಣ ಕರಡಿ ಶೇ.49.75ರಷ್ಟು ಮತ ಪಡೆದಿದ್ದರು. ಕೆ.ರಾಜಶೇಖರ್ ಹಿಟ್ನಾಳ್ ಶೇ.46.79ರಷ್ಟು ಮತ ಗಳಿಸಿ, ಕೇವಲ ಶೇ.2.96ರಷ್ಟು ಮತಗಳಿಂದ ಪರಾಜಯ ಕಂಡಿದ್ದರು. ಈ ಬಾರಿ ದಾಖಲೆಯ ಶೇ.70ರಷ್ಟು ಮತದಾನವಾಗಿದೆ. ಒಟ್ಟಾರೆ 18.66 ಲಕ್ಷ ಮತದಾರರ ಪೈಕಿ 13.24 ಲಕ್ಷ ಜನ ಮತ ಚಲಾವಣೆ ಮಾಡಿದ್ದಾರೆ. ಹೀಗಾಗಿ ಇದು ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಕಾರಣವಾಗಿದೆ.

ಬಿಜೆಪಿ ಅಭ್ಯರ್ಥಿಯ ಬಲವೇನು?: ಕೊಪ್ಪಳದಲ್ಲಿ ಬಿಜೆಪಿ ಹಾಲಿ ಸಂಸದರಾಗಿದ್ದ ಸಂಗಣ್ಣ ಕರಡಿ ಹ್ಯಾಟ್ರಿಕ್​ ಸ್ಪರ್ಧೆಯ ನಿರೀಕ್ಷೆಯಲ್ಲಿದ್ದರು. ಆದರೆ, ಅವರಿಗೆ ಬಿಜೆಪಿ ಮಣೆ ಹಾಕಿಲ್ಲ. ಡಾ.ಬಸವರಾಜ ಕ್ಯಾವಟರ್ ಅವರನ್ನು ಕಣಕ್ಕಿಳಿಸಿದೆ. ವಿಶೇಷ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರಾದ ಇವರು ಕಿರಿಯ ವಯಸ್ಸಿನಲ್ಲೇ ವೈದ್ಯಕೀಯ ಕ್ಷೇತ್ರದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಆರ್ಥೋಪಿಡಿಕ್ಸ್ ವಿಭಾಗದಲ್ಲಿ ಅಪಾರ ಜ್ಞಾನ ಹೊಂದಿರುವ ಬಸವರಾಜ ಅವರು 20 ಸಾವಿರಕ್ಕೂ ಹೆಚ್ಚು ಕೀಲು, ಚಪ್ಪೆ ಶಸ್ತ್ರಚಿಕಿತ್ಸೆಗಳ ಮೂಲಕ ರೋಗಿಗಳ ಗುಣಪಡಿಸಿದ್ದಾರೆ. ದೇಶದ ಮಠಾಧೀಶರು, ಚಲನಚಿತ್ರ ನಟರು, ರಾಜಕಾರಣಿಗಳು ಸೇರಿ ವಿದೇಶಿಗರು ಸಹ ಇವರ ಬಳಿ ಚಿಕಿತ್ಸೆ ಪಡೆಯುತ್ತಾರೆ. ಕೊಪ್ಪಳದ ತಮ್ಮ ಕೆ.ಎಸ್.ಆಸ್ಪತ್ರೆಯಲ್ಲಿ ಅಲ್ಪಾವಧಿಯಲ್ಲೇ 600ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ.

ಜಸವರಾಜ ಅವರಿಗೆ ರಾಜಕಾರಣವೂ ಹೊಸದಲ್ಲ. ತಂದೆ ಕೆ.ಶರಣಪ್ಪ ವಕೀಲ ಕಳೆದ 35 ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ಒಂದು ಬಾರಿ ಕುಷ್ಟಗಿ ವಿಧಾನಸಭಾ ಕ್ಷೇತ್ರ ಶಾಸಕರಾಗಿ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಾರಿ ಜಸವರಾಜ ಅವರಿಗೆ ಅನಿರೀಕ್ಷಿತವಾಗಿ ಟಿಕೆಟ್​ ನೀಡಲಾಗಿದೆ. ಇದು ಬಿಜೆಪಿ ವಲಯದಲ್ಲಿ ಹೊಸ ಗಾಳಿ ಬೀಸಿದಂತಾಗಿದೆ. ಕಾರ್ಯಕರ್ತರೆಲ್ಲ ನಮಗೆ ಅಭ್ಯರ್ಥಿ ಯಾರೆಂಬುದು ಮುಖ್ಯವಲ್ಲ, ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದು ಮುಖ್ಯ ಎಂದು ಕೆಲಸ ಮಾಡಿದ್ದಾರೆ. ಸ್ವತಃ ಅಭ್ಯರ್ಥಿ ಸಹ ನನಗಾಗಿ ಅಲ್ಲ, ಮೋದಿಗಾಗಿ ಮತ ನೀಡಿ ಎಂದು ಪ್ರಚಾರದುದ್ದಕ್ಕೂ ಕೇಳಿಕೊಂಡಿದ್ದಾರೆ.

ಸಂಗಣ್ಣ ಕರಡಿಯಿಂದ ಹಿನ್ನಡೆ ಆತಂಕ: ಹಾಲಿ ಸಂಸದರಾಗಿದ್ದ ಸಂಗಣ್ಣ ಕರಡಿ ಕ್ಷೇತ್ರದಾದ್ಯಂತ ಉತ್ತಮ ಕೆಲಸ ಮಾಡಿದ್ದರು. ಈ ಬಾರಿ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಕಾಂಗ್ರೆಸ್ ಅವರು ಸೇರ್ಪಡೆಗೊಂಡಿದ್ದಾರೆ. ಇದರಿಂದಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವಿನಲ್ಲಿ ಕೊಂಚ ಹಿನ್ನಡೆಯಾಗಬಹುದು ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಆದರೆ, ಕಳೆದ 10 ವರ್ಷಗಳ ಅವಧಿಯಲ್ಲಿ ಮೋದಿ ಅವರ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂಬ ವಿಶ್ವಾಸವನ್ನು ಅಭ್ಯರ್ಥಿ ಹೊಂದಿದ್ದಾರೆ.

ಹಿಟ್ನಾಳಗೆ ಗೆಲುವಿನ ವಿಶ್ವಾಸಕ್ಕೆ ಕಾರಣ?:ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಕೊಪ್ಪಳ ಲೋಸಕಭೆ ಕ್ಷೇತ್ರದಾದ್ಯಂತ ವಿಧಾನಸಭೆ ಕ್ಷೇತ್ರವಾರು ಎಲ್ಲ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ರಾಜಶೇಖರ ಅವರ ತಂದೆ ಒಂದು ಬಾರಿ ಮತ್ತು ಸಹೋದರ ಮೂರು ಬಾರಿ ಶಾಸಕರಾಗಿದ್ದು, ಸ್ವತಃ ರಾಜಶೇಖರ ಎರಡು ಬಾರಿ ಜಿ.ಪಂ.ಅಧ್ಯಕ್ಷನಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಬಾರಿ ರಾಜ್ಯ ಕಾಂಗ್ರೆಸ್​ ಸರ್ಕಾರ ಜನಪರ ಐದು ಗ್ಯಾರಂಟಿ ಯೋಜನೆಗಳು ತಮ್ಮ ಕೈ ಹಿಡಿಯಲಿವೆ ಎಂಬ ಭರವಸೆಯಲ್ಲಿದ್ದಾರೆ.

ಕರಡಿ ಬಲ, ಅನ್ಸಾರಿ ಒಳಪೆಟ್ಟಿನ ಆತಂಕ: ಬಿಜೆಪಿಯ ಹಾಲಿ ಸಂಸದ ಸಂಗಣ್ಣ ಕರಡಿ ಚುನಾವಣೆ ಹೊತ್ತಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಕಾಂಗ್ರೆಸ್​ಗೆ ಬಲ ತುಂಬಿದಂತಾಗಿದೆ. ಸಂಗಣ್ಣ ಅವರಿಗೆ ಪಕ್ಷ ಹೊರತಾಗಿಯೂ ದೊಡ್ಡ ಬೆಂಬಲಿಗರ ಪಡೆ ಇದೆ. ಇದು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ಇದೇ ವೇಳೆ, ಗಂಗಾವತಿ ವಿಧಾನಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಅತೃಪ್ತಿಯು ಕಾಂಗ್ರೆಸ್​ಗೆ ಒಳಪೆಟ್ಟು ನೀಡಬಹುದು ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಬಿಜೆಪಿ ಕೋಟೆ ಉರುಳುತ್ತಾ, ಉಳಿಯುತ್ತಾ?: ಹಿಡಿತಕ್ಕೆ ಸಿಗದ ಲೆಕ್ಕ

ABOUT THE AUTHOR

...view details