ಕೋಲಾರ:ಭಾರತೀಯ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಲಾರ ಮೂಲದ ಯೋಧ ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟಿರುವ ಘಟನೆ ಗುಜರಾತ್ನ ಜಾಮ್ ನಗರದಲ್ಲಿ ಬುಧವಾರ ನಡೆದಿದೆ. ಸುಮಾರು 22 ವರ್ಷ ವಯಸ್ಸಿನ ಹರ್ಷಿತ್ ಪ್ರಸನ್ನ ಎಂಬ ಯೋಧ ಸಾವನ್ನಪ್ಪಿದ್ದಾರೆ.
2019ರಲ್ಲಿ ನೌಕಾಪಡೆಗೆ ಆಯ್ಕೆಯಾಗಿ ಕಳೆದ ನಾಲ್ಕು ವರ್ಷಗಳಿಂದ ನಾವಿಕನಾಗಿ ಸೇವೆ ಸಲ್ಲಿಸುತ್ತಿದ್ದರು. ಅದರಂತೆ ಗುಜರಾತ್ನ ಜಾಮ್ ನಗರದಲ್ಲಿ ನಾವಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಈ ಅವಘಡ ಜರುಗಿದೆ. ಜಿಂಕೆಯನ್ನೇ ಹೋಲುವಂತಹ ನೀಲ್ಗಾಯ್ ಎಂಬ ಕಾಡು ಪ್ರಾಣಿಯ ಮರಿಗಳು, ಪ್ಲಾಸ್ಟಿಕ್ ತಿನ್ನುವುದಕ್ಕೆ ಮುಂದಾಗಿದ್ದವು. ಇದನ್ನು ಕಂಡಂತಹ ನಾವಿಕ ಹರ್ಷಿತ್ ಪ್ರಸನ್ನ ಮರಿಗಳು ಪ್ಲಾಸ್ಟಿಕ್ ತಿನ್ನುವುದನ್ನು ತಪ್ಪಿಸಲು ಆ ಮರಿಗಳ ಹಿಡಿದು ಬೇರೆಡೆ ಬಿಡಲು ಮುಂದಾಗಿದ್ದರು. ಈ ವೇಳೆ, ಹಿಂಬದಿಯಿಂದ ಬಂದ ನೀಲ್ಗಾಯ್ ಕಾಡುಪ್ರಾಣಿ ಹರ್ಷಿತ್ ಬೆನ್ನಿಗೆ ತಿವಿದಿದ್ದು, ತಿವಿದ 10 ಮಿನಿಷದಲ್ಲಿ ನಾವಿಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಇನ್ನು ನಾವಿಕ ಹರ್ಷಿತ್ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೋಲಾರದ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರವಾರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಮೃತ ಹರ್ಷಿತ್ ಅವರ ತಂದೆ ಪ್ರಸನ್ನ ಅವರು ಮಾತನಾಡಿ, "22 ವರ್ಷದ ಹರ್ಷಿತ್ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ನಾಲ್ಕು ವರ್ಷದ ಅನುಭವ ಇತ್ತು. ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಬೇಕು ಅನ್ನೋದು ಆತನ ಕನಸಾಗಿತ್ತು. ಆದರೆ, ವಿಧಿ ಲಿಖಿತವೇ ಬೇರೆ ಆಗಿತ್ತು. ನೀಲ್ಗಾಯ್ ಕಾಡುಪ್ರಾಣಿಯ ಮರಿಗಳನ್ನು ಸ್ಥಳಾಂತರ ಮಾಡುತ್ತಿದ್ದಾಗ, ಅವುಗಳ ತಾಯಿ ಹಿಂದಿನಿಂದ ಬಂದು ಕೊಂಬಿನಿಂದ ತಿವಿದಿದೆ. ತಕ್ಷಣ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ಬದುಕಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ, ಅದರ ಹೊರತಾಗಿಯೂ ಕೊನೆಯುಸಿರೆಳೆದಿದ್ದಾನೆ. ಮತ್ತೋರ್ವ ಪುತ್ರಿ ಇದ್ದು ಅವಳನ್ನು ಚೆನ್ನಾಗಿ ಓದಿಸುವೆ. ನೌಕಾಪಡೆಗೆ ಸೇರಲು ಇಚ್ಛಿಸಿದರೆ ಕಳುಹಿಸುವೆ" ಎಂದು ಹೇಳಿದರು.
ಇದನ್ನೂ ಓದಿ:ಛತ್ತೀಸ್ಗಢದಲ್ಲಿ ಎನ್ಕೌಂಟರ್: ಓರ್ವ ಯೋಧ ಹುತಾತ್ಮ, ನಕ್ಸಲ್ ಹತ