ಕರ್ನಾಟಕ

karnataka

By ETV Bharat Karnataka Team

Published : Jun 25, 2024, 6:57 AM IST

ETV Bharat / state

ಏಕಲವ್ಯ ಪ್ರಶಸ್ತಿಗೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಮಧ್ಯಪ್ರವೇಶಕ್ಕೆ ಹೈಕೋರ್ಟ್ ನಕಾರ - HC refuses to intervene

ನ್ಯಾಯಾಲಯಗಳು ಕ್ರೀಡೆಗಳಲ್ಲಿ ತೀರ್ಪುಗಾರರಂತೆ ಸೇವೆ ಸಲ್ಲಿಸಬೇಕೇ ಹೊರತು ರೆಫರಿಗಳಂತಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್​ ನ್ಯಾಯಾಪೀಠ ಮಾರ್ಗಸೂಚಿಗಳ ಬಗ್ಗೆ ಮಧ್ಯಪ್ರವೇಶಿಸಲು ನಿರಾಕರಿಸಿದೆ.

Karnataka High Court
ಕರ್ನಾಟಕ ಹೈಕೋರ್ಟ್​ (ETV Bharat)

ಬೆಂಗಳೂರು: ಸರ್ಕಾರದ ನೀತಿಗಳು ಸಂವಿಧಾನ ಬಾಹಿರ ಹಾಗೂ ದೋಷಪೂರಿತವಾಗಿದ್ದಲ್ಲಿ ಮಾತ್ರ ನ್ಯಾಯಾಲಯಗಳು ಪರಿಶೀಲನೆಗೊಳಪಡಿಸಲಿವೆ. ನ್ಯಾಯಾಲಯಗಳು ಕ್ರೀಡೆಗಳಲ್ಲಿ ತೀರ್ಪುಗಾರರಂತಿರಬೇಕೇ ವಿನಃ ರೆಫರಿಗಳಂತಲ್ಲ ಎಂದು ತಿಳಿಸಿರುವ ಹೈಕೋರ್ಟ್, ಏಕಲವ್ಯ ಪ್ರಶಸ್ತಿಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಗಳ ಸಂಬಂಧ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ರೋಲರ್ ಸ್ಕೇಟಿಂಗ್ ಅಥ್ಲೇಟ್ ಆಗಿರುವ ವಿ.ವರ್ಷಿತ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಅಲ್ಲದೇ, ಸರ್ಕಾರದ ನೀತಿಗಳು ಸಂವಿಧಾನದ 14ನೇ ವಿಧಿಯ ಅಡಿಯಲ್ಲಿನ ಸಮಾನತೆ ಉಲ್ಲಂಘನೆ, ಅಸಮಂಜಸ ಹಾಗೂ ದೋಷದಿಂದ ಕೂಡಿದ್ದರೆ ಹೊರತು ಇತರ ಸಂದರ್ಭಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಅಲ್ಲದೆ, ಲೇಕರ್ ಏರ್ವೇಸ್ ವಿರುದ್ಧದ ಡಿಪಾರ್ಟ್‌ಮೆಂಟ್ ಆಫ್​ ಟ್ರೇಡ್ಸ್ ಪ್ರಕರಣದಲ್ಲಿ ಲಾರ್ಡ್ ಜಸ್ಟೀಸ್ ಡೆನ್ನಿಂಗ್ ಮತ್ತು ಲಾರ್ಡ್ ಜಸ್ಟೀಸ್ ಲಾಟನ್ ಅವರ ಅಭಿಪ್ರಾಯವನ್ನು ಉಲ್ಲೇಖಿಸಿರುವ ನ್ಯಾಯಪೀಠ, ಕ್ರೀಡೆಗಳಲ್ಲಿ ನ್ಯಾಯಾಧೀಶರು ತೀರ್ಪುಗಾರರಂತಿದ್ದು, ಚೆಂಡು ಆಟದಿಂದ ಹೊರಬಂದಾಗ ಮಾತ್ರ ಶಿಳ್ಳೆ ಊದಬಹುದಾಗಿದೆ(ತಮ್ಮ ಅಧಿಕಾರ ಬಳಕೆ) ಆದರೆ, ಆಟ ಪುನರಾರಂಭವಾದಾಗ ಹೇಗೆ ಆಡಬೇಕು ಎಂಬುದರ ಬಗ್ಗೆ ಆಟಗಾರರಿಗೆ ತಿಳಿಸಲು ಮುಂದಾಗಬಾರದು ಎಂದು ತಿಳಿಸಿದೆ.

ಪ್ರಸ್ತುತ ಪ್ರಕರಣದಲ್ಲಿ ಪ್ರಶಸ್ತಿ ಪ್ರದಾನ ಪ್ರಕ್ರಿಯೆಯಲ್ಲಿ ಚೆಂಡು ಆಟದಿಂದ ಹೊರ ಬಂದಿಲ್ಲ. ಹೀಗಾಗಿ ನ್ಯಾಯಾಲಯ ರೆಫರಿಯಂತೆ ಮಧ್ಯಪ್ರವೇಶಿಸಿ ಪ್ರಶಸ್ತಿಗಳನ್ನು ಹೇಗೆ ನೀಡಬೇಕು ಎಂಬುದನ್ನು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗದು. ಸರ್ಕಾರ ಹಾಗೂ ಶಾಸನಬದ್ಧ ಪ್ರಾಧಿಕಾರಗಳು ಎಚ್ಚರಿಕೆಯಿಂದ ರಚಿಸುವ ನೀತಿಗಳ ಕುರಿತಂತೆ ನ್ಯಾಯಾಲಯಗಳು ಸದಾಸಂಯಮ ಪ್ರದರ್ಶನ ಮಾಡಬೇಕಾಗಿದೆ. ಸರ್ಕಾರದ ನೀತಿಗಳು ಒಂದು ವಿಷಯದ ಕುರಿತ ವ್ಯವಹರಿಸುವ ವ್ಯವಸ್ಥೆಯಾಗಿದೆ ಎಂಬುದನ್ನು ಮರೆಯುವಂತಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ರೋಲರ್ ಸ್ಕೇಟಿಂಗ್ ಪಟುವಾಗಿದ್ದು, ರಾಷ್ಟ್ರೀಯ ಜೂನಿಯರ್ ಮತ್ತು ಸೀನಿಯರ್ ಹಾಗೂ ಏಷ್ಯನ್ ಚಾಂಪಿಯನ್‌ಶಿಫ್‌ಗಳಲ್ಲಿ ಭಾಗವಹಿಸಿದ್ದರು. ಅಲ್ಲದೆ, ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಗಕಗಳನ್ನು ಪಡೆದುಕೊಂಡಿದ್ದರು.

ಏಕಲವ್ಯ ಪ್ರಶಸ್ತಿ ಪ್ರದಾನಕ್ಕಾಗಿ ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ನಿಗದಿಪಡಿಸುತ್ತದೆ. ಅದರಂತೆ 2015 ರ ಆಗಸ್ಟ್ 24ರಂದು ಏಕಲವ್ಯ ಪ್ರಶಸ್ತಿಗೆ ಅರ್ಹತೆ ಪಡೆಯಲು ಹಿರಿಯರ ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್ ಮತ್ತು ಕಿರಿಯರ ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವವರಿಗೆ ಅಂಕಗಳನ್ನು ನಿಗದಿಪಡಿಸಿ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಈ ಮಾರ್ಗಸೂಚಿಗಳನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕ್ರೀಡಾ ಇಲಾಖೆಯ ಮಾರ್ಗಸೂಚಿಗಳಲ್ಲಿ, ಕಿರಿಯರ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗಿಂತ ಹಿರಿಯರ ಮಟ್ಟದ ಚಾಂಪಿಯನ್​ಶಿಪ್‌ನಲ್ಲಿ ಭಾಗವಹಿಸುವವರಿಗೆ ಹೆಚ್ಚಿನ ಅಂಕಗಳನ್ನು ನಿಗದಿಪಡಿಸಿದ್ದು, ಇದು ದೋಷದಿಂದ ಕೂಡಿದೆ. ಹೀಗಾಗಿ ಮಾರ್ಗಸೂಚಿಗಳನ್ನು ರದ್ದು ಮಾಡಬೇಕು ಎಂದು ಕೋರಿದರು.

ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಸರ್ಕಾರ ಕ್ರೀಡಾತಜ್ಞರೊಂದಿಗೆ ಚರ್ಚೆ ನಡೆಸಿ ಮಾರ್ಗಸೂಚಿ ರಚನೆ ಮಾಡಿದೆ. ಇದರಲ್ಲಿ ಯಾವುದೇ ದೋಷಗಳಿಲ್ಲ. ಹೀಗಾಗಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಕೋರಿದರು.

ಇದನ್ನೂ ಓದಿ:ಸೇವೆ ವಿಷಯದಲ್ಲಿ ರಾಜಕೀಯ ಅನಪೇಕ್ಷಿತ: ಸರ್ಕಾರಿ ನೌಕರಳ ಕಡ್ಡಾಯ ನಿವೃತ್ತಿ ಎತ್ತಿಹಿಡಿದ ಹೈಕೋರ್ಟ್ - High Court

ABOUT THE AUTHOR

...view details