ಕರ್ನಾಟಕ

karnataka

ETV Bharat / state

ಕನ್ನಡ ವಿರೋಧಿ ಧೋರಣೆಯಿಂದ HAL ಸ್ಥಳೀಯರ ಉದ್ಯೋಗ ಕಸಿದಿದೆ: ಪುರುಷೋತ್ತಮ ಬಿಳಿಮಲೆ - HAL JOB

ಕನ್ನಡ ವಿರೋಧಿ ಧೋರಣೆ ಅನುಸರಿಸುವ ಮೂಲಕ ಹೆಚ್​ಎಎಲ್ ಸ್ಥಳೀಯರ ಉದ್ಯೋಗಾವಕಾಶ ಕಸಿದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರೋಪಿಸಿದ್ದಾರೆ.

By ETV Bharat Karnataka Team

Published : 4 hours ago

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ (ETV Bharat)

ಬೆಂಗಳೂರು: ಖಾಲಿ ಇರುವ ಗ್ರೂಪ್ 'ಸಿ' ಹುದ್ದೆಗಳನ್ನು ಸ್ಥಳೀಯ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ಮತ್ತು ಸ್ಥಳೀಯ ವೃತ್ತ ಪತ್ರಿಕೆಗಳಲ್ಲಿ ಪ್ರಕಟಣೆ ಮಾಡುವುದರ ಮೂಲಕ ತುಂಬಲಾಗುತ್ತಿದೆ ಎನ್ನುವ ಲಿಖಿತ ಮಾಹಿತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದ್ದ ಹೆಚ್​​ಎಎಲ್​ನ ಹಿರಿಯ ಅಧಿಕಾರಿಗಳು ಈಗ ನೇಮಕಾತಿಯಲ್ಲಿ ಎಲ್ಲ ಭರವಸೆಗಳನ್ನು ಗಾಳಿಗೆ ತೂರಿ ಕನ್ನಡಿಗರಿಗೆ ಉದ್ಯೋಗಾವಕಾಶವನ್ನು ನಿರಾಕರಿಸಿದ್ದಾರೆ. ಇದು ಸರ್ಕಾರವನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆರೋಪಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಹೆಚ್​ಎಎಲ್​​ನ ಕೇಂದ್ರೀಯ ಕನ್ನಡ ಸಂಘದ ಪ್ರತಿನಿಧಿಗಳೊಂದಿಗೆ ಡಾ.ಬಿಳಿಮಲೆ ಸಭೆ ನಡೆಸಿದರು. ಕನ್ನಡಕ್ಕೆ ಪ್ರಾತಿನಿಧ್ಯ ಕಲ್ಪಿಸುವಂತೆ ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸೂಚನೆಗೆ ಪ್ರತಿಕ್ರಿಯಿಸಿರುವ ಹೆಚ್​ಎಎಲ್​​ನ ಸಂಸ್ಥೆಯ ಅಪರ ಪ್ರಧಾನ ವ್ಯವಸ್ಥಾಪಕರು ಸಂಸ್ಥೆಯ ಗ್ರೂಪ್ ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಶೇ.90ಕ್ಕೂ ಹೆಚ್ಚಿನ ಉದ್ಯೋಗಗಳನ್ನು ಸ್ಥಳೀಯರಿಗೆ ಸಂಪೂರ್ಣ ಅವಕಾಶವನ್ನು ನೀಡಲಾಗುತ್ತಿದೆ ಎಂಬ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದ್ದು, ಶೀಘ್ರದಲ್ಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೆಚ್​​ಎಎಲ್ ಸಂಸ್ಥೆಗೆ ಭೇಟಿ ನೀಡಿ ಈ ಕುರಿತಂತೆ ಸಮಗ್ರ ಪರಿಶೀಲನೆ ಕೈಗೊಳ್ಳಲಿದೆ. ಹೆಚ್​​ಎಎಲ್​​ನಲ್ಲಿ ಕನ್ನಡಿಗರ ಹಿತ ಕಾಯಲು ಪ್ರಾಧಿಕಾರವು ಬದ್ಧವಾಗಿದ್ದು, ಕೇಂದ್ರೀಯ ಕನ್ನಡ ಸಂಘದ ಹೋರಾಟಕ್ಕೆ ತನ್ನೆಲ್ಲಾ ನೈತಿಕ ಬೆಂಬಲವನ್ನು ನೀಡಲಿದೆ ಎಂದಿದ್ದಾರೆ.

ಕನ್ನಡದ ಕಡೆಗಣನೆ ಖಂಡನೀಯ:ಹೆಚ್​​ಎಎಲ್ ವತಿಯಿಂದ ನಿಶ್ಚಿತ ಅವಧಿಯ ಉದ್ಯೋಗಾಕಾಂಕ್ಷಿಗಳಿಗೆ ನಡೆಸಲಾಗಿರುವ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ನೀಡಿ ಕನ್ನಡ ಕಡೆಗಣಿಸಿರುವುದು ಖಂಡನೀಯ. ಈ ಕಾರಣಕ್ಕೆ ನೂರಾರು ಜನ ಕನ್ನಡೇತರ ಅಭ್ಯರ್ಥಿಗಳು ಬೆಂಗಳೂರಿನ ಹೆಚ್​​ಎಎಲ್​​ನಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಇದು ತ್ರಿಭಾಷಾ ಸೂತ್ರದ ಉಲ್ಲಂಘನೆಯಷ್ಟೇ ಅಲ್ಲ, ಒಕ್ಕೂಟ ವ್ಯವಸ್ಥೆಗೆ ಕೇಂದ್ರ ಸರ್ಕಾರ ನೀಡಿರುವ ಅಗೌರವ. ಈ ಕುರಿತಂತೆ ಸಂಘಟಿತ ಹೋರಾಟಕ್ಕೆ ಅಣಿಯಾಗಬೇಕು. ಅವಶ್ಯಕವಿದ್ದಲ್ಲಿ ಕಾನೂನು ಹೋರಾಟಕ್ಕೂ ಮುಂದಾಗಬೇಕೆಂದು ಸಂಘದವರಿಗೆ ಬಳಿಮಲೆ ಸೂಚನೆ ನೀಡಿದ್ದಾರೆ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯು ನೇಮಕಾತಿಯಲ್ಲಿ ಕರ್ನಾಟಕ ರಾಜ್ಯದ ಉದ್ಯೋಗ ವಿನಿಮಯ ಕೇಂದ್ರದ ನೋಂದಣಿಯನ್ನು ಅಭ್ಯರ್ಥಿಗಳಿಗೆ ಕಡ್ಡಾಯಗೊಳಿಸಿದ್ದು, ಇದು ಸ್ಥಳೀಯರಿಗೆ ಸಹಕಾರಿಯಾಗಿದೆ. ಆದರೆ ಹೆಚ್​ಎಎಲ್​​ ಕನ್ನಡ ವಿರೋಧಿ ಧೋರಣೆ ಮಾತ್ರ ಸ್ಥಳೀಯರ ಉದ್ಯೋಗಾವಕಾಶವನ್ನು ಕಸಿದಿದೆ. ಸಂವಿಧಾನದ ಆಶಯದಂತೆ ಕೇಂದ್ರ ಸರ್ಕಾರದ ಉದ್ದಿಮೆಗಳು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗಳಿಗೆ ಗೌರವ ನೀಡುವುದನ್ನು ರೂಢಿಸಿಕೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿಳಿಮಲೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಗುಡ್‌ನ್ಯೂಸ್‌! 34,863 ಖಾಲಿ ಹುದ್ದೆಗಳನ್ನು ಕಾಲ ಮಿತಿಯಲ್ಲಿ ತುಂಬಲು ಸಿಎಂ ಸೂಚನೆ

ABOUT THE AUTHOR

...view details