ಕರ್ನಾಟಕ

karnataka

ನಿಫಾ ರೋಗಿಗೆ ಆರೈಕೆ ಮಾಡಿದ್ದ ಕಡಬದ ನರ್ಸ್‌ ಕೋಮಾ ಸ್ಥಿತಿಯಲ್ಲಿ; ಮಗನಿಗಾಗಿ ಸರ್ಕಾರದ ಮೊರೆ ಹೋದ ಪೋಷಕರು - KADABA NURSE IN COMA

By ETV Bharat Karnataka Team

Published : Jul 29, 2024, 3:19 PM IST

Updated : Jul 29, 2024, 4:04 PM IST

ನಿಫಾ ವೈರಸ್ ಸೋಂಕಿತನ ಆರೈಕೆ ಮಾಡಿದ್ದ ಕಡಬ ಮೂಲದ ನರ್ಸ್​ಗೂ ನಿಫಾ ಸೋಂಕು ತಗಲಿ ಅಸ್ವಸ್ಥನಾಗಿದ್ದರು. ಬಳಿಕ ಮೆದುಳು ಸ್ಟ್ರೋಕ್​ ಕಾಣಿಸಿಕೊಂಡು ಕಳೆದ ಎಂಟು ತಿಂಗಳಿನಿಂದ ಜೀವನ್ಮರಣ ಹೋರಾಟ ನಡೆಸಿದ್ದಾರೆ. ಮಗನ ಪ್ರಾಣ ಉಳಿಸುವ ಸಲುವಾಗಿ ತಂದೆ, ತಾಯಿ ಹಾಗೂ ಆತನ ಸಹೋದರ ಕೇರಳ ಮತ್ತು ಕರ್ನಾಟಕ ಸರ್ಕಾರದ ಮೊರೆ ಹೋಗಿದ್ದಾರೆ.

KADABA YOUTH IN COMA
ಕೋಮಾ ಸ್ಥಿತಿಯಲ್ಲಿರುವ ಮಗನಿಗಾಗಿ ಸರ್ಕಾರದ ಮೊರೆ ಹೋದ ಪೋಷಕರು (ETV Bharat)

ಕಡಬ (ದಕ್ಷಿಣ ಕನ್ನಡ): ನಿಫಾ ವೈರಸ್ ಸೋಂಕಿಗೆ ತುತ್ತಾದ ರೋಗಿಗೆ ಆರೈಕೆ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಪುರುಷ ನರ್ಸ್​ಗೆ ನಿಫಾ ಸೋಂಕು ತಗಲಿತ್ತು. ಬಳಿಕ ಅನಾರೋಗ್ಯಕ್ಕೀಡಾದ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿ ಕಳೆದ ಎಂಟು ತಿಂಗಳಿನಿಂದ ಕೋಮಾ ಸ್ಥಿತಿಗೆ ತಲುಪಿರುವ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ತೋಮಸ್ ಟಿ.ಸಿ. ಎಂಬುವರ ಪುತ್ರ ಟಿಟ್ಟೋ ತೋಮಸ್(24) ಇದೀಗ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿರುವ ನರ್ಸ್​.

ನರ್ಸ್​ ಟಿಟ್ಟೋ ತೋಮಸ್(24) (ETV Bharat)

ಮೆದುಳು ಸ್ಟ್ರೋಕ್​; ಬಿಎಸ್ಸಿ ನರ್ಸಿಂಗ್ ಪದವೀಧರರಾಗಿರುವ ಟಿಟ್ಟೋ ತೋಮಸ್, ಕೇರಳದ ಕ್ಯಾಲಿಕಟ್​​ನಲ್ಲಿರುವ ಇಕ್ರಾ ಇಂಟರ್ನ್ಯಾಷನಲ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್​​ನಲ್ಲಿ 2023ರಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿರುವಾಗಲೇ 2023 ಸೆಪ್ಟೆಂಬರ್ ತಿಂಗಳಲ್ಲಿ ಇವರು ನಿಫಾ ವೈರಸ್ ಹೊಂದಿದ್ದ ರೋಗಿಯೊಬ್ಬರ ಆರೈಕೆ ಮಾಡಿದ್ದರು. ಆ ಬಳಿಕ ಕ್ವಾರಂಟೈನ್​​​ನಲ್ಲಿದ್ದ ಟಿಟ್ಟೋ ತೋಮಸ್​ಗೆ ಎರಡು ತಿಂಗಳು ಕಳೆದ ನಂತರ ವಿಪರೀತ ತಲೆನೋವು ಕಾಣಿಸಿಕೊಂಡಿತ್ತು. ಡಿಸೆಂಬರ್​​​ನಲ್ಲಿ ಸ್ಕ್ಯಾನಿಂಗ್ ನಡೆಸಿದಾಗ ಮೆದುಳಿನ ಸ್ಟ್ರೋಕ್‌ಗೆ ತುತ್ತಾಗಿರುವುದು ತಿಳಿದು ಬಂದಿದ್ದು, ಮರುದಿನವೇ ಟಿಟ್ಟೋ ಕೋಮಾಗೆ ಜಾರಿದರು.

ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅವರಲ್ಲಿ ಮನವಿ (ETV Bharat)

ಚಿಕಿತ್ಸೆಯ ₹40 ಲಕ್ಷ ಖರ್ಚು ಭರಿಸಿದ ಆಸ್ಪತ್ರೆ; ''ಆನಂತರ ಅದೇ ಆಸ್ಪತ್ರೆಯ ಆಡಳಿತ ಮಂಡಳಿ ವತಿಯಿಂದಲೇ ಚಿಕಿತ್ಸೆ ನೀಡಿದ್ದರೂ, ಯಾವುದೇ ಫಲ ಕಂಡಿಲ್ಲ. ಆಡಳಿತ ಮಂಡಳಿ ಈಗಾಗಲೇ 40 ಲಕ್ಷ ರೂ.ಗಳಷ್ಟು ಖರ್ಚು ಸಹ ಭರಿಸಿದೆ. ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಹೀಗಾಗಿ ಉನ್ನತ ಮಟ್ಟದ ಆಸ್ಪತ್ರೆಗೆ ದಾಖಲಿಸಿ ಮಗನಿಗೆ ಚಿಕಿತ್ಸೆ ನೀಡುವಂತೆ ಕೇರಳ ಸರ್ಕಾರದ ಬಾಗಿಲು ತಟ್ಟಲಾಗಿದೆ. ಸರ್ಕಾರದ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ. ಈ ವಿಚಾರವನ್ನು ಮಲಯಾಳಿ ಅಸೋಸಿಯೇಷನ್ ಕಡಬ ಘಟಕದ ಮೂಲಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅವರ ಮೂಲಕ ಕರ್ನಾಟಕ ಸರ್ಕಾರದ ಗಮನಕ್ಕೂ ತರಲಾಗಿದೆ'' ಎಂದು ತೋಮಸ್ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ.

ನಿಫಾ ಸೋಂಕಿನಿಂದ ತತ್ತರಿಸಿರುವ ಟಿಟ್ಟೋನ ಪ್ರಾಣ ಉಳಿಸುವ ಸಲುವಾಗಿ ತಂದೆ, ತಾಯಿ ಹಾಗೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಸಹೋದರ ಕಳೆದ ಎಂಟು ತಿಂಗಳಿನಿಂದ ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಆಸ್ಪತ್ರೆಗೆ ಅಲೆದಾಡುವುದೇ ದೈನಂದಿನ ಕಾಯಕವಾಗಿದೆ. ರೋಗಿಯೊಬ್ಬರ ಆರೈಕೆ ಮಾಡುತ್ತಿದ್ದ ಪದವೀಧರ ಯುವಕ ಇದೀಗ ತಾನೇ ಮಾರಕ ರೋಗಕ್ಕೆ ತುತ್ತಾಗಿ ಕಳೆದ ಎಂಟು ತಿಂಗಳುಗಳಿಂದ ಬೇರೆಯವರ ಆರೈಕೆಯಲ್ಲಿ ದಿನ ದೂಡುವುದು ಕುಟುಂಬಸ್ಥರನ್ನು ಚಿಂತಾಕ್ರಾಂತರನ್ನಾಗಿಸಿದೆ. ಜೊತೆಗೆ ವೈದ್ಯ ಲೋಕಕ್ಕೂ ಇದೊಂದು ಸವಾಲಾಗಿ ಪರಿಣಮಿಸಿದೆ.

ನರ್ಸ್​ ಟಿಟ್ಟೋ ತೋಮಸ್(24) (ETV Bharat)

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಟಿಟ್ಟೋ ಸಹೋದರ ಶಿಜೋ ಜಾಯ್, ''ಕಳೆದ ಎಂಟು ತಿಂಗಳ ಹಿಂದೆ ಕೋಮಾವಸ್ಥೆಗೆ ಜಾರಿದ ತಮ್ಮನ ಆರೋಗ್ಯ ಇಂದಲ್ಲ, ನಾಳೆ ಸರಿಯಾಗಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಇಷ್ಟು ಸಮಯ ನಾವು ಕಾದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ಕೇರಳ ಸರ್ಕಾರದ ಗಮನಕ್ಕೆ ತರಬೇಕಾದ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ನಿಲ್ಲಬೇಕಾದ ಅನಿವಾರ್ಯತೆಯಿಂದ ನಾನೀಗ ಮಾಡುತ್ತಿದ್ದ ಕೆಲಸಕ್ಕೂ ರಾಜೀನಾಮೆ ನೀಡಿ ಆಸ್ಪತ್ರೆಯಲ್ಲೇ ಉಳಿಯುವಂತಾಗಿದೆ. ಮನೆಯವರೂ ಇಲ್ಲೇ ಇರೋದರಿಂದ ಆರ್ಥಿಕವಾಗಿ, ಮಾನಸಿಕವಾಗಿ ಮತ್ತು ಶಾರೀರಿಕವಾಗಿ ತುಂಬಾ ಸಮಸ್ಯೆಗಳು ಎದುರಾಗುತ್ತಿವೆ. ಕೇರಳ ಸರ್ಕಾರ ಉನ್ನತ ಮಟ್ಟದ ಚಿಕಿತ್ಸೆಗೆ ನೆರವಾದರೆ ನನ್ನ ಸಹೋದರನ ಪ್ರಾಣ ಉಳಿಸಬಹುದಾಗಿದೆ ಎಂಬ ಭರವಸೆ ನಮಗಿದೆ ಎಂದಿದ್ದಾರೆ.

ಇದನ್ನೂ ಓದಿ: ದ.ಕ. ಜಿಲ್ಲೆಯಲ್ಲಿ ನಿಫಾ ವೈರಸ್ ಸೋಂಕು ಕಂಡು ಬಂದಿಲ್ಲ, ಆತಂಕ ಬೇಡ: ಆರೋಗ್ಯಾಧಿಕಾರಿ - Nipah virus

Last Updated : Jul 29, 2024, 4:04 PM IST

ABOUT THE AUTHOR

...view details