ಹಾವೇರಿ: ನಾವೆಲ್ಲರೂ ಭಾರತೀಯರು. ಭಾರತೀಯತೆ, ರಾಷ್ಟ್ರವಾದ ನಮ್ಮ ಪ್ರೇಮ. ರಾಷ್ಟ್ರವಾದ ಗಂಗಾ ನದಿಯಂತೆ ಪವಿತ್ರವಾದದ್ದು. ರಾಷ್ಟ್ರವಾದದಲ್ಲಿ ಎಲ್ಲ ಸಮಾಜಗಳೂ ಇವೆ. ಐದು ಸಾವಿರ ವರ್ಷಗಳಷ್ಟು ಹಳೆಯ ಸಂಸ್ಕೃತಿ ನಮ್ಮದು. ಇಂತಹ ಐತಿಹಾಸಿಕ ಸಂಸ್ಕೃತಿ ಉಳಿಸುವುದು ನಮ್ಮ ಕರ್ತವ್ಯ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರಿನಲ್ಲಿಂದು ಕರ್ನಾಟಕ ವೈಭವ ಸಮಾರಂಭ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಅರ್ಥವ್ಯವಸ್ಥೆಯಲ್ಲಿ ಭಾರತ ಇಂದು ಜಗತ್ತಿನ ಐದನೇ ಬಲಶಾಲಿ ರಾಷ್ಟ್ರ. ಭವಿಷ್ಯದಲ್ಲಿ ಮೂರನೇ ಬಲಿಷ್ಠವಾದ ದೇಶವಾಗಲಿದೆ. ಜಗತ್ತು ಭಾರತದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದೆ ಎಂದರು.
ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಮಾತನಾಡಿದರು. (ETV Bharat) ಕಾಶ್ಮೀರದಲ್ಲಿ ವಿಕಾಸ ಕಾಣಿಸುತ್ತಿದೆ. ಎರಡು ಕೋಟಿ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ದೇಶದ ಕೊಡುಗೆಯಲ್ಲಿ ಕಾಶ್ಮೀರದ ಪಾಲೂ ಇದೆ ಎಂದು ಹೇಳಿದರು.
ರಾಷ್ಟ್ರೀಯ ಭಾವನೆ ಎಲ್ಲರಲ್ಲೂ ಮೂಡಬೇಕು. ಹತ್ತು ವರ್ಷಗಳ ಹಿಂದೆ ಭಾರತ ಹೇಗಿತ್ತು?. ನಿರಾಶೆಯಿಂದ ಕೂಡಿದ ವ್ಯವಸ್ಥೆ ಆಗಿತ್ತು. ಈಗ ಕೇಂದ್ರ ಸರ್ಕಾರದ ಸಕಾರಾತ್ಮಕ ಕ್ರಮಗಳಿಂದ ವ್ಯವಸ್ಥೆ ಅಭಿವೃದ್ಧಿಯತ್ತ ಸಾಗಿದೆ ಎಂದರು.
ಜಗತ್ತಿನಲ್ಲೇ ಹೂಡಿಕೆ ಮತ್ತು ಅವಕಾಶಗಳಿಗೆ ಭಾರತ ಅತ್ಯುತ್ತಮವಾದ ದೇಶವಾಗಿದೆ. ಷಡ್ಯಂತ್ರ ಮಾಡುವವರಿಗೆ ವಿದೇಶಿ ಕಠಿಣ ಶಾಸನಗಳ ಮೂಲಕ ಕೇಂದ್ರ ಸರ್ಕಾರ ಎಚ್ಚರಿಕೆ ಕೊಟ್ಟಿದೆ ಎಂದು ಹೇಳಿದರು.
ಭಾರತದಲ್ಲಿ ಪ್ರಸ್ತುತ ದೊಡ್ಡ ಯಜ್ಞ ನಡೆಯುತ್ತಿದೆ. ವಿಕಸಿತ ಭಾರತ ನಮ್ಮ ಕನಸಲ್ಲ, ಲಕ್ಷ್ಯ. ಇದು ನಿಶ್ಚಿತ. ಯಾರೂ ತಡೆಯಲಾಗುವುದಿಲ್ಲ. 2040ರೊಳಗೆ ಭಾರತ ವಿಕಸಿತ ಭಾರತ ಆಗುತ್ತದೆ. ಅದಕ್ಕೂ ಮುಂಚೆಯೇ ಆಗಬಹುದು ಎಂದರು.
ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಯ ಕುರಿತು ಚರ್ಚೆ ಯಾಕೆ ಆಗುತ್ತದೆ ಎಂಬುದು ಆಶ್ಚರ್ಯ ಉಂಟುಮಾಡುತ್ತದೆ. ರಾಷ್ಟ್ರವಿರೋಧಿ ಭಾವನೆ ಬಿಂಬಿಸಲು ಕೆಲವರು ಸಂಚು ಮಾಡುತ್ತಾರೆ. ಅಪಮಾನ ಮಾಡುತ್ತಿದ್ದಾರೆ. ಬೇರೆ ಯಾವುದೇ ದೇಶದಲ್ಲಿ ಇಂತಹ ಕೆಲಸ ಆಗಿಲ್ಲ. ಈ ಕುರಿತು ಚಿಂತನೆ ಆಗಬೇಕಿದೆ ಎಂದು ಹೇಳಿದರು.
ಇಂದಿನ ಭಾರತವನ್ನು ಪ್ರಗತಿಯ ದೃಷ್ಟಿಯಿಂದ ನೋಡಿ. ಜಗತ್ತಿನಲ್ಲಿ ಭಾರತ ಪ್ರಭಾವಶಾಲಿ ದೇಶವಾಗಿದೆ. ಕರ್ನಾಟಕ ಕಲೆ, ಸಂಸ್ಕೃತಿ, ಪರಂಪರೆ, ಧಾರ್ಮಿಕತೆಯ ತವರೂರು. ಕದಂಬ, ಚಾಲುಕ್ಯ, ವಿಜಯನಗರ ಸಾಮ್ರಾಜ್ಯದ ಬಗ್ಗೆ ತಿಳಿದುಕೊಂಡರೆ ತಿಳಿಯುತ್ತದೆ. ಬಸವೇಶ್ವರರು, ಅಕ್ಕಮಹಾದೇವಿ, ಭರತನಾಟ್ಯ, ಯಕ್ಷಗಾನ ಕಲೆ ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಇಲ್ಲಿಯ ಗುಹೆಗಳಿಂದ ಕೇಳಿ ಬರುತ್ತಿದೆ ರಾಮಪಠಣದ ಶಬ್ಧಗಳು.. ಇದು ದೇಶದ ಎರಡನೇ ಚಿತ್ರಕೂಟ ಧಾಮ: ಇರೋದೆಲ್ಲಿ ಗೊತ್ತಾ? - REWA CHITRAKOOT DHAM CAVES