ಕರ್ನಾಟಕ

karnataka

ETV Bharat / state

ಜನರ ಆಶೀರ್ವಾದ ಇರೋವರೆಗೆ ನನ್ನನ್ನು ಯಾರೂ ಅಲ್ಲಾಡಿಸಲು ಆಗಲ್ಲ: ಯಲ್ಲಮ್ಮನ ಗುಡ್ಡದಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು

ಜನರ ಅಶೀರ್ವಾದ ಇರುವವರೆಗೆ ನನ್ನನ್ನು ಯಾರೂ ಅಲ್ಲಾಡಿಸಲು ಆಗಲ್ಲ. ನಾವು ನಿಮ್ಮೊಂದಿಗೆ (ಜನರೊಂದಿಗೆ) ಇರ್ತೇವೆ, ನೀವು ನಮ್ಮೊಂದಿಗಿರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.

By ETV Bharat Karnataka Team

Published : 5 hours ago

ಯಲ್ಲಮ್ಮನ ಗುಡ್ಡದಲ್ಲಿ ಸಿಎಂ ಸಿದ್ದರಾಮಯ್ಯ
ಯಲ್ಲಮ್ಮನ ಗುಡ್ಡದಲ್ಲಿ ಸಿಎಂ ಸಿದ್ದರಾಮಯ್ಯ (ETV Bharat)

ಬೆಳಗಾವಿ: ಹೇಗಾದರೂ ಮಾಡಿ ನನ್ನನ್ನು ಅಧಿಕಾರದಿಂದ ತೆಗೆಯಬೇಕು ಎಂದು ಈಗಲೂ ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಜನರ ಆಶೀರ್ವಾದ ಇರೋವರೆಗೂ ನನ್ನ ಯಾರೂ ಅಲ್ಲಾಡಿಸೋಕೆ ಆಗಲ್ಲ. ಜನಶಕ್ತಿ ಮುಂದೆ ಯಾವ ಶಕ್ತಿಯೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಾನುವಾರ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 22.45 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿಗರಿಗೆ ನಿರ್ಮಿಸಲಾಗಿರುವ ಕೊಠಡಿಗಳು, ಡಾರ್ಮಿಟರಿ, ಪಾರ್ಕಿಂಗ್, ಉದ್ಯಾನ ಮತ್ತಿತರ ಮೂಲಸೌಕರ್ಯಗಳು ಮತ್ತು ಮಹಿಳಾ ಅಭಿವೃದ್ಧಿ ನಿಗಮದಿಂದ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳು ಮತ್ತು ಅತಿಥಿಗೃಹವನ್ನು ಉದ್ಘಾಟಿಸಿ, ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಲ್ಲಮ್ಮನ ಗುಡ್ಡದಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು (ETV Bharat)

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನ ಗೆದ್ದಿತು. ನಾವು 9 ಸ್ಥಾನ ಗೆದ್ದೆವು. ಜೆಡಿಎಸ್ 2 ಸ್ಥಾನ ಗೆದ್ದಿತು. ಏನೂ ಮಾಡದೇ ಬಿಜೆಪಿ ಪ್ರಚಾರ ಪಡೆಯುತ್ತದೆ. ಹಿಂದೂಗಳು, ಹಿಂದುತ್ವದ ಹೆಸರಲ್ಲಿ ಜನರನ್ನು ಒಡೆಯುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಈ ನಾಡು ಉಳಿಯಬೇಕಾದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು. ನಮ್ಮ ಸರ್ಕಾರ ಇನ್ನೂ ಮೂರುವರೇ ವರ್ಷ ಇರುತ್ತದೆ. ಆ ಅವಧಿಯಲ್ಲಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಬಸವಣ್ಣ ಸಾಂಸ್ಕೃತಿಕ ನಾಯಕ; ಬಿಜೆಪಿಯವರು ಧರ್ಮ, ಆಚಾರ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಮಾತಾಡುತ್ತಾರೆ. ಆದರೆ, ಯಲ್ಲಮ್ಮ ದೇವಿ ಕ್ಷೇತ್ರದಲ್ಲಿ ಏನಾದ್ರೂ ಅಭಿವೃದ್ಧಿ ಮಾಡಿದ್ದಾರಾ?. ದೇವರು ಮತ್ತು ಧರ್ಮ ಮನುಷ್ಯ ಮನುಷ್ಯನನ್ನು ಪ್ರೀತಿಸಿ ಎನ್ನುತ್ತವೆ. ಬಿಜೆಪಿಯವರ ರೀತಿ ಧರ್ಮದ ಹೆಸರಲ್ಲಿ, ಜಾತಿ ಹೆಸರಲ್ಲಿ ಸಮಾಜ ಒಡೆಯಿರಿ ಎಂದು ಹೇಳುವುದಿಲ್ಲ. ಬಸವಣ್ಣನವರನ್ನು ನಾವು ಸಾಂಸ್ಕೃತಿಕ ನಾಯಕನನ್ನಾಗಿ ಮಾಡಿದ್ದೇವೆ. ಸಮಾಜದಲ್ಲಿ ಅಸಮಾನತೆ ಹೋಗಬೇಕು ಎಂದು ತಿಳಿಸಿದರು.

ಯಲ್ಲಮ್ಮ ಕ್ಷೇತ್ರದಲ್ಲಿ 7 ರಿಂದ 8 ಸಾವಿರ ಜನಕ್ಕಾದರೂ ಕುಡಿಯುವ ನೀರು, ವಸತಿ ವ್ಯವಸ್ಥೆ ಮಾಡಬೇಕು. ಇದನ್ನೆಲ್ಲಾ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತೇವೆ. ಅದಕ್ಕೆ ನಿಮ್ಮ ಸಹಕಾರ ಬೇಕು. ಯಾವ ಕಾರಣಕ್ಕೂ ಕಾನೂನು ಬಾಹಿರವಾಗಿ ಮಳಿಗೆಗಳನ್ನು ಮಾಡಿಕೊಳ್ಳಬೇಡಿ. ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡುವ ಸಲುವಾಗಿ ‌ಪ್ರಾಧಿಕಾರಿಗಳನ್ನು ಸ್ಥಾಪಿಸಲಾಗಿದೆ. ಕನಿಷ್ಠ 3000 ಸಾವಿರ ಜನರ ದಾಸೋಹಕ್ಕೆ ದಾಸೋಹ ಕೇಂದ್ರ ಸ್ಥಾಪಿಸುತ್ತೇವೆ. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ. ಈ ರೀತಿ ಯಾವ ಸರ್ಕಾರಗಳು ಮಾಡಿಕೊಟ್ಟಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಯಲ್ಲಮ್ಮನ ಗುಡ್ಡದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು (ETV Bharat)

ಡಿಸಿಎಂ ಡಿ.ಕೆ. ಶಿವಕುಮಾರ ಮಾತನಾಡಿ, ಬಿಜೆಪಿಯವರು ದೇವರು, ಧರ್ಮ ಅವರ ಆಸ್ತಿ ಅಂದುಕೊಂಡಿದ್ದಾರೆ. ಬಿಜೆಪಿಯವರು ಧರ್ಮದಲ್ಲಿ ರಾಜಕಾರಣ ಮಾಡೋಕೆ ಪ್ರಯತ್ನಿಸುತ್ತಾರೆ. ಧರ್ಮ ಯಾರೊಬ್ಬನ ಸ್ವತ್ತಲ್ಲ. ದೇವನೊಬ್ಬ ನಾಮ ಹಲವು. ಧರ್ಮ ಪಾಲನೆ ವೈಯಕ್ತಿಕ ವಿಚಾರ. ಯಾವ ಧರ್ಮವನ್ನು ಬೇಕಾದರೂ ನೀವು ಪಾಲನೆ ಮಾಡಬಹುದು ಎಂದರು.

ಇನ್ನು, ಗ್ಯಾರಂಟಿ ಯೋಜನೆಯನ್ನು ನಡೆಸಿಕೊಡುವ ಶಕ್ತಿ ಕೊಡು ಎಂದು ಪ್ರಾರ್ಥಿಸಿದ್ದೇವೆ. ಗ್ಯಾರಂಟಿ ಯೋಜನೆ ಜಾರಿಯಾದ ಮೇಲೆ ಧರ್ಮಸ್ಥಳಕ್ಕೆ ಬರುವ ಜನರ ಸಂಖ್ಯೆ ‌ಹೆಚ್ಚಾಗಿದೆ ಅಂತ ಪತ್ರ ಬರೆದಿದ್ದಾರೆ. ರಾಮಲಿಂಗಾ ರೆಡ್ಡಿ ಅವರು ಅರ್ಚಕರಿಗೆ ವಿಮೆ ಯೋಜನೆಗೆ 5 ಲಕ್ಷ ಜೀವನೋದ್ಧಾರಕ್ಕೆ ಕೊಡುವ ಯೋಜನೆ ಮಾಡಿದ್ದರು. ನಾವು ಮಾಡಿದ ಬಿಲ್ ವಿರೋಧ ಮಾಡಿ ಅದನ್ನು ನಿಲ್ಲಿಸಿದ್ದಾರೆ. ಸಿಎಂ ಹೆಸರು ಅವರ ಪತ್ನಿ ಹೆಸರು, ಸಚಿವರ ಹೆಸರನ್ನು ಹೇಳಿ ಅರ್ಚಕರು ಅರ್ಚನೆ ಮಾಡಿದರು. ಅಂಥ ಅರ್ಚಕರಿಗೆ ಯೋಜನೆ ತಂದರೆ ಇದನ್ನು ವಿರೋಧ ಮಾಡುತ್ತಿರಿ. ಇಂದು ಸಿದ್ದರಾಮಯ್ಯ 30 ಕೋಟಿ ರೂ. ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದಾರೆ. ಯಾಕೆ ಯಡಿಯೂರಪ್ಪ, ಬೊಮ್ಮಾಯಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ಸತೀಶ್​ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ವಿಶ್ವಾಸ ವೈದ್ಯ, ರಾಜು ಕಾಗೆ, ಬಾಬಾಸಾಹೇಬ್ ಪಾಟೀಲ್​, ಆಸಿಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ:ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ: ಪತ್ನಿ ಪಾರ್ವತಿ ಹೆಸರಲ್ಲಿ ವಿಶೇಷ ಪೂಜೆ

ABOUT THE AUTHOR

...view details