ಮಂಗಳೂರು: ಕಾರವಾರದಿಂದ ಕೊಚ್ಚಿಯತ್ತ ಹೈಡ್ರೋಕ್ಲೋರಿಕ್ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ವಾಹನದಲ್ಲಿ ಕೋಟೆಕಾರ್ ಉಚ್ಚಿಲ ಸಮೀಪ ಸೋರಿಕೆ ಉಂಟಾಗಿತ್ತು. ಬಳಿಕ ಜಿಲ್ಲಾಡಳಿತ ಹಾಗೂ ತಹಶೀಲ್ದಾರ್ ಅವರ ಸೂಚನೆ ಮೇರೆಗೆ ಅಗ್ನಿಶಾಮಕ ದಳ, ರಾಜ್ಯ ವಿಪತ್ತು ಪಡೆ (ಎಸ್ಡಿಆರ್ಎಫ್) ಹಾಗೂ ಬಿಎಎಸ್ಎಫ್ ತಂಡ ನಿರಂತರ ಕಾರ್ಯಾಚರಣೆ ನಡೆಸುವ ಮೂಲಕ ಟ್ಯಾಂಕರಿನಲ್ಲಿದ್ದ 33,000 ಲೀಟರ್ (ಐಬಿಸಿ) ಅನ್ನು ಬೇರೆ ಟ್ಯಾಂಕರ್ಗೆ ವರ್ಗಾಯಿಸುವ ಕಾರ್ಯ ನಡೆಯುತ್ತಿದೆ.
ಸೋಮವಾರ ಮಧ್ಯಾಹ್ನ 12.30 ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೇರಳದ ಕೊಚ್ಚಿಯತ್ತ ತೆರಳುತ್ತಿದ್ದ ಟ್ಯಾಂಕರಿನಲ್ಲಿ ಸೋರಿಕೆ ಆರಂಭವಾಗಿದೆ. ಕೋಟೆಕಾರು ಉಚ್ಚಿಲ ಸಮೀಪ ಟ್ಯಾಂಕರ್ ಚಾಲಕ ಬೇರೆ ವಾಹನದ ಚಾಲಕರ ಸೂಚನೆ ಮೇರೆಗೆ ಟ್ಯಾಂಕರ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಈ ವೇಳೆ ಟ್ಯಾಂಕರಿನೊಳಗಿದ್ದ ಹೈಡ್ರೋಕ್ಲೋರಿಕ್ ಅನಿಲ ಸೋರಿಕೆಯಾಗುವುದನ್ನು ಗಮನಿಸಿ, ಸ್ಥಳೀಯ ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಮತ್ತು ಉಳ್ಳಾಲ ಠಾಣೆಯ ಪೊಲೀಸರು ಆಗಮಿಸಿ ಅಗ್ನಿ ಶಾಮಕ ದಳ ಠಾಣೆಗೆ ಮಾಹಿತಿ ನೀಡಿದ್ದಾರೆ. ನಿರಂತರವಾಗಿ ಸೋರಿಕೆ ಆಗುತ್ತಿರುವುದಕ್ಕೆ ಎಂಸೀಲ್ ಹಾಕಿ ಅನಿಲವನ್ನು ತಡೆಯುವ ಪ್ರಯತ್ನ ನಡೆಯಿತು. ಆದರೆ ಅದು ಯಶಸ್ವಿಯಾಗಲಿಲ್ಲ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆ ಉಂಟಾಗುತ್ತಲೇ ಇತ್ತು.