ಕರ್ನಾಟಕ

karnataka

ETV Bharat / state

ತೆಂಗಿನಕಾಯಿ ದರ ಏರಿಕೆ, ಹೋಟೆಲ್ ಮಾಲೀಕರಿಗೆ ದೋಸೆ ಜೊತೆ ಚಟ್ನಿ ಕೊಡೋದೆ ಚಿಂತೆ! - COCONUT PRICE

ತೆಂಗಿನಕಾಯಿ ದರ ಏರಿಕೆ ಆಗಿರುವುದರಿಂದ ಹೋಟೆಲ್​ಗಳಲ್ಲಿ ನಾನಾ ತಿಂಡಿಗಳೊಂದಿಗೆ ಕಾಯಿ ಚಟ್ನಿ ಬಡಿಸುವುದೇ ಮಾಲೀಕರಿಗೆ ಸವಾಲಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನೂರ್​ ಮಾಡಿರುವ ವಿಶೇಷ ವರದಿ ಇಲ್ಲಿದೆ..

coconut
ದೋಸೆ ಚಟ್ನಿ ಹಾಗೂ ತೆಂಗಿನಕಾಯಿ (ETV Bharat)

By ETV Bharat Karnataka Team

Published : Jan 5, 2025, 5:41 PM IST

Updated : Jan 5, 2025, 10:54 PM IST

ದಾವಣಗೆರೆ :ತೆಂಗಿನಕಾಯಿ ದರ ದಿಢೀರ್ ಗಗನಕ್ಕೇರಿಕೆಯಾಗಿದೆ. ಚಟ್ನಿಗೆ ಹೆಚ್ಚು ಬಳಕೆ ಆಗುವ ತೆಂಗಿನ ಕಾಯಿಗೆ ಇದೀಗ ಬಂಗಾರದ ಬೆಲೆ ಬಂದಿದೆ. ಹೋಟೆಲ್‌ಗಳಲ್ಲಿ ನಾನಾ ತಿಂಡಿಗಳೊಂದಿಗೆ ಗ್ರಾಹಕರಿಗೆ ಕಾಯಿ ಚಟ್ನಿ ಕೊಡುವುದೇ ಮಾಲೀಕರಿಗೆ ಸವಾಲಾಗಿ ಪರಿಣಮಿಸಿದೆ. ದರ ಏರಿಕೆಯ ಬಿಸಿ ಬೆಣ್ಣೆ ದೋಸೆ ಹೋಟೆಲ್​ಗಳಿಗೂ ತಟ್ಟಿದೆ. ಇದರಿಂದ ಬೆಣ್ಣೆ ದೋಸೆಯ ದರವನ್ನು ಹೆಚ್ಚಿಸಲು ಮಾಲೀಕರು ಚಿಂತನೆ ನಡೆಸಿದ್ದಾರೆ. ಮತ್ತಷ್ಟು ಹೋಟೆಲ್​ಗಳು ಈಗಾಗಲೇ ತಿಂಡಿ ಜೊತೆ ಚಟ್ನಿ ಕೊಡುವುದನ್ನು ನಿಲ್ಲಿಸಿವೆ.

ಬೆಣ್ಣೆ ದೋಸೆ ಹೋಟೆಲ್​ಗಳಿಗೂ ಕಾಯಿ ಚಟ್ನಿಗೂ ಬಿಡಿಸಲಾಗದ ನಂಟಿದೆ. ಚಟ್ನಿ ಇಲ್ಲದೆ ದೋಸೆ ಸವಿಯುವುದು ಉಪ್ಪಿಲ್ಲದೆ ಊಟದಂತೆ ಅನ್ನೋ ಮಾತಿದೆ. ಇದೀಗ ಕಾಯಿ ದರ ಗಗನ್ನಕ್ಕೆ ಏರಿರುವುದರಿಂದ ದೋಸೆ ದರವನ್ನು ಹೆಚ್ಚಿಸಲು ತೆರೆ ಮರೆಯಲ್ಲಿ ಮಾಲೀಕರು ಸಿದ್ಧತೆ ನಡೆಸಿದ್ದಾರೆ. ಇನ್ನಷ್ಟು ಹೋಟೆಲ್​ಗಳಲ್ಲಿ ತಿಂಡಿ ಜೊತೆ ಕಾಯಿ ಕಡಿಮೆ ಬಳಸಿ, ಕಡಲೆ ಹೆಚ್ಚು ಬಳಸಿ ಚಟ್ನಿ ರೆಡಿ ಮಾಡಿ ಗ್ರಾಹಕರಿಗೆ ಕೊಡಲಾಗುತ್ತಿದೆ. ಆದರೆ ಬೆಣ್ಣೆ ದೋಸೆಗೆ ಚಟ್ನಿ ನೀಡಲೇಬೇಕಿರುವುದರಿಂದ ಕೆಲ ಹೋಟೆಲ್‌ ಮಾಲೀಕರು ಅನಿವಾರ್ಯವಾಗಿ ಹೆಚ್ಚು ಬೆಲೆ ತೆತ್ತು ಕಾಯಿ ಖರೀದಿಸಿ, ಗ್ರಾಹಕರಿಗೆ ಕಾಯಿ ಚಟ್ನಿ ಉಣಬಡಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಗೆ ಸಂತೆಬೆನ್ನೂರು, ರಾಮಗಿರಿ, ಹೊಸದುರ್ಗ, ಭದ್ರಾವತಿ, ತುಮಕೂರು, ಗುಬ್ಬಿ ಭಾಗದಿಂದ ತೆಂಗಿನಕಾಯಿಗಳು ಆಮದಾಗುತ್ತವೆ.

ತೆಂಗು ಸಗಟು ವ್ಯಾಪಾರಿ ಶಿವಕುಮಾರ್ ಹಾಗೂ ಬೆಣ್ಣೆ ದೋಸೆ ಹೋಟೆಲ್ ಮಾಲೀಕ ನರೇಂದ್ರ ಮಾತನಾಡಿದರು (ETV Bharat)

ತೆಂಗಿನಕಾಯಿ ದರ ಏರಿಕೆಗೆ ಪ್ರಮುಖ ಕಾರಣ ಏನು, ಪ್ರಸ್ತುತ ದರ ಎಷ್ಟಿದೆ :ತೆಂಗು ಸಗಟು ವ್ಯಾಪಾರಿ ಶಿವಕುಮಾರ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, “ಸಾಕಷ್ಟು ರೈತರು ತೆಂಗು ಬೆಳೆಯುವುದನ್ನು ಬಿಟ್ಟು, ಅಡಿಕೆ ಬೆಳೆಯತ್ತ ವಾಲಿದ್ದರರಿಂದ ತೆಂಗಿನಕಾಯಿ ಮಾರುಕಟ್ಟೆಗೆ ಬಾರದ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಬಾರಿ ಫಸಲು ಕೂಡ ಕಡಿಮೆ ಇದೆ. ಕಾಯಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೆ ಕಳೆದ ವರ್ಷ ಮಳೆ ಬಾರದೆ ಬರ ಆವರಿಸಿದ ಕಾರಣ ತೆಂಗಿನಕಾಯಿ ಇಳುವರಿ ಕುಸಿದಿದೆ. ಇದರಿಂದ ಹೋಟೆಲ್ ಮಾಲೀಕರು ತೊಂದರೆ ಎದುರಿಸುವಂತಾಗಿದೆ. ಜತೆಗೆ, ಚಟ್ನಿ ಚೆನ್ನಾಗಿ ಆಗ್ಬೇಕಾದರೆ ಕಾಯಿ ಅಗತ್ಯ. ಇದರಿಂದ ಹೋಟೆಲ್ ಅವರು ಕಷ್ಟ ಎದುರಿಸುವಂತಾಗಿದೆ. ಗಣೇಶನ ಹಬ್ಬದಿಂದಲೇ ದರ ಏರುಪೇರಾಗಿದೆ. ಒಂದು ಕಾಯಿ ಹೋಲ್ ಸೇಲ್ ದರ 26 ರಿಂದ 28 ರೂಪಾಯಿ ಇದೆ. ಚಿಲ್ಲರೆ 30-35 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ದಾವಣಗೆರೆಗೆ ಚಿಕ್ಕಜಾಜೂರು, ಹೊಸದುರ್ಗ, ಹೊಳಲ್ಕೆರೆ, ರಾಮಗಿರಿ ಭಾಗದಿಂದ ಹೆಚ್ಚು ತೆಂಗು ಆಮದಾಗುತ್ತದೆ” ಎಂದು ಮಾಹಿತಿ ನೀಡಿದರು.

ತೆಂಗಿನಕಾಯಿ (ETV Bharat)

ಎಂಪಿಎಂಸಿಯಲ್ಲಿ ಬಂದ್ ಆಗ್ತಿವೆ ದಲ್ಲಾಳಿ ಮಂಡಿಗಳು : ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ 30ಕ್ಕೂ ಹೆಚ್ಚು ಮಂಡಿಗಳಿವೆ. ಆದರೆ 10-12 ಅಂಗಡಿಗಳಿಗೆ ಮಾತ್ರ ಕಾಯಿಗಳು ಬರುತ್ತವೆ. ಸರಿಯಾಗಿ ಕಾಯಿ ಬಾರದ ಕಾರಣ ಈಗಾಗಲೇ 08-10 ಅಂಗಡಿಗಳು ಬಂದ್ ಆಗಿವೆ. ಇಳುವರಿ ಕಡಿಮೆ ಇರುವುದರಿಂದ ಈ ರೀತಿಯ ಸಮಸ್ಯೆ ಕಾಡುತ್ತಿದೆ ಎಂದು ಕಾಯಿ ವ್ಯಾಪಾರಿ ಶಿವಕುಮಾರ್ ತಿಳಿಸಿದರು.

ಬೆಣ್ಣೆ ದೋಸೆ (ETV Bharat)

ಹೋಟೆಲ್ ಮಾಲೀಕರು ಹೀಗಂತಾರೆ :ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್ ಮಾಲೀಕ ನರೇಂದ್ರ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, “ಕಾಯಿ ದರ ಏರಿಕೆ ಆಗಿದ್ದರಿಂದ ಸಮಸ್ಯೆ ಆಗಿದೆ. ದೋಸೆಗೆ ಕಾಯಿ ಚಟ್ನಿ ಬೇಕೇಬೇಕಾದ ಪರಿಸ್ಥಿತಿ ಇದೆ. ಕಾಯಿ ದರ ಏರಿಕೆ ಆಗಿದೆ ಎಂದು ಕಡ್ಲೆ ಹಿಟ್ಟು, ಕೊತ್ತಂಬರಿ ಹಾಕಿ ಚಟ್ನಿ ಮಾಡಲು ಸಾಧ್ಯವಾಗದ ಮಾತು. 16-18 ರೂಪಾಯಿ ಇದ್ದ ಕಾಯಿ ದರ ಇದೀಗ 34-35ಕ್ಕೆ ಏರಿಕೆ ಆಗಿದೆ. ಕಾಯಿ ಕಳಿಸಲು ಕೂಡ ತಡವಾಗುತ್ತಿದೆ. ದರ ಹೆಚ್ಚಿದ್ದರೂ ಅನಿವಾರ್ಯವಾಗಿ ಕಾಯಿ ಬಳಕೆ ಮಾಡುತ್ತಿದ್ದೇವೆ. 15 ದಿನಗಳ ಕಾಲ ಕಾದು ನೋಡಿ ಕಾಯಿ ದರ ಇಳಿಕೆ ಆಗದಿದ್ದರೆ ದೋಸೆ ದರ ಏರಿಕೆ ಮಾಡುತ್ತೇವೆ” ಎಂದು ಹೇಳಿದರು.

ದೋಸೆ ಹಾಗೂ ಚಟ್ನಿ (ETV Bharat)

ಇದನ್ನೂ ಓದಿ :ದಾವಣಗೆರೆಯ ಸಿಹಿ ಎಳನೀರಿಗೆ ಹೊರ ರಾಜ್ಯಗಳಲ್ಲೂ ಭಾರಿ ಬೇಡಿಕೆ; ಬರಗಾಲದಿಂದ ಅಭಾವ, ಗಗನಕ್ಕೇರಿದ ಬೆಲೆ - coconut water scarcity - COCONUT WATER SCARCITY

Last Updated : Jan 5, 2025, 10:54 PM IST

ABOUT THE AUTHOR

...view details