ಕರ್ನಾಟಕ

karnataka

By ETV Bharat Karnataka Team

Published : Apr 5, 2024, 2:59 PM IST

Updated : Apr 5, 2024, 3:05 PM IST

ETV Bharat / state

ಬೆಂಗಳೂರು ದಕ್ಷಿಣದಲ್ಲಿ ಯಾರ ಕೊರಳಿಗೆ ವಿಜಯ ಮಾಲೆ? - Bengaluru South

ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್​ ಮತ್ತು ಬಿಜೆಪಿ-ಜೆಡಿಎಸ್​ ಮೈತ್ರಿಕೂಟದ ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಅಖಾಡ ರಂಗೇರುತ್ತಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಇತಿಹಾಸ ಇಲ್ಲಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷಿನೋಟ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷಿನೋಟ

ಬೆಂಗಳೂರು: ರಾಜ್ಯದ ನಾಲ್ಕನೇ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಹಾಲಿ ಸಂಸದ ತೇಜಸ್ವಿ ಸೂರ್ಯಗೆ ಬಿಜೆಪಿ ಟಿಕೆಟ್ ನೀಡಿದರೆ, ಕಾಂಗ್ರೆಸ್ ಈ ಹಿಂದಿನ ಚುನಾವಣೆಗಳಂತೆಯೇ ಹೊಸ ಅಭ್ಯರ್ಥಿಗೆ ಮಣೆ ಹಾಕಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿಗೆ ಕೈ ಪಕ್ಷ ಟಿಕೆಟ್ ನೀಡಿದೆ. ಕ್ಷೇತ್ರದ ಮತದಾರರ ಪ್ರಮಾಣ, ರಾಜಕೀಯ ಲೆಕ್ಕಾಚಾರಗಳ ಕುರಿತ ಪಕ್ಷಿನೋಟ ಇಲ್ಲಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷಿನೋಟ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 11,95,285 ಪುರುಷ ಮತದಾರರು, 11,21,788 ಮಹಿಳಾ ಮತದಾರರು, 399 ತೃತೀಯ ಲಿಂಗಿಗಳು ಸೇರಿ ಒಟ್ಟು 23,17,472 ಮತದಾರರಿದ್ದಾರೆ. ನಾಲ್ಕನೇ ಹೆಚ್ಚಿನ ಮತದಾರರು ಇರುವ ಕ್ಷೇತ್ರ ಇದಾಗಿದೆ. 108 ಪುರುಷ, 22 ಮಹಿಳೆ ಸೇರಿ 130 ಸೇವಾ ಮತದಾರರಿದ್ದಾರೆ. 14,167 ಪುರುಷ, 13,294 ಮಹಿಳೆ ಸೇರಿ ಒಟ್ಟು 27,461 ಯುವ ಮತದಾರರಿದ್ದಾರೆ. 18,888 ಪುರುಷ ಮತ್ತು 14,629 ಮಹಿಳೆ ಸೇರಿ 33,517 ಮತದಾರರು 85 ವರ್ಷ ಮೇಲ್ಪಟ್ಟವರಿದ್ದಾರೆ. 2,111 ಪುರುಷ, 1,764 ಮಹಿಳೆ ಸೇರಿ 3,875 ದಿವ್ಯಾಂಗ ಮತದಾರರಿದ್ದಾರೆ. 487 ಪುರುಷ 244 ಮಹಿಳೆ ಸೇರಿ 731 ಸಾಗರೋತ್ತರ ಮತದಾರರಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷಿನೋಟ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರಲಿದ್ದು ಅದರಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬಸವನಗುಡಿ, ಜಯನಗರ, ಚಿಕ್ಕಪೇಟೆ, ಬೊಮ್ಮನಹಳ್ಳಿ ಮತ್ತು ಪದ್ಮನಾಭ ನಗರ ಕ್ಷೇತ್ರದಲ್ಲಿ ಬಿಜೆಪಿ ಮತ್ತು, ಬಿ.ಟಿ.ಎಂ ಲೇಔಟ್, ಗೋವಿಂದರಾಜ ನಗರ, ವಿಜಯನಗರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕಳೆದ ಆರು ಚುನಾವಣೆಯಲ್ಲಿ, ಪ್ರತೀ ಬಾರಿಯೂ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಬದಲಾಯಿಸಿದೆ. ಬಿ.ಕೆ.ಹರಿಪ್ರಸಾದ್​ಗೆ ಮಾತ್ರ ಎರಡು ಬಾರಿ ಅವಕಾಶ ಸಿಕ್ಕಿದೆಯಾದರೂ ಇದುವರೆಗೂ ಗೆಲುವು ದಕ್ಕಿಸಿಕೊಳ್ಳಲು ಕಾಂಗ್ರೆಸ್​ಗೆ ಪಕ್ಷಕ್ಕೆ ಸಾಧ್ಯವಾಗಿಲ್ಲ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷಿನೋಟ

ಕಳೆದ 6 ಚುನಾವಣೆಗಳ ಫಲಿತಾಂಶ: 1996, 1998, 1999, 2004, 2009, 2014ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅನಂತ್ ಕುಮಾರ್ ಸತತವಾಗಿ ಆಯ್ಕೆಯಾದರೆ, ಅವರ ನಿಧನದ ನಂತರ ನಡೆದ ಮೊದಲ ಚುನಾವಣೆ 2019ರಲ್ಲಿ ತೇಜಸ್ವಿ ಸೂರ್ಯ ಆಯ್ಕೆಯಾಗಿದ್ದಾರೆ. ಆದರೆ, ಈ ಏಳು ಬಾರಿಯೂ ಕಾಂಗ್ರೆಸ್​ಗೆ ನಿರಾಶೆಯಾಗಿದೆ. 1996ರಲ್ಲಿ ವರಲಕ್ಷ್ಮಿ ಗುಂಡೂರಾವ್, 1998ರಲ್ಲಿ ಡಿ.ಪಿ.ಶರ್ಮಾ, 1999ರಲ್ಲಿ ಬಿ.ಕೆ.ಹರಿಪ್ರಸಾದ್, 2004ರಲ್ಲಿ ಎಂ.ಕೃಷ್ಣಪ್ಪ, 2009ರಲ್ಲಿ ಕೃಷ್ಣಬೈರೇಗೌಡ, 2014ರಲ್ಲಿ ನಂದನ್ ನೀಲೇಕಣಿ, 2019ರಲ್ಲಿ ಬಿ.ಕೆ.ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ ಈ ಬಾರಿ ಸೌಮ್ಯರೆಡ್ಡಿ ಅವರಿಗೆ ಟಿಕೆಟ್ ನೀಡಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷಿನೋಟ

ಗೆಲುವಿನ ಅಂತರ: 1996ರಲ್ಲಿ 21,968 ಮತಗಳ ಅಂತರ, 1998ರಲ್ಲಿ 1,80,047 ಮತಗಳ ಅಂತರ, 1999ರಲ್ಲಿ 66,054 ಮತಗಳ ಅಂತರ, 2004ರಲ್ಲಿ 62,271 ಮತಗಳ ಅಂತರ, 2009ರಲ್ಲಿ 37,612 ಮತಗಳ ಅಂತರ, 2014ರಲ್ಲಿ 2,28,575 ಮತಗಳ ಅಂತರ, 2019ರಲ್ಲಿ 3,31,192 ಮತಗಳ ಅಂತದಲ್ಲಿ ಬಿಜೆಪಿ ಗೆದ್ದಿದೆ. 2009ರಲ್ಲಿ ಕೃಷ್ಣ ಬೈರೇಗೌಡ ಹೊರತುಪಡಿಸಿ ಇತರ ಅಭ್ಯರ್ಥಿಗಳ ಪ್ರಬಲ ಪೈಪೋಟಿ ನೀಡುವಲ್ಲಿ ವಿಫಲರಾಗಿದ್ದಾರೆ ಎನ್ನಬಹುದು. 2004ರಲ್ಲಿ ಎಸ್.ಎಂ.ಕೃಷ್ಣ, 2014ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. 2019ರಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಇತ್ತು. ಆದರೂ, ಮೂರು ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಕಾಂಗ್ರೆಸ್ ಇಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಈಗ ನಾಲ್ಕನೇ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಚುನಾವಣೆ ನಡೆಯುತ್ತಿದ್ದು ಶತಾಯಗತಾಯ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಯತ್ನಿಸುತ್ತಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಮ್ಮ ಪುತ್ರಿಯ ರಾಜಕೀಯ ಭವಿಷ್ಯ ರೂಪಿಸಲು ಪಣತೊಟ್ಟಿದ್ದು ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ತಂತ್ರಗಾರಿಕೆಯಲ್ಲಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷಿನೋಟ

ಕೊನೆಯ ಲೋಕಸಭೆ ಚುನಾವಣೆಯಲ್ಲಿ ಹಣಾಹಣಿ: 2019ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಒಟ್ಟು 22,15,489 ಮತದಾರರನ್ನು ಹೊಂದಿತ್ತು. ಒಟ್ಟು ಮಾನ್ಯ ಮತಗಳ ಸಂಖ್ಯೆ 11,78,553. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ತೇಜಸ್ವಿ ಸೂರ್ಯ ಈ ಸ್ಥಾನದಿಂದ ಗೆದ್ದು ಸಂಸದರಾದರು. ಅವರು ಒಟ್ಟು 7,39,229 ಮತಗಳನ್ನು ಪಡೆದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಒಟ್ಟು 4,08,037 ಮತಗಳೊಂದಿಗೆ ಎರಡನೇ ಸ್ಥಾನ ಪಡೆದರು. ಇದೇ ಲೋಕಸಭಾ ಚುನಾವಣೆಯಲ್ಲಿ 9,938 ನೋಟಾ ಮತಗಳು ಚಲಾವಣೆಯಾಗಿದ್ದು ಶೇ.53.64 ಮತಗಳು ಚಲಾವಣೆಯಾಗಿವೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷಿನೋಟ

1ನೇ ಲೋಕಸಭೆ ಚುನಾವಣೆ:ಸ್ವಾತಂತ್ರ್ಯಾ ನಂತರ ಬೆಂಗಳೂರು ದಕ್ಷಿಣ ಕ್ಷೇತ್ರ ಮೈಸೂರು ರಾಜ್ಯಕ್ಕೆ ಸೇರಿತ್ತು. ಮೈಸೂರು ರಾಜ್ಯವು 1947ರಿಂದ 1956ರವರೆಗೆ ಭಾರತದ ಒಕ್ಕೂಟದೊಳಗೆ ಒಂದು ರಾಜ್ಯವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರ, ವೃತ್ತಿಯಲ್ಲಿ ವಕೀಲರು ಆಗಿದ್ದ ಟಿ.ಮಾದಯ್ಯಗೌಡ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ 1ನೇ ಲೋಕಸಭೆ ಚುನಾವಣೆಯಲ್ಲಿ ಗೆದ್ದವರಾಗಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ 'ಪಂಚ'ಜನ್ಯವೋ, ಕಾಂಗ್ರೆಸ್​ ತೆಕ್ಕೆಗೋ ಬೆಂಗಳೂರು ಉತ್ತರ ಕ್ಷೇತ್ರ?: ಈ ಕಣದಲ್ಲಿ ಒಕ್ಕಲಿಗರೇ ನಿರ್ಣಾಯಕರು! - Bengaluru North

Last Updated : Apr 5, 2024, 3:05 PM IST

ABOUT THE AUTHOR

...view details