ಕರ್ನಾಟಕ

karnataka

ETV Bharat / state

ತವರಿನಿಂದ ಬಾರದ ಪತ್ನಿ: ಸೇಡಿಗೆ ತಂಗಿ ಮಗನ ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಪತ್ನಿ ತವರು ಮನೆಯಿಂದ ಬರದಿದ್ದಕ್ಕೆ ಆಕೆಯ ತಂಗಿ ಮಗನನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

By ETV Bharat Karnataka Team

Published : 6 hours ago

ಹೈಕೋರ್ಟ್
ಹೈಕೋರ್ಟ್ (IANS)

ಬೆಂಗಳೂರು:ತವರು ಮನೆಯಿಂದ ಪತ್ನಿ ಹಿಂತಿರುಗದ ಕಾರಣ ಸೇಡು ತೀರಿಸಿಕೊಳ್ಳಲು ಪತ್ನಿಯ ಸಹೋದರಿಯ ಆರು ವರ್ಷದ ಮಗನನ್ನು ಕೊಲೆ ಮಾಡಿದ್ದ ಮೈಸೂರಿನ ಹೆಚ್‌.ಡಿ.ಕೋಟೆ ತಾಲೂಕಿನ ಕರಿಗಾಲ ಗ್ರಾಮದ ನಿವಾಸಿ ನಾರಾಯಣ (37) ಎಂಬಾತನಿಗೆ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.

ನಾರಾಯಣನನ್ನು ಖುಲಾಸೆಗೊಳಿಸಿದ್ದ ಮೈಸೂರಿನ ಸೆಷನ್ಸ್‌ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೆಚ್‌.ಡಿ.ಕೋಟೆ ಠಾಣಾ ಪೊಲೀಸರು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ ಕುಮಾರ್‌ ಮತ್ತು ನ್ಯಾಯಮೂರ್ತಿ ಉಮೇಶ್‌ ಎಂ.ಅಡಿಗ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿತು.

ಅಲ್ಲದೆ, ಅಪರಾಧಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ. ಜೊತೆಗೆ, ಪ್ರಕರಣದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಹೈಕೋರ್ಟ್‌, ನಾರಾಯಣ ಕೊಲೆ ಮಾಡಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿ ಸಜೆ ವಿಧಿಸಿದೆ.

ಪ್ರಕರಣದ ಹಿನ್ನೆಲೆ:ಕರಿಗಾಲ ಗ್ರಾಮದ ನಿವಾಸಿ ಸಿದ್ದೇಗೌಡ ಅವರ ಪುತ್ರಿ ಸುಶೀಲ ಎಂಬವರನ್ನು ನಾರಾಯಣ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳು. ಟ್ರ್ಯಾಕ್ಟರ್‌ ಚಾಲನಾಗಿದ್ದ ನಾರಾಯಣ ಮದ್ಯಪಾನಕ್ಕೆ ದಾಸನಾಗಿದ್ದ. ಪತ್ನಿಗೆ ಅದೇ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. ಆದರೆ ಉದ್ಯೋಗ ಬಿಡುವಂತೆ ಪತ್ನಿಗೆ ಒತ್ತಾಯಿಸುತ್ತಿದ್ದ ಹಾಗೂ ಆಕೆಯ ಶೀಲ ಶಂಕಿಸುತ್ತಿದ್ದ. ಇದೇ ವಿಚಾರವಾಗಿ ಪತ್ನಿಯೊಂದಿಗೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತ ಸುಶೀಲ ಅದೇ ಗ್ರಾಮದಲ್ಲಿದ್ದ ತಂದೆ ಮನೆಗೆ ತೆರಳಿ ನೆಲೆಸಿದ್ದರು. ನಾರಾಯಣ ಹಲವು ಬಾರಿ ಮನವಿ ಮಾಡಿದ್ದರೂ ಸುಶೀಲ ಗಂಡನ ಮನೆಗೆ ಹಿಂತಿರುಗಿರಲಿಲ್ಲ. ಇದರಿಂದ ಸೇಡು ತೀರಿಸಿಕೊಳ್ಳಲು ನಾರಾಯಣ, 2014ರಲ್ಲಿ ಸುಶೀಲ ಅವರ ತಂದೆಯೊಂದಿಗಿದ್ದ ಆಕೆಯ ಅಕ್ಕನ ಪುತ್ರನಿಗೆ ಬಿಸ್ಕೆಟ್‌ ಕೊಡಿಸುವುದಾಗಿ ಪುಸಲಾಯಿಸಿ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಈ ಕುರಿತು ಸುಶೀಲ ತಂದೆ ಹೆಚ್.ಡಿ.ಕೋಟೆ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಕೊಲೆ ಅಪರಾಧದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಮೇಲ್ಮನವಿ ವಿಚಾರಣೆ ವೇಳೆ ಪೊಲೀಸರ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕಿ ರಶ್ಮಿ ಜಾಧವ್‌ ವಾದ ಮಂಡಿಸಿ, ಸುಶೀಲ ಮತ್ತು ಅವರ ತಂದೆಗೆ ಬಾಲಕನನ್ನು ನಾರಾಯಣ ಕರೆದುಕೊಂಡು ಹೋಗಿರುವುದು ಗೊತ್ತಿತ್ತು. ಕೊಲೆ ಮಾಡಿ ತಪ್ಪಿಕೊಳ್ಳುತ್ತಿದ್ದ ನಾರಾಯಣನ್ನು ಗ್ರಾಮಸ್ಥರು ನೋಡಿದ್ದರು. ತಪ್ಪಿಪ್ಪೊಗೆ ಹೇಳಿಕೆಯಲ್ಲೂ ಪತ್ನಿ ಸುಶೀಲ ಮೇಲಿನ ಸೇಡು ತೀರಿಸಿಕೊಳ್ಳಲು ಮದನ್‌ನನ್ನು ಕೊಲೆ ಮಾಡಿದ್ದಾಗಿ ಹೇಳಿದ್ದ. ಬಾಲಕನ ಮೃತದೇಹ ನಾರಾಯಣನ ಮನೆ ಹಿತ್ತಲಲ್ಲಿ ಸಿಕ್ಕಿದೆ. ಹೀಗಿದ್ದರೂ ನಾರಾಯಣನ್ನು ದೋಷಮುಕ್ತಗೊಳಿಸಿರುವ ವಿಚಾರಣಾ ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶ ದೋಷಪೂರಿತವಾಗಿದೆ. ಆದ್ದರಿಂದ ನಾರಾಯಣನನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಬೇಕು ಎಂದು ಕೋರಿದ್ದರು.

ಇದನ್ನ ಓದಿ: ಇಂದು ರಾತ್ರಿ ಭೂಮಿಯ ಅತಿ ಸಮೀಪ ಸೂಪರ್​ಮೂನ್ ಗೋಚರ! ಭೂಗೋಳ ಶಾಸ್ತ್ರಜ್ಞರು ಹೇಳುವುದೇನು?

ABOUT THE AUTHOR

...view details