ಕರ್ನಾಟಕ

karnataka

85 ವರ್ಷದ ವೃದ್ದೆಗೆ ವಾರ್ಷಿಕ 14 ಲಕ್ಷ ಜೀವನಾಂಶ ನೀಡುವಂತೆ ಮಗ, ಮೊಮ್ಮಗಳಿಗೆ ಸೂಚಿಸಿದ ಹೈಕೋರ್ಟ್

By ETV Bharat Karnataka Team

Published : Jan 29, 2024, 9:03 PM IST

85 ವರ್ಷದ ವೃದ್ಧೆ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ, ವಾರ್ಷಿಕ 14 ಲಕ್ಷ ರೂ ಜೀವನಾಂಶ ನೀಡುವಂತೆ ಆದೇಶಿಸಿದೆ.

high court
ಹೈಕೋರ್ಟ್

ಬೆಂಗಳೂರು:ಸುಮಾರು ಇಪ್ಪತೆರಡು ಎಕರೆ ಕಾಫಿ ಎಸ್ಟೇಟ್​​​​ ಅನ್ನು ಉಡುಗೊರೆಯಾಗಿ ನೀಡಿದ್ದ 85 ವರ್ಷದ ತಾಯಿಯ ಜೀವನ ನಿರ್ವಹಣೆ ಮಾಡುವುದಕ್ಕಾಗಿ ಆಕೆಯ ಮಗ ಮತ್ತು ಮೊಮ್ಮಗಳಿಗೆ ವಾರ್ಷಿಕ ತಲಾ 7 ಲಕ್ಷ ರೂ ಜೀವನಾಂಶ ಪಾವತಿ ಮಾಡುವಂತೆ ಹೈಕೋರ್ಟ್​ ಆದೇಶಿಸಿದೆ.

ದಾನಪತ್ರ ಮರು ಸ್ಥಾಪನೆ ಮಾಡಿ ಆದೇಶಿಸಿದ್ದ ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ 85 ವರ್ಷದ ವೃದ್ಧೆ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೇ ವಯಸ್ಸಾದ ಮಹಿಳೆಗೆ ಸೌಕರ್ಯಗಳನ್ನು ಮತ್ತು ದೈಹಿಕ ಅಗತ್ಯಗಳನ್ನು ನೋಡಿಕೊಳ್ಳುವಂತೆ ಮಗ ಮತ್ತು ಮೊಮ್ಮಕ್ಕಳಿಗೆ ನಿರ್ದೇಶನ ನೀಡಿದೆ.

ಅಲ್ಲದೇ, ಅರ್ಜಿದಾರರು 85 ವರ್ಷ ವಯಸ್ಸಿನವರಾಗಿದ್ದು, ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದುಪಡಿಸಿದ್ದಲ್ಲಿ 22 ಎಕರೆ ಜಮೀನನ್ನು ನೋಡಿಕೊಳ್ಳಬೇಕಾಗುತ್ತದೆ. ಆದರೆ, ಅವರ ಜೀವನ ನಿರ್ವಹಣೆ ಮಾಡುವ ಅಗತ್ಯವಿದೆ. ಆದ್ದರಿಂದ ಮಗ ಮತ್ತು ಮೊಮ್ಮಗಳು ತಲಾ 7 ಲಕ್ಷ ರೂ.ಗಳಂತೆ 14 ಲಕ್ಷ ರೂ.ಗಳನ್ನ ವಾರ್ಷಿಕವಾಗಿ ಪಾವತಿ ಮಾಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು ?:ಅಪ್ಪರಂಡ ಶಾಂತಿ ಬೋಪಣ್ಣ ಅವರು ವೀರಾಜಪೇಟೆ ತಾಲೂಕು ಸಿದ್ದಾಪುರ ಗ್ರಾಮದಲ್ಲಿ 48 ಎಕರೆ ಕಾಫೀ ಎಸ್ಟೇಟ್​ ಹೊಂದಿದ್ದರು. ಅವರ ಹಿರಿಯ ಮಗ ಎಬಿ ಬಿದ್ದಪ್ಪ ದಾವೆ ಹೂಡಿ 24 ಎಕರೆ ತಮ್ಮ ಹೆಸರಿಗೆ ಬರಬೇಕು ಎಂದು ಕೋರಿದ್ದರು. ಬಳಿಕ ಮೂರನೇ ಮಗ ಎಬಿ ಗಣಪತಿ ಮತ್ತು ಮೊಮ್ಮೊಗಳಾದ ಪೂಜಾ ಎಂಬುವರು 22 ಎಕರೆ ಜಮೀನನ್ನು ತಮ್ಮ ಹೆಸರಿಗೆ ದಾನವನ್ನಾಗಿ ಪಡೆದುಕೊಂಡಿದ್ದರು.

ತಲಾ 7 ಲಕ್ಷ ರೂ. ಗಳನ್ನು ವೃದ್ದೆಯ ಖಾತೆಗೆ ಪಾವತಿ ಮಾಡುವುದಾಗಿ ತಿಳಿಸಿದ್ದರು. 2016 ರಿಂದ 19ರ ವರೆಗೂ ಹಣವನ್ನು ಪಾವತಿ ಮಾಡುತ್ತಿದ್ದರು. ಆದರೆ, ಹಣ ಪಾವತಿ ಮಾಡುವುದು ಸ್ಥಗಿತಗೊಂಡಿತ್ತು. ಈ ನಡುವೆ ಜಮೀನನ್ನು ಮಗ ಮತ್ತು ಮೊಮ್ಮಗಳು ಮಾರಾಟ ಮಾಡುವುದಕ್ಕೆ ಮುಂದಾಗಿದ್ದರು.

ಈ ಅಂಶ ಅರ್ಜಿದಾರರ ಗಮನಕ್ಕೆ ಬಂದ ಬಳಿಕ ಅರ್ಜಿದಾರರು ಸಹಾಯಕ ಆಯುಕ್ತರ ಬಳಿ ನಿರ್ವಹಣಾ ವೆಚ್ಚಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ದಾನ ಪತ್ರವನ್ನು ರದ್ದುಮಾಡಬೇಕು ಎಂದು ಕೋರಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಹಾಯಕ ಆಯುಕ್ತರು ದಾನ ಪತ್ರವನ್ನು ರದ್ದುಪಡಿಸಿ ಆದೇಶಿಸಿದ್ದರು.

ಇದನ್ನು ಪ್ರಶ್ನಿಸಿ ಮಗ ಮತ್ತು ಮೊಮ್ಮಗಳು ಜಿಲ್ಲಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರ ಆದೇಶವನ್ನು ರದ್ದುಪಡಿಸಿ, ದಾನ ಪತ್ರವನ್ನು ಮರು ಸ್ಥಾಪಿಸಿ ಆದೇಶಿಸಿದ್ದರು. ಆದರೆ, ವೃದ್ದ ಮಹಿಳೆ ಜೀವನದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂಓದಿ:ಕೊಳಗೇರಿಯಲ್ಲಿ ಮನೆ ನಿರ್ಮಾಣಕ್ಕೆ ಗುತ್ತಿಗೆದಾರರ ಅವಧಿ ವಿಸ್ತರಿಸಲು ನಿರಾಕರಿಸಿದ ಹೈಕೋರ್ಟ್

ABOUT THE AUTHOR

...view details