ಕರ್ನಾಟಕ

karnataka

ETV Bharat / state

ಶ್ರವಣದೋಷವುಳ್ಳ ವಕೀಲರಿಗೆ ನೆರವಾಗಲು ಅರ್ಥ ನಿರೂಪಣಾಕಾರರ ನೇಮಕ ಮಾಡಿ: ಕೇಂದ್ರಕ್ಕೆ ಹೈಕೋರ್ಟ್ ಸೂಚನೆ - High Court - HIGH COURT

ಶ್ರವಣದೋಷವುಳ್ಳ ವಕೀಲರಿಗೆ ನೆರವಾಗಲು ಅರ್ಥ ನಿರೂಪಣಾಕಾರರನ್ನು ನೇಮಕ ಮಾಡುವಂತೆ ಕೇಂದ್ರಕ್ಕೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಹೈಕೋರ್ಟ್ ಸೂಚಿಸಿದೆ.

high-court
ಶ್ರವಣದೋಷವುಳ್ಳ ವಕೀಲರಿಗೆ ನೆರವಾಗಲು ಅರ್ಥ ನಿರೂಪಣಾಕಾರರ ನೇಮಕಕ್ಕೆ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

By ETV Bharat Karnataka Team

Published : Apr 5, 2024, 7:48 AM IST

ಬೆಂಗಳೂರು:ಸುಪ್ರೀಂಕೋರ್ಟ್‌ ಮಾದರಿಯಲ್ಲಿ ಸಂಕೇತ ಭಾಷೆ ಬಳಸಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಾದ ಮಂಡಿಸಿದ್ದ ನಗರದ ಶ್ರವಣ ದೋಷವುಳ್ಳ ವಕೀಲರಾದ ಸಾರಾ ಸನ್ನಿ ಅವರಿಗೆ ನೆರವಾಗಲು ಅರ್ಥ ನಿರೂಪಣಾಕಾರರನ್ನು ನೇಮಕ ಮಾಡುವಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಸ್ಕಾಟ್ಲೆಂಡ್‌ನಲ್ಲಿರುವ ಪತಿ ಮತ್ತು ಬೆಂಗಳೂರಿನಲ್ಲಿರುವ ಪತ್ನಿಯ ನಡುವಿನ ಕೌಟುಂಬಿಕ ವ್ಯಾಜ್ಯದ ಪರಿಣಾಮ ಪತಿಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ಇದನ್ನು ರದ್ದುಗೊಳಿಸಬೇಕು ಎಂದು ಕೋರಿ ಪತಿ ಹೈಕೋರ್ಟ್ ಮೆಟ್ಟಿಲೇರಿರುವ ಪ್ರಕರಣದಲ್ಲಿ ಪತ್ನಿಯ ಪರವಾಗಿ ವಾದ ಮಂಡಿಸುತ್ತಿರುವ ಸಾರಾ ಸನ್ನಿ ಅವರಿಗೆ ನೆರವಾಗುವಂತೆ ಕ್ರಮ ವಹಿಸಲು ಕೇಂದ್ರಕ್ಕೆ ಸೂಚಿಸಿದ ನ್ಯಾಯಮೂರ್ತಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಇದಕ್ಕೆ ಪ್ರಕರಣದ ಪ್ರತಿವಾದಿಗಳಾದ ಕೇಂದ್ರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ಮತ್ತು ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್ ಕೂಡ ಒಪ್ಪಿಗೆ ಸೂಚಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಸಾರಾ ಸನ್ನಿ ಅವರಿಗೆ ಅರ್ಥ ನಿರೂಪಣಾಕಾರರನ್ನು ನೀಡಲು ವ್ಯವಸ್ಥೆ ಕಲ್ಪಿಸಿ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿ, ವಿಚಾರಣೆಯನ್ನು ಇದೇ 8ಕ್ಕೆ ನಿಗದಿಗೊಳಿಸಿದೆ.

ಪ್ರಕರಣವೇನು?:ಮುಂಬೈನ ಥಾಣೆ ಜಿಲ್ಲೆಯ ಪತಿ 2004 ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಸ್ಟಾಟ್ಲೆಂಡ್‌ಗೆ ತೆರಳಿದ್ದರು. ಸದ್ಯ ಅವರು ಅಲ್ಲಿಯೇ ಬ್ಯಾಂಕ್ ಅಧಿಕಾರಿಯಾಗಿದ್ದು, ಬ್ರಿಟಿಷ್ ಪೌರತ್ವ ಪಡೆದಿದ್ದಾರೆ. ಅವರಿಗೀಗ 41 ವರ್ಷ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಅವರು, ಸಾಮಾಜಿಕ ಜಾಲತಾಣದ ಮೂಲಕ ಬೆಂಗಳೂರಿನ 36 ವರ್ಷದ ಮಹಿಳೆಯನ್ನು 2023ರ ಮೇ 21ರಂದು ವಿವಾಹವಾಗಿದ್ದಾರೆ.

ಮದುವೆ ರಾತ್ರಿ ಎರಡೂ ಕುಟುಂಬದ ಸದಸ್ಯರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಆವತ್ತು ನನ್ನ ಪತಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಅವರ ಮೊಬೈಲ್ ಫೋನ್‌ಗೆ ಬಂದ ಸಂದೇಶವೊಂದನ್ನು ನಾನು ಗಮನಿಸಿದೆ. ಮಹಿಳೆಯೊಬ್ಬರು ಕಳುಹಿಸಿದ್ದ ಆ ಸಂದೇಶವನ್ನು ಓದಿದೆ, ಮತ್ತು ಕುತೂಹಲದಿಂದ ಆಕೆಯ ಹಿಂದಿನ ಸಂದೇಶಗಳನ್ನೂ ಓದಿ ಆತಂಕಕ್ಕೆ ಒಳಗಾದೆ. ಕಾರಣ, ಆ ಮಹಿಳೆಯ ಜೊತೆ ನನ್ನ ಪತಿ ಅತ್ಯಂತ ಆಸ್ಥೆ ಮತ್ತು ಲೈಂಗಿಕ ಸಲುಗೆಯನ್ನು ಹೊಂದಿರುವುದು ನನ್ನ ಅರಿವಿಗೆ ಬಂದಿತು ಅರ್ಜಿಯಲ್ಲಿ ಮಹಿಳೆ ತಿಳಿಸಿದ್ದಾರೆ.

ಸಂದೇಶದ ಬಗ್ಗೆ ವಿಚಾರಿಸಿದಾಗ ನಮ್ಮಿಬ್ಬರ ನಡುವೆ ಮಾತಿನ ಸಂಘರ್ಷ ನಡೆಯಿತು. ಈ ವೇಳೆ, ಪತಿ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ತದನಂತರದಲ್ಲಿ ಅವರು ನನ್ನನ್ನು ವರದಕ್ಷಿಣೆಗಾಗಿ ಸತಾಯಿಸಿದ್ದಾರೆ ಎಂದು ಆರೋಪಿಸಿ ಪತ್ನಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪತಿ, ಅವರ ತಂದೆ, ತಾಯಿ, ಅವರ ತಂಗಿ ಹಾಗೂ ಆಕೆಯ ಗಂಡನ ವಿರುದ್ಧ ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆ ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಿಕೊಂಡ ಬಸವನಗುಡಿ ಠಾಣೆ ಪೊಲೀಸರು, ಪತಿಯ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.

ಇದನ್ನೂ ಓದಿ:ಸ್ಪೃಶ್ಯ ಜಾತಿಗಳನ್ನು ಎಸ್​​ಸಿ ಪಟ್ಟಿಯಿಂದ ಕೈಬಿಡುವಂತೆ ಅರ್ಜಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - High Court

ABOUT THE AUTHOR

...view details