ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ತಡರಾತ್ರಿ ಭಾರಿ ಮಳೆ: ಮನೆ, ರಸ್ತೆ, ತೋಟಗಳು ಜಲಾವೃತ

ದಾವಣಗೆರೆ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಭಾರಿ ಮಳೆ ಸುರಿದಿದೆ. ಹಲವೆಡೆ ರಸ್ತೆ, ಮನೆ, ತೋಟಗಳು ಜಲಾವೃತವಾಗಿವೆ.

heavy-rainfall
ದಾವಣಗೆರೆಯಲ್ಲಿ ಭಾರಿ ಮಳೆ (ETV Bharat)

By ETV Bharat Karnataka Team

Published : 9 hours ago

ದಾವಣಗೆರೆ: ಜಿಲ್ಲೆಯಾದ್ಯಂತ ತಡರಾತ್ರಿ ಭಾರಿ ಮಳೆ ಸುರಿಯಿತು. ದಾವಣಗೆರೆ ತಾಲೂಕು, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಸಾಸ್ವೇಹಳ್ಳಿ, ಅಣಜಿ, ಜಗಳೂರು ತಾಲೂಕಿನ ತುಪ್ಪದಹಳ್ಳಿ ಭಾಗಗಳಲ್ಲಿ ಜಡಿ ಮಳೆ ಬಿದ್ದಿದೆ. ಅಣಜಿ, ಮಂಡ್ಲೂರು, ಹುಣಸೆಕಟ್ಟೆ ಗ್ರಾಮದ ಭಾಗದಲ್ಲಿ ಅಡಿಕೆ ತೋಟಗಳು ಜಲಾವೃತವಾಗಿವೆ. ಜಗಳೂರು ತಾಲೂಕಿನ ಐತಿಹಾಸಿಕ ತುಪ್ಪದ ಹಳ್ಳಿ ಕೆರೆ ತುಂಬಿ ಕೋಡಿಬಿದ್ದಿದೆ.

ಹೊನ್ನಾಳಿ-ನ್ಯಾಮತಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಜಮೀನು, ತೋಟಗಳಲ್ಲಿ ಮೊಣಕಾಲಿನಷ್ಟು ನೀರು ನಿಂತಿದ್ದು ರೈತರನ್ನು ಚಿಂತೆಗೀಡು ಮಾಡಿದೆ.‌ ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ದ್ವೀಪದಂತಾಗಿದೆ. ಇಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಮನೆಯ ಆವರಣ, ರಸ್ತೆಗಳಿಗೆ ಜಲ ದಿಗ್ಬಂಧನ ಹಾಕಿದೆ.

ದಾವಣಗೆರೆಯಲ್ಲಿ ಭಾರಿ ಮಳೆ: ಮನೆ, ರಸ್ತೆ, ತೋಟಗಳು ಜಲಾವೃತ (ETV Bharat)

ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಸಾಸ್ವೇಹಳ್ಳಿಯ ರಸ್ತೆಗಳು ಕೂಡ ಜಲಾವೃತವಾಗಿ ವಾಹನ ಸವಾರರು ಪರದಾಡಿದರು. ಕೆಲವರು ನಿಂತ ನೀರಿನಲ್ಲೇ ವಾಹನ ಚಲಾಯಿಸಿದ್ದು ಕಂಡುಬಂತು.

ಚನ್ನಗಿರಿ ತಾಲೂಕಿನಲ್ಲಿಯೂ ಜೋರು ಮಳೆಯಾಗಿದ್ದು, ಅಷ್ಟೇ ಅವಾಂತರವೂ ಆಗಿದೆ. ಹರನಹಳ್ಳಿ-ಕೆಂಗಾಪುರ ಗ್ರಾಮಗಳು ಮಳೆಯಿಂದ ಸಾಕಷ್ಟು ಸಮಸ್ಯೆಯಾಗಿದೆ. ಇದೇ ಗ್ರಾಮದಲ್ಲಿ ಹರಿಯುವ ಹರಿದ್ರಾವತಿ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಹರನಹಳ್ಳಿ- ಕೆಂಗಾಪುರದಿಂದ ಚನ್ನಗಿರಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಸೇತುವೆ ಜಲಾವೃತವಾಗಿದ್ದರಿಂದ ಹರನಹಳ್ಳಿ-ಕೆಂಗಾಪುರ ಗ್ರಾಮಗಳಿಗೆ ತೆರಳಲು ಸಂಪರ್ಕವಿಲ್ಲದೆ 10-15 ಕಿ.ಮೀ ಬಳಸಿ ಜನರು ಗ್ರಾಮಗಳನ್ನು ಸೇರಬೇಕಾದ ಪರಿಸ್ಥಿತಿಯಿದೆ.

ಮಳೆ ವರದಿ (ETV Bharat)

ನ್ಯಾಮತಿ ತಾಲೂಕಿನಲ್ಲಿ ಹೆಚ್ಚು ಮಳೆ: ದಾವಣಗೆರೆ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 40.9 ಮಿ.ಮೀ ಮಳೆಯಾಗಿದೆ. ಚನ್ನಗಿರಿ- 50.1 ಮಿ.ಮೀ, ದಾವಣಗೆರೆ- 43.1 ಮಿ.ಮೀ, ಹರಿಹರ- 30.0 ಮಿ.ಮೀ, ಹೊನ್ನಾಳಿ-52.6 ಮಿ.ಮೀ, ಜಗಳೂರು 31.8, ನ್ಯಾಮತಿ 63.4 ಮಿ.ಮೀ ಮಳೆಯಾಗಿದೆ. ನ್ಯಾಮತಿ ತಾಲೂಕಿನಲ್ಲಿ ಹೆಚ್ಚು ಮಳೆ ಸುರಿದಿದೆ ಎಂದು ಜಿಲ್ಲಾಡಳಿತ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.

ಇದನ್ನೂ ಓದಿ:ಹಾವೇರಿ: ಹಳ್ಳದ ನಡುವೆ ಸಿಲುಕಿದ್ದ 25 ಭಕ್ತರ ರಕ್ಷಣೆ, ನಿಟ್ಟುಸಿರು ಬಿಟ್ಟ ಜನ

ABOUT THE AUTHOR

...view details