ಕರ್ನಾಟಕ

karnataka

ETV Bharat / state

ಗೋಕರ್ಣದಲ್ಲಿ ಮಳೆ ಅವಾಂತರ: ಪರಶಿವನ ಗರ್ಭಗುಡಿಗೆ ನುಗ್ಗಿದ ನೀರು - Heavy Rain in Uttara Kannada

ಭಾರೀ ಮಳೆ ಹಿನ್ನೆಲೆಯಲ್ಲಿ ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ನೀರು ನುಗ್ಗಿದ್ದರಿಂದ ಮಹಾಪೂಜೆಗೆ ತೊಂದರೆ ಉಂಟಾಯಿತು.

By ETV Bharat Karnataka Team

Published : Jun 8, 2024, 7:14 AM IST

heavy rain
ದೇವಾಲಯದ ಗರ್ಭಗುಡಿಗೆ ನುಗ್ಗಿದ ನೀರು (ETV Bharat)

ಗೋಕರ್ಣದಲ್ಲಿ ಮಳೆ (ETV Bharat)

ಕಾರವಾರ:ಭಾರಿ ಮಳೆಯಿಂದ ಸಂಗಮನಾಲಾದ ಮೂಲಕ ಸಮುದ್ರ ಸೇರುವ ಮಳೆ ನೀರು ಗೋಕರ್ಣದ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದ ಸೋಮಸೂತ್ರದಿಂದ ಗರ್ಭಗುಡಿಗೆ ನುಗ್ಗಿ ಮಹಾಪೂಜೆಗೆ ತೊಡಕು ಉಂಟಾದ ಘಟನೆ ಶುಕ್ರವಾರ ನಡೆದಿದೆ.

ಮಹಾಬಲೇಶ್ವರ ದೇವಾಲಯದ ತೀರ್ಥ ಸೋಮಸೂತ್ರದ ಮೂಲಕ ಸ್ಮಶಾನಕಾಳಿ ಮಂದಿರದ ಹತ್ತಿರ ಸಂಗಮ ನಾಲಾಕ್ಕೆ ಸೇರುವ ಬಳಿ ಸೇತುವೆ ನಿರ್ಮಿಸಲಾಗಿದೆ. ಇದರ ಅಡಿಪಾಯದ ಎತ್ತರ ಹೆಚ್ಚಿಸಿರುವುದು ಹಾಗೂ ಸೇತುವೆ ನಿರ್ಮಾಣದ ವೇಳೆ ಹಾಕಿದ ಮಣ್ಣು ತೆಗೆಯದಿರುವುದು ಈ ಅವಾಂತರಕ್ಕೆ ಕಾರಣವಾಗಿದೆ. ಸೇತುವೆ ನಿರ್ಮಾಣದ ವೇಳೆ ಮಂದಿರದ ಆಡಳಿತದವರ ಅಭಿಪ್ರಾಯ ಕೇಳಬೇಕಿತ್ತು ಎಂದು ಸ್ಥಳೀಯರು ಹೇಳುತ್ತಿದ್ದು, ಮಳೆಗಾಲದ ಪ್ರಾರಂಭದಲ್ಲಿಯೇ ಹೀಗಾದರೆ, ಮುಂದೆ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮಳೆ (ETV Bharat)

ನೀರು ಹೊರಹಾಕಲು ಹರಸಾಹಸ:ಸಂಗಮ ನಾಲಾ ಸಮುದ್ರ ಸೇರುವಲ್ಲಿನ ಕೋಡಿಯನ್ನು (ಮರಳ ದಿನ್ನೆ) ಮಂದಿರದ ಸಿಬ್ಬಂದಿ ಸತತ ಎರಡು ತಾಸಿಗೂ ಅಧಿಕ ಕಾಲ ಕಡಿದು ನೀರು ಸರಾಗವಾಗಿ ಹೋಗುವಂತೆ ಬಿಡಿಸಿಕೊಟ್ಟರು. ಸುರಿಯುವ ಮಳೆಯನ್ನೂ ಲೆಕ್ಕಿಸಿದೇ ಶ್ರಮಿಸಿ ಗರ್ಭಗುಡಿಯಲ್ಲಿ ನೀರು ಖಾಲಿ ಮಾಡಿದ್ದಾರೆ. ನಂತರ ಗರ್ಭಗುಡಿ ಸ್ವಚ್ಚಗೊಳಿಸಿ, ಮಹಾಪೂಜೆ ನೆರವೇರಿಸಲಾಯಿತು.

ಮಳೆ (ETV Bharat)

ಪ್ರವಾಸಿ ತಾಣದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇಷ್ಟು ದಿನ ಬಿಸಿಲಿನ ಬೇಗೆಗೆ ಬಳಲಿದ್ದ ಜನರಿಗೆ ಮಳೆ ತಂಪೆರೆದಿದೆ. ಪ್ರವಾಸಿಗರು ಸಹ ಏಕಾಏಕಿ ಬಂದ ಮಳೆಯಿಂದ ಕಂಗಾಲಾಗಿದ್ದು, ಛತ್ರಿ ರೇನ್‍ಕೋಟ್ ಅಂಗಡಿಗಳನ್ನು ಹುಡುಕುತ್ತ ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು. ಹಲವರು ಮಳೆಯಲ್ಲಿ ನೆನೆಯುತ್ತ ಅತ್ತಿತ್ತ ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇಲ್ಲಿನ ಮಹಾಗಣಪತಿ ಮಂದಿರದ ಮುಂಭಾಗ, ರಥಬೀದಿ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಚರಂಡಿ ನೀರು ಉಕ್ಕಿ ಹರಿದಿದ್ದು, ನದಿಯಾಗಿ ಮಾರ್ಪಟ್ಟಿತ್ತು. ಇದರಿಂದ ಸಂಚಾರಕ್ಕೆ ತೊಡಕು ಉಂಟಾಗಿತ್ತು.

ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ನೀರು:ಉತ್ತರಕನ್ನಡದ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ಅಂಕೋಲಾ ಪಟ್ಟಣದ ಹೆದ್ದಾರಿಯಲ್ಲಿ ಹಾಗೂ ಅಂಗನವಾಡಿ ಕೇಂದ್ರವೊಂದಕ್ಕೆ ನೀರು ನುಗ್ಗಿದ ಘಟನೆ ಶುಕ್ರವಾರ ನಡೆದಿದೆ. ಇಲ್ಲಿನ ಮಾರುಕಟ್ಟೆ ರಸ್ತೆಯಲ್ಲಿ ನೀರು ತುಂಬಿಕೊಂಡ ಕಾರಣ ಜನ ಹಾಗೂ ವ್ಯಾಪಾರಸ್ಥರು ಪರದಾಡುವಂತಾಯಿತು.

ಮಳೆ (ETV Bharat)

ಅಲ್ಲದೇ, ತಾಲೂಕಿನ ಬೋಳೆ ಗ್ರಾಮದ ನಾಡವರಕೇರಿ ಅಂಗನವಾಡಿ ಕೇಂದ್ರದಲ್ಲಿ ಮಳೆ ನೀರು ನುಗ್ಗಿ ಹಾನಿಯಾಗಿದೆ. ನಿರಂತರವಾಗಿ ಮಳೆಯಿಂದ ತಗ್ಗುಪ್ರದೇಶಕ್ಕೆ ನುಗ್ಗಿದ ನೀರನ್ನು ಖಾಲಿ ಮಾಡಲಾಗದೇ ಅಂಗನವಾಡಿ ಕೇಂದ್ರದ ಸಿಬ್ಬಂದಿ ಪರದಾಡುವಂತಾಯಿತು. ಮಳೆ ಹೆಚ್ಚಾಗುತ್ತಿದ್ದಂತೆ ಅಂಗನವಾಡಿಯಲ್ಲಿದ್ದ ಕಿರಾಣಿ ಸಾಮಾನು ಸೇರಿದಂತೆ ಇತರ ವಸ್ತುಗಳನ್ನು ಸುರಕ್ಷಿತವಾಗಿ ಮೇಲಕ್ಕೇರಿಸಲಾಗಿದೆ. ಅಂಗವಾಡಿಯೊಳಕ್ಕೆ ನೀರು ನುಗ್ಗಿ ಕೆರೆಯಂತಹ ಸ್ಥಿತಿ ಸೃಷ್ಟಿಯಾಗಿದ್ದು, ಅದೃಷ್ಟವಶಾತ್ ಈ ಸಂದರ್ಭದಲ್ಲಿ ಮಕ್ಕಳು ಮನೆಗೆ ತೆರಳಿದ್ದರು.

ಮಧ್ಯಾಹ್ನದ ವೇಳೆಗೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ಸೇರಿದಂತೆ ಜಿಲ್ಲೆಯಾದ್ಯಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಮುಂದಿನ 5 ದಿನ ಭಾರಿ ಗಾಳಿ ಸಹಿತ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜೊತೆಗೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ:ಕೊಪ್ಪಳ ಮಳೆ: ಕೊಚ್ಚಿ ಹೋಯ್ತು ಕೃಷಿ ಹೊಂಡದ ಒಡ್ಡು, ಫಲವತ್ತಾದ ಮಣ್ಣು - Koppala Rain

ABOUT THE AUTHOR

...view details