ಶಿವಮೊಗ್ಗ: 42 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿರುವ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರವನ್ನು ಕಾಂಗ್ರೆಸ್ಗೆ ತಂದು ಕೊಡಬೇಕು ಎಂಬುವುದೇ ನಮ್ಮ ದೊಡ್ಡ ಗುರಿ ಎಂದು ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು. ತಮಗೆ ವಿಧಾನ ಪರಿಷತ್ನ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಟಿಕೆಟ್ ಅನ್ನು ನನಗೆ ಕೊಡದೇ ಎಸ್ಪಿ ದಿನೇಶ್ ಅವರಿಗೆ ಕೊಟ್ಟರೂ ಅವರನ್ನು ಗೆಲ್ಲಿಸುತ್ತೇವೆ ಎಂದು 12 ದಿನಗಳ ಹಿಂದೆಯೇ ಮಾಧ್ಯಮದವರ ಮುಂದೆ ಘೋಷಣೆ ಮಾಡಿದ್ದೆ. ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ಕೊಟ್ಟಿದೆ. ನಾನು ಅಭ್ಯರ್ಥಿಯಾಗಿರುವುದು ನಾಮಕೇವಾಸ್ತೆ. ಪಕ್ಷದ ಪ್ರತಿನಿಧಿಗಳಾಗಿ ಕಣಕ್ಕಿಳಿದಿರುತ್ತೇವೆ. ಪಕ್ಷದ ಗೌರವ ಉಳಿಸುವ ಜವಾಬ್ದಾರಿ ನಮ್ಮದು. ಟಿಕೆಟ್ ಆಕಾಂಕ್ಷಿಗಳಾಗಿದ್ದ ರಂಗಸ್ವಾಮಿ ಹಾಗೂ ಎಸ್ಪಿ ದಿನೇಶ್ ಅವರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ. ಅಂತಿಮವಾಗಿ ಇದು ಆಯನೂರು ಮಂಜುನಾಥ್ ಅವರ ಗೆಲುವಲ್ಲ, ಪಕ್ಷದ ಗೆಲುವಾಗಿಸುವ ಎಲ್ಲ ಪ್ರಯತ್ನವನ್ನು ಮಾಡುತ್ತೇನೆ ಎಂದು ತಿಳಿಸಿದರು.
ಲೋಕಸಭೆ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಸಹ ಶಿವಮೊಗ್ಗ ಕ್ಷೇತ್ರದಲ್ಲಿ ಗೆಲ್ಲುತ್ತಾರೆ. ಬಂಗಾರಪ್ಪ ಅವರ ಕೊಡುಗೆಗಳನ್ನು ಗಮನದಲ್ಲಿಟ್ಡುಕೊಂಡು ಜನ ಗೀತಾ ರವರಿಗೆ ಮತ ನೀಡುತ್ತಾರೆ. ಕಾರ್ಯಕರ್ತರೂ ಲೋಕಸಭಾ ಚುನಾವಣೆಯಲ್ಲಿ ಗೀತಾ ಅವರನ್ನು ಗೆಲ್ಲಿಸಬೇಕು ಎಂಬ ವಿಶ್ವಾಸ ಹೊಂದಿದ್ದಾರೆ. ನಾನು ಕಾರ್ಯಕರ್ತರ ಜೊತೆ ಸೇರಿ ಲೋಕಸಭಾ ಚುನಾವಣೆ ಜೊತೆಗೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರವನ್ನು ಗೆಲ್ಲಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಮಾತನಾಡಿ, ನಮ್ಮ ಪಕ್ಷದಲ್ಲಿ ಮೂರು ಜನ ಆಕಾಂಕ್ಷಿಗಳಿದ್ದರು. ರಾಜ್ಯ ನಾಯಕರ ಶಿಫಾರಸಿನ ಮೇರೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಯನೂರು ಮಂಜುನಾಥ್ಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಕಳೆದ ಬಾರಿಯ ಚುನವಣೆಯಲ್ಲಿ ಆಯನೂರು ಮಂಜುನಾಥ್ ಅವರು 10 ಸಾವಿರ ಮತಗಳ ಅಂತರದಿಂದ ಗೆಲ್ಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಸಂಪೂರ್ಣ ಸಹಕಾರವನ್ನು ಕೊಡುತ್ತೇವೆ. ಅವರಿಗೆ ಈ ಬಾರಿ ಗೆಲುವು ನಿಶ್ಚಿತ, ಅವರು ಪದವೀಧರರು ಮತ್ತು ಶಿಕ್ಷಕರ ಪರವಾಗಿ ಹೋರಾಟಗಳನ್ನು ಮಾಡಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ ಎಂದು ಹೇಳಿದರು. ಈ ವೇಳೆ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ನಮಗೆ ಬೆಂಬಲ ನೀಡ್ತಾರೆ: ಜಿ.ಎಂ.ಸಿದ್ದೇಶ್ವರ್ ದಂಪತಿ - LOK SABHA ELECTIONS