ಬೆಳಗಾವಿ: ಕಾರು ಟಚ್ ಆದ ವಿಚಾರಕ್ಕೆ ಆಟೋ ಚಾಲಕ ನಡೆಸಿದ ಹಲ್ಲೆಯ ಬಳಿಕ ಗೋವಾ ಮಾಜಿ ಶಾಸಕ ಲಾವೂ ಮಾಮಲೇದಾರ್ (69) ಅವರು ಮೃತಪಟ್ಟಿದ್ದು, ಇದೀಗ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಖಡೇಬಜಾರ್ ಬಳಿ ತನ್ನ ವಾಹನಕ್ಕೆ ಕಾರು ತಾಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಲಾವೂ ಮಾಮಲೇದಾರ್ ಅವರ ಕಪಾಳಕ್ಕೆ ಹೊಡೆದು ಸುಭಾಷ ನಗರದ ನಿವಾಸಿ ಮುಜಾಹಿದಿಲ್ ಶಕೀಲ್ ಜಮಾದಾರ್ ಶನಿವಾರ ಹಲ್ಲೆ ಮಾಡಿದ್ದ. ಈ ವೇಳೆ ಸ್ಥಳೀಯರು ಜಗಳ ಬಿಡಿಸಿದ್ದರು. ನಂತರ ತಾವು ತಂಗಿದ್ದ ಲಾಡ್ಡ್ ರೂಮ್ ಕಡೆ ಹೋಗುವಾಗ ಮೆಟ್ಟಿಲು ಮೇಲೆಯೇ ಲಾವೂ ಕುಸಿದು ಬಿದ್ದಿದ್ದರು. ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದರು. ಹಲ್ಲೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಡಿಸಿಪಿ ರೋಹನ್ ಜಗದೀಶ ಭೇಟಿ ನೀಡಿ ಪರಿಶೀಲಿಸಿದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗೋವಾ ಮಾಜಿ ಶಾಸಕರ ಕುಟುಂಬಸ್ಥರು ಬೆಳಗಾವಿಗೆ ದೌಡಾಯಿಸಿದರು. ಈ ವೇಳೆ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಲಾವೂ ಅವರ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಗೋವಾಕ್ಕೆ ಕಳಿಸಿಕೊಡಲಾಯಿತು.