ಬಳ್ಳಾರಿ:ಅಂಜನಾದ್ರಿ ಬೆಟ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ, ಕೆಕೆಆರ್ಡಿಬಿಯಿಂದ 240 ಕೋಟಿ ರೂಪಾಯಿ ಅನುದಾನ ನೀಡಿದೆ. ಬೆಟ್ಟದ ಸುತ್ತಮುತ್ತ ಯಾತ್ರಿ ನಿವಾಸಗಳು, ದೇವಸ್ಥಾನದ ಎರಡು ಕಡೆ ಮೆಟ್ಟಿಲು, ಕುಡಿಯುವ ನೀರಿನ ವ್ಯವಸ್ಥೆ, ಶಾಪಿಂಗ್ ಮಾಲ್, ರಸ್ತೆ, ಇನ್ನಿತರ ಸೌಲಭ್ಯಗಳನ್ನು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ 1,350 ಕೋಟಿ ರೂಪಾಯಿ ಅನುದಾನಕ್ಕೆ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ 100 ಕೋಟಿ ರೂ ಅನುದಾನ ನೀಡಿದ್ದಾರೆ. 150 ಜನರಿಗೆ ಒಂದು ಯಾತ್ರಿ ನಿವಾಸದಂತೆ ನಾಲ್ಕು ಯಾತ್ರಿ ನಿವಾಸಗಳ ನಿರ್ಮಾಣಕ್ಕೆ 32 ಕೋಟಿ ರೂ ಆಗುತ್ತದೆ. ಇವೆಲ್ಲ ಒಂದು ವರ್ಷದಲ್ಲಿ ಉದ್ಘಾಟನೆ ಆಗಲಿದೆ. ಈವರೆಗೆ 22 ಕೋಟಿ ರೂ ಶಾಪಿಂಗ್ ಕಾಂಪ್ಲೆಕ್ಸ್ಗೆ, ಕೆಕೆಆರ್ಡಿಬಿಯಿಂದ 40 ಕೋಟಿ ರೂ ಅನುದಾನ ಬಂದಿದೆ ಎಂದು ತಿಳಿಸಿದರು.