ಕರ್ನಾಟಕ

karnataka

ETV Bharat / state

ಮೈಸೂರು: ಅಪಾರ್ಟ್​ಮೆಂಟ್​ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ - FOUR MEMBERS OF FAMILY DIED

ಮೈಸೂರಿನ ಅಪಾರ್ಟ್​ಮೆಂಟ್​ನಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಅಪಾರ್ಟ್​ಮೆಂಟ್, ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ,Same family member suicide
ಅಪಾರ್ಟ್​ಮೆಂಟ್​ನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು (ETV Bharat)

By ETV Bharat Karnataka Team

Published : Feb 17, 2025, 9:14 AM IST

ಮೈಸೂರು: ಇಲ್ಲಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್​ನಲ್ಲಿ ಇಂದು ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಚೇತನ (45), ಇವರ ಪತ್ನಿ ರೂಪಾಲಿ (43), ತಾಯಿ ಪ್ರಿಯಂವಧ (62) ಮತ್ತು ಮಗ ಕುಶಾಲ್ (15) ಮೃತಪಟ್ವವರು.

ಚೇತನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತನ್ನ ತಾಯಿ, ಪತ್ನಿ ಮತ್ತು ಮಗನಿಗೆ ವಿಷ ಉಣಿಸಿದ ಬಳಿಕ ಚೇತನ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ.

ಚೇತನ್ ಮೂಲತಃ ಹಾಸನ ಜಿಲ್ಲೆಯವರು. ಬೇರೆ ರಾಷ್ಟ್ರದಲ್ಲಿ ಕೆಲಸ ಮಾಡಲು ಇವರು ಕೆಲಸಗಾರರನ್ನು ನೇಮಕ ಮಾಡಿ ಕಳುಹಿಸುತ್ತಿದ್ದರು. ಸಾಲ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಆದರೆ ನಿಖರ ಕಾರಣ ಗೊತ್ತಾಗಿಲ್ಲ.

ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ (ETV Bharat)

ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಜಾನ್ಹವಿ ಮತ್ತು ವಿದ್ಯಾರಣ್ಯಪುರಂ ಇನ್ಸ್‌ಪೆಕ್ಟರ್ ಮೋಹಿತ್ ಸೇರಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪೊಲೀಸ್ ಕಮಿಷನರ್ ಪ್ರತಿಕ್ರಿಯೆ: "ಹಾಸನದ ಚೇತನ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು ದುಬೈನಲ್ಲಿ ಕೆಲಸ ಮಾಡುತ್ತಿದ್ದರು. 2019ರಲ್ಲಿ ಮೈಸೂರಿಗೆ ಶಿಫ್ಟ್ ಆಗಿದ್ದರು. ಸದ್ಯ ಲೇಬರ್ ಕಂಟ್ರಾಕ್ಟರ್ ಆಗಿ ಸೌಧಿಗೆ ಕೆಲಸಗಾರರನ್ನು ಕಳುಹಿಸುತ್ತಿದ್ದರು. ಇವರ ಪತ್ನಿ ರೂಪಾಲಿ ಮೈಸೂರಿನವರು. ಕುಟುಂಬಸ್ಥರು ನಿನ್ನೆ ಸಂಜೆ ಗೊರೂರುಗೆ ತೆರಳಿ ದೇವರ ದರ್ಶನ ಪಡೆದು ಬಂದಿದ್ದರು. ಜೊತೆಗೆ ಮೈಸೂರಲ್ಲಿರುವ ರೂಪಾಲಿ ಅವರ ತವರು ಮನೆಯಲ್ಲಿ ಊಟ ಮಾಡಿ ಬಂದಿದ್ದರು. ಬಳಿಕ ಅಮೆರಿಕದಲ್ಲಿರುವ ಸಹೋದರ ಭರತ್​ಗೆ ಚೇತನ್ ಕರೆ ಮಾಡಿದ್ದರು. ನಂತರ ಭರತ್ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಅಪಾರ್ಟ್​ಮೆಂಟ್​ ಬಳಿ ತೆರಳುವಂತೆ ಹೇಳಿದ್ದರು. ಅದರಂತೆ ಸಂಬಂಧಿಕರು ಅಪಾರ್ಟ್​ಮೆಂಟ್ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ಅಪಾರ್ಟ್​ಮೆಂಟ್​ನಲ್ಲಿ ಇವರ ಎರಡು ಪ್ಲ್ಯಾಟ್​ಗಳಿದ್ದು ಒಂದರಲ್ಲಿ ಚೇತನ, ಪತ್ನಿ ರೂಪಾಲಿ ಮತ್ತು ಮಗ ವಾಸಿಸುತ್ತಿದ್ದರು. ಇನ್ನೊಂದರಲ್ಲಿ ಚೇತನ್ ತಾಯಿ ವಾಸವಾಗಿದ್ದರು. ಪ್ರಾಥಮಿಕ ಹಂತದಲ್ಲಿ ಸಾವು ಯಾಕಾಗಿದೆ ಎಂಬುದು ಗೊತ್ತಿಲ್ಲ. ಮರಣೋತ್ತರ ಪರೀಕ್ಷೆ ಮತ್ತು ಎಫ್​ಎಸ್​ಲ್​ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಬೆಳಗ್ಗೆ 6 ಗಂಟೆಗೆ ಪೊಲೀಸರಿಗೆ ಮಾಹಿತಿ ಸಿಕ್ಕ ನಂತರ ತಕ್ಷಣವೇ ನಾವು ಸ್ಥಳಕ್ಕೆ ಬಂದಿದ್ದೇವೆ" ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹೇಳಿದ್ದಾರೆ.

ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮದುವೆ ಮೆರವಣಿಗೆಯಲ್ಲಿ ಕುದುರೆ ಏರಿ ಬಂದ ವರ ಹೃದಯಾಘಾತದಿಂದ ಸಾವು

ಇದನ್ನೂ ಓದಿ:ಬೆಂಗಳೂರಿನಲ್ಲಿ ಜನಪ್ರಿಯ ರ‍್ಯಾಪರ್ ಆತ್ಮಹತ್ಯೆ: ಸೊಸೆ, ಕುಟುಂಬಸ್ಥರ ವಿರುದ್ಧ ತಾಯಿಯಿಂದ ದೂರು ದಾಖಲು

ABOUT THE AUTHOR

...view details