ಶಿವಮೊಗ್ಗ: ತಾಲೂಕಿನ ಗಾಜನೂರು ಬಳಿಯ ತುಂಗಾ ಅಣೆಕಟ್ಟೆಯ ಹಿನ್ನೀರಿನಲ್ಲಿ ಮೂರು ಅಪರಿಚಿತ ಶವಗಳು ಪತ್ತೆಯಾಗಿವೆ. ಶಿವಮೊಗ್ಗ ತಾಲೂಕು ಸಕ್ರೆಬೈಲಿನಿಂದ ತೀರ್ಥಹಳ್ಳಿ ರಸ್ತೆಯ 10ನೇ ಮೈಲಿಗಲ್ಲಿನ ಬಳಿ ತುಂಗಾ ಹಿನ್ನೀರಿನಲ್ಲಿ ಶುಕ್ರವಾರ ಮಧ್ಯಾಹ್ನ ಮೂರು ಶವಗಳು ತೇಲುತ್ತಿರುವುದನ್ನು ಸ್ಥಳೀಯರು ಕಂಡು ತುಂಗಾನಗರ ಪೊಲೀಸರಿಗೆ ತಿಳಿಸಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ: ಸ್ಥಳಕ್ಕೆ ತುಂಗಾನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗುರುರಾಜ್ ಕರ್ಕಿ ಹಾಗೂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತದೇಹಗಳನ್ನು ಹಿನ್ನೀರಿನಿಂದ ಹೊರತೆಗೆದಾಗ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರ ಶವಗಳೆಂಬುದು ತಿಳಿದಿದೆ. ಮೂರೂ ಶವಗಳು ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಸದ್ಯ ಮೂವರು ಯಾರು, ಎಲ್ಲಿಂದ ಬಂದವರು, ಯಾವ ಊರು ಎಂದು ತಿಳಿದು ಬಂದಿಲ್ಲ. ತುಂಗಾ ನಗರ ಪೊಲೀಸರು ಶವಗಳನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಮೂವರ ಹಿನ್ನೆಲೆ ಪತ್ತೆಗೆ ತನಿಖೆ ಪ್ರಾರಂಭಿಸಲಾಗಿದೆ ಎಂದು ತುಂಗಾನಗರ ಠಾಣೆ ಪಿಐ ಗುರುರಾಜ ಕರ್ಕಿ ತಿಳಿಸಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಕುಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ ಐದು ಜನ ಸ್ಥಳದಲ್ಲೇ ಸಾವು; ಕುಟುಂಬಸ್ಥರ ಆಕ್ರಂದನ