ಶಿವಮೊಗ್ಗ: ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ ನಗರದಲ್ಲಿ ಮಣ್ಣುಮಿಶ್ರಿತ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಕಲುಷಿತ ನೀರನ್ನು ಕುಡಿಯಲಾಗದೆ ಜನರು ಪರದಾಡುತ್ತಿದ್ದಾರೆ.
ಈ ಕುರಿತು ಇಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, "ಶಿವಮೊಗ್ಗ ನಗರದಲ್ಲಿ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಲ್ಲ. ಕುಡಿಯುವ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಈ ನೀರನ್ನು ನೋಡಲೂ ಆಗುತ್ತಿಲ್ಲ, ಇನ್ನೂ ಕುಡಿಯಲು ಮನಸ್ಸು ಬರೋದಿಲ್ಲ. ಮಳೆಯಿಂದ ಮಣ್ಣು ಸೇರಿ ನೀರಿನ ಬಣ್ಣ ಬದಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ಒಂದು ವಾರದಿಂದ ನೀರು ಒಂದೇ ಬಣ್ಣದಲ್ಲಿದೆ. ಗಂಗಾ ಸ್ನಾನ, ತುಂಗಾ ಪಾನ ಎಂಬ ಮಾತನ್ನು ಅಧಿಕಾರಿಗಳು ಬದಲಾಯಿಸಲು ಹೊರಟಿದ್ದಾರೆ. ನಗರ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು" ಎಂದು ಒತ್ತಾಯಿಸಿದರು.
ಕುಡಿಯುವ ನೀರು ಸರಬರಾಜು ವಿಭಾಗದ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಮಿಥುನ್ ಕುಮಾರ್ 'ಈಟಿವಿ ಭಾರತ'ದ ಜೊತೆ ಮಾತನಾಡಿ, "ಗಾಜನೂರು ಡ್ಯಾಂನಿಂದ ನೀರನ್ನು ಶಿವಮೊಗ್ಗದ ಮಂಡ್ಲಿಯ ಕೃಷ್ಣರಾಜ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿ ಶಿವಮೊಗ್ಗ ನಗರಕ್ಕೆ ಸರಬರಾಜು ಮಾಡಲಾಗುತ್ತದೆ" ಎಂದರು.