ಕರ್ನಾಟಕ

karnataka

By ETV Bharat Karnataka Team

Published : Feb 1, 2024, 2:30 PM IST

ETV Bharat / state

ಉಚ್ಚಾಟಿತ ಹಿರಿಯ ಮುಖಂಡ ಮಾರೇಗೌಡರಿಗೆ ಬಾಗಿಲು ತೆರೆದ ಬಿಜೆಪಿ

ಕಾರಣಾಂತರಗಳಿಂದ ಈ ಹಿಂದೆ ಪಕ್ಷದಿಂದ ಅಮಾನತುಗೊಂಡಿದ್ದ ಮಾರೇಗೌಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಬಿಜೆಪಿ ಕಚೇರಿಗೆ ಆಗಮಿಸಿದ ಮಾರೇಗೌಡ
ಬಿಜೆಪಿ ಕಚೇರಿಗೆ ಆಗಮಿಸಿದ ಮಾರೇಗೌಡ

ಬೆಂಗಳೂರು: ಅಸಮಾಧಾನಿತ ಶಾಸಕ ಎಸ್.​ಟಿ.ಸೋಮಶೇಖರ್​​ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಅವರ ಬೇಡಿಕೆಯಂತೆ ಉಚ್ಚಾಟನೆ ಮಾಡಲಾಗಿದ್ದ ಯಶವಂತಪುರ ವಿಧಾನಸಭಾ ಕ್ಷೇತ್ರದ ಹಿರಿಯ ನಾಯಕ, ಮಾಜಿ ಮಂಡಲ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಸಿ.ಎಂ.ಮಾರೇಗೌಡ ಅವರನ್ನು ಇದೀಗ ಪುನಃ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸೋಮಶೇಖರ್ ಬಹುತೇಕ ಪಕ್ಷದಿಂದ ದೂರ ಸರಿದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಪಕ್ಷ ಬಂದಿದೆ.

ಕಾರಣಾಂತರಗಳಿಂದ ಈ ಹಿಂದೆ ಪಕ್ಷದಿಂದ ಅಮಾನತುಗೊಂಡಿದ್ದ ಮಾರೇಗೌಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ತಿಳಿಸಿದೆ. ಪಕ್ಷದ ಅಧ್ಯಕ್ಷರು ಅಮಾನತು ವಾಪಸ್ ಪಡೆದುಕೊಂಡ ನಂತರ ಇಂದು ಬಿಜೆಪಿ ಕಚೇರಿಗೆ ಆಗಮಿಸಿದ ಮಾರೇಗೌಡರನ್ನು ಆತ್ಮೀಯವಾಗಿ ಸ್ವಾಗತಿಸಿ ಪಕ್ಷದ ಸಂಘಟನೆ ಕುರಿತು ಚರ್ಚಿಸಲಾಯಿತು ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಬಿಜೆಪಿ ಕಚೇರಿಗೆ ಆಗಮಿಸಿದ ಮಾರೇಗೌಡ

ಹಿನ್ನೆಲೆ:ಯಶವಂತಪುರ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮಾರೇಗೌಡ, ಯಶವಂತಪುರ ನಗರ ಮಂಡಲದ ಉಪಾಧ್ಯಕ್ಷ ಧನಂಜಯ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಲಾಗಿತ್ತು. ಪಕ್ಷವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ಮಾರೇಗೌಡ, ಧನಂಜಯ ಅವರನ್ನು 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಬಿ.ನಾರಾಯಣ ಆದೇಶ ಹೊರಡಿಸಿದ್ದರು.

ಮಾರೇಗೌಡ, ಧನಂಜಯ ವಿರುದ್ಧ ಯಶವಂತಪುರ ಶಾಸಕ ಎಸ್.​ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ರಾಜ್ಯ ಬಿಜೆಪಿ ಘಟಕದ ನಾಯಕರಿಗೂ ದೂರು ನೀಡಿದ್ದರು. ಅಲ್ಲದೇ ಈ ನಾಯಕರು ನನ್ನ ಬಿಜೆಪಿಯಿಂದ ಹೊರ ನೂಕುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಸೋಮಶೇಖರ್ ಭಾವಚಿತ್ರ ಹಾಕಿಕೊಂಡು ಹುಟ್ಟುಹಬ್ಬ ಆಚರಣೆ ಮಾಡಿದ್ದರು. ಬರ್ತ್​ಡೇ ಆಚರಣೆಗೆ ಸೋಮಶೇಖರ್​ ಬಹಿರಂಗ ವಿರೋಧ ವ್ಯಕ್ತಪಡಿಸಿದ್ದರು. ಹಾಗೇ ಈ ಇಬ್ಬರು ನಾಯಕರು ಮೇಲೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ಆರೋಪ ಕೇಳಿಬಂದಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಸೋಮಶೇಖರ್ ಅಸಮಾಧಾನಗೊಂಡಿದ್ದರು. ಹಾಗಾಗಿ ಸೋಮಶೇಖರ್ ಸಮಾಧಾನಪಡಿಸಲು ಮಾರೇಗೌಡ ಮತ್ತು ಧನಂಜಯ ಅವರನ್ನು ಉಚ್ಚಾಟಿಸಲಾಗಿತ್ತು.

ಆದರೆ, ಇದೀಗ ಸೋಮಶೇಖರ್ ಬಿಜೆಪಿಯಿಂದ ಬಹುತೇಕ ಮಾನಸಿಕವಾಗಿ ಬಿಜೆಪಿಯಿಂದ ದೂರವಾಗಿದ್ದು ಕಾಂಗ್ರೆಸ್ ನಾಯಕರ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸೋಮಶೇಖರ್‌ಗಾಗಿ ಪಕ್ಷದಿಂದ ಹೊರಹಾಕಿದ್ದ ಮೂಲ ಬಿಜೆಪಿ ನಾಯಕ ಮಾರೇಗೌಡರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:'ನಾನು ಬೇರೆ ಬಿಜೆಪಿ ಶಾಸಕರಂತೆ ಕದ್ದುಮುಚ್ಚಿ ಬರಲ್ಲ': ಮತ್ತೆ ಡಿಕೆಶಿ ಭೇಟಿಯಾದ ಸೋಮಶೇಖರ್

ABOUT THE AUTHOR

...view details