ಕರ್ನಾಟಕ

karnataka

ಕಾನನದ ಮಧ್ಯೆ 8 ಕಿ.ಮೀ ಕಾಲ್ನಡಿಗೆಯಲ್ಲೇ ಶಾಲೆಗೆ ಸೇರುವ ಮಕ್ಕಳು! ಸ್ವಾತಂತ್ರ್ಯ ಬಂದಿದೆ, ಸೌಲಭ್ಯ ಮಾತ್ರ ಬಂದಿಲ್ಲ ಅಂತಾರೆ ಜನ - LACK BASIC FACILITIES

By ETV Bharat Karnataka Team

Published : Aug 31, 2024, 6:52 PM IST

ಕೆಲವೊಂದು ಹಳ್ಳಿಗಳಿಗೆ ಈಗಲೂ ಬಸ್‌ಗಳ ವ್ಯವಸ್ಥೆಯೇ ಇಲ್ಲ. ಇದರಿಂದ ಬರೀ ಜನರಿಗಲ್ಲದೇ, ವಿದ್ಯಾರ್ಥಿಗಳಿಗೂ ತುಂಬಾ ತೊಂದರೆ. ಹಾಗೆಯೇ ದಾವಣಗೆರೆ ಜಿಲ್ಲೆ 'ಗುಡ್ಡದಹಟ್ಟಿ' ಗ್ರಾಮ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಸಾರಿಗೆ ಸೌಕರ್ಯವನ್ನೇ ಕಂಡಿಲ್ಲದಿರುವುದು ನೋವಿನ ಸಂಗತಿಯಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

Demand of the villagers of Guddadhatti to provide transport bus connection
ಕಾನನದ ಮಧ್ಯೆ ಕಾಲ್ನಡಿಗೆಯಲ್ಲೆ ಶಾಲೆಗೆ ಸೇರುವ ಮಕ್ಕಳು (ETV Bharat)

ಕಾನನದ ಮಧ್ಯೆ ಕಾಲ್ನಡಿಗೆಯಲ್ಲೆ ಶಾಲೆಗೆ ಸೇರುವ ಮಕ್ಕಳು (ETV Bharat)

ದಾವಣಗೆರೆ: ಸ್ವಾತಂತ್ರ್ಯ ಬಂದು 78 ವರ್ಷಗಳು ಸಂದಿವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಏನೋ ಬಂದಿದೆ‌. ಅದರೆ ದಾವಣಗೆರೆ ಜಿಲ್ಲೆಯ 'ಗುಡ್ಡದಹಟ್ಟಿ' ಗ್ರಾಮಕ್ಕೆ ಬಸ್ ಸಂಪರ್ಕ ಮಾತ್ರ ಸಿಕ್ಕಿಲ್ಲ. ಅಲ್ಲದೆ, ಮೂಲಭೂತ ಸೌಲಭ್ಯಗಳಿಂದ ಈ ಗ್ರಾಮದ ಜನರು ವಂಚಿತರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡುವಂತೆ ಮನವಿ ಮಾಡಿದ್ದಾರೆ.

''ಕಾನನದ ಮಧ್ಯೆ ಈ ಪುಟ್ಟ ಗ್ರಾಮ ಇದ್ದು, ಬಸ್ ಸಂಪರ್ಕ ಇಲ್ಲದೆ ಮಕ್ಕಳು ಕಾಲ್ನಡಿಗೆಯಲ್ಲೇ ಶಾಲೆಗೆ ತೆರಳುವ ಪರಿಸ್ಥಿತಿ ಇದೆ. ಶಾಲೆ ತಲುಪುವುದು ಕಷ್ಟಸಾಧ್ಯ. ಇದರಿಂದ ಎಷ್ಟೋ ಪೋಷಕರು ತಮ್ಮ ಮಕ್ಕಳ ಶಾಲೆ ಬಿಡಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆ ಎದುರಾದರೆ ಗುಡ್ದಹಳ್ಳಿ ಗ್ರಾಮಸ್ಥರು ಸಾಹಸ ಮಾಡಿ ಆಸ್ಪತ್ರೆ ಸೇರಿರುವ ಉದಾಹರಣೆಗಳು ಕಣ್ಣಿನ ಮುಂದಿದೆ. ಕಾಡಿನಂಚಿನಲ್ಲಿರುವ ಗುಡ್ದಹಳ್ಳಿ ಗ್ರಾಮಕ್ಕೆ ಬಸ್, ಮೂಲಭೂತ ಸೌಕರ್ಯ ನೀಡುವಂತೆ'' ಗ್ರಾಮಸ್ಥರು ಈಟಿವಿ ಭಾರತಕ್ಕೆ ಅವಲತ್ತುಕೊಂಡಿದ್ದಾರೆ.

ಗುಡ್ಡದಹಟ್ಟಿ ಗ್ರಾಮ (ETV Bharat)

ಬಸ್ ಸಂಪರ್ಕ ಇಲ್ಲದ್ದರಿಂದ ಇಲ್ಲಿನ ಮಕ್ಕಳು ದೂರದ ನರಗನಹಳ್ಳಿ ಗ್ರಾಮದಲ್ಲಿರುವ ಶಾಲೆಗೆ ಕಾಲ್ನಡಿಗೆಯಲ್ಲೇ ತೆರಳುವ ಪರಿಸ್ಥಿತಿ ಇದೆ. 20ಕ್ಕೂ ಹೆಚ್ಚು ಮಕ್ಕಳು ತೆರಳುತ್ತಿದ್ದು, ಪ್ರತಿದಿನ 8 ಕಿ.ಮೀ ಕ್ರಮಿಸಬೇಕು. ಗ್ರಾಮ ಕಾಡಿನಂಚಿನಲ್ಲಿರುವ ಕಾರಣ ಮಕ್ಕಳು ಶಾಲೆಗೆ ತೆರಳುವ ವೇಳೆ ಕಾಡು ಪ್ರಾಣಿಗಳು ಕಂಡಿರುವ ಉದಾಹರಣೆಗಳಿವೆ. ಆರೋಗ್ಯ ಹದಗೆಟ್ಟರೆ ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ತೆರಳುವ ಪರಿಸ್ಥಿತಿ ಇದೆ. ಕಳೆದ 8 ವರ್ಷಗಳ ಹಿಂದೆ ಬಸ್ ಬಿಟ್ಟಿದ್ದರು. ಆದರೆ, ಇದ್ದಕ್ಕಿದ್ದಂತೆ ಮತ್ತೆ ಬಸ್ ಸಂಚಾರವನ್ನು ನಿಲ್ಲಿಸಿದ್ದಾರೆ. ಪಡಿತರ ತರಲು 8 ಕಿ.ಮೀ ಕ್ರಮಿಸಬೇಕು. ಬಸ್ ಸಂಪರ್ಕ ಇಲ್ಲದ ಕಾರಣ ಕೆಲಸ ಅರಸಿ ಬೇರೆ ಕಡೆ ಹೋಗುವವರಿಗೂ ಸಮಸ್ಯೆ ತಂದೊಡ್ಡಿದೆ.

ಕಾನನದ ಮಧ್ಯೆ ಕಾಲ್ನಡಿಗೆಯಲ್ಲೆ ಶಾಲೆಗೆ ಸೇರುವ ಮಕ್ಕಳು (ETV Bharat)

''ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಕೂಡ ಮರೀಚಿಕೆಯಾಗಿವೆ. ಇಲ್ಲಿ 80 ಮನೆಗಳಿದ್ದು, 300 ಜನ ವಾಸ ಮಾಡುತ್ತಿದ್ದಾರೆ. ಇರುವ ಪುಟ್ಟ ಶಾಲೆ ಸೋರುತ್ತಿದ್ದು, ಬೀಳುವ ಹಂತ ತಲುಪಿದೆ. ನೀರು ಸರಿಯಾಗಿ ಬರುತ್ತಿಲ್ಲ, ಚರಂಡಿ, ಬೀದಿ ದೀಪಗಳು ಇಲ್ಲದೆ ಜನ ಹೈರಾಣಾಗಿದ್ದಾರೆ. ಸೊಳ್ಳೆ ಕಾಟದಿಂದ ಜನ ರೋಸಿ ಹೋಗಿದ್ದಾರೆ. ಬಸ್ ಸಮಸ್ಯೆ ಅಲ್ಲದೆ, ರಸ್ತೆ ಸಮಸ್ಯೆ ಕೂಡ ಇದೆ. ಈ ಎಲ್ಲ ಸಮಸ್ಯೆಯಿಂದ ಕುಗ್ಗಿ ಹೋಗಿದ್ದೇವೆ'' ಎನ್ನುತ್ತಾರೆ ಗ್ರಾಮಸ್ಥರಾದ ರಮೇಶ್ ಮತ್ತು ವೆಂಕಿ ಬಾಯಿ.

ನರಗನಹಳ್ಳಿ ಗ್ರಾಮ (ETV Bharat)

''ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತೆರಳಲು ಈ ಗ್ರಾಮದ ಮಕ್ಕಳು ಬಸ್ ಸಂಪರ್ಕ ಇಲ್ಲದ್ದರಿಂದ ದೂರದ ನರಗನಹಳ್ಳಿಗೆ ಪ್ರತಿದಿನ ನಡೆದುಕೊಂಡೇ ಹೋಗಬೇಕು. ಬಸ್ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಕೂಡ ಇದೆ. ನೀರು, ಬೀದಿ ದೀಪ ಕಲ್ಪಿಸಲಾಗಿದೆ. ಹಳ್ಳಿಗೆ ಬಸ್ ಬಾರದಿರುವ ಕಾರಣ ಗೊತ್ತಿಲ್ಲ. ಕೆಎಸ್​ಆರ್​ಟಿಸಿ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುತ್ತೇವೆ‌. ಇದರ ಹೊರತು ಗ್ರಾಮದಲ್ಲಿ ಯಾವುದೇ ಸಮಸ್ಯೆಗಳಿಲ್ಲ'' ಎನ್ನುತ್ತಾರೆ ಪಿಡಿಓ ಹಿಮವಂತ್ ರಾಜ್.

ಇದನ್ನೂ ಓದಿ:ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ವಿದ್ಯುತ್ತನ್ನೇ ಕಾಣದ ಗ್ರಾಮವಿದು: ಯಾವುದಾ ಊರು? - Village without electricity

ABOUT THE AUTHOR

...view details