ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ ವಿವರಿಸಿದ ರಕ್ಷಣಾ & ಬಾಹ್ಯಾಕಾಶ ವಿಶ್ಲೇಷಕ ಗಿರೀಶ್ ಲಿಂಗಣ್ಣ

ಯುವ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಮತ್ತು ಜನಸಾಮಾನ್ಯರಲ್ಲೂ ವೈಜ್ಞಾನಿಕ ಅನ್ವೇಷಣೆಗಳ ಮನೋಭಾವ ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನದ ಗುರಿ ಎಂದು ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಷಕ ಗಿರೀಶ್ ಲಿಂಗಣ್ಣ ತಿಳಿಸಿದ್ದಾರೆ.

By ETV Bharat Karnataka Team

Published : Feb 28, 2024, 10:15 PM IST

Updated : Feb 28, 2024, 10:43 PM IST

ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಷಕ ಗಿರೀಶ್ ಲಿಂಗಣ್ಣ
ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಷಕ ಗಿರೀಶ್ ಲಿಂಗಣ್ಣ

ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಷಕ ಗಿರೀಶ್ ಲಿಂಗಣ್ಣ

ಬೆಂಗಳೂರು:ಭಾರತೀಯ ಭೌತಶಾಸ್ತ್ರಜ್ಞ ಸರ್.ಚಂದ್ರಶೇಖರ ವೆಂಕಟರಾಮನ್ 1928ರ ಫೆಬ್ರವರಿ 28ರಂದು ಮಹತ್ವದ ವಿಚಾರವನ್ನು ಘೋಷಿಸಿದರು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಭಾರತದಲ್ಲಿ ಪ್ರತೀ ವರ್ಷವೂ ಫೆಬ್ರವರಿ 28ರಂದು ಆಚರಿಸಲಾಗುತ್ತದೆ. ದೇಶಾದ್ಯಂತ ಈ ದಿನದಂದು ಒಂದು ನಿರ್ದಿಷ್ಟ ಥೀಮ್ ಅಡಿಯಲ್ಲಿ ವಿಜ್ಞಾನ ಕೇಂದ್ರಿತ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ ಎಂದು ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಷಕ ಗಿರೀಶ್ ಲಿಂಗಣ್ಣ ಹೇಳಿದರು.

ಈ ದಿನ ಜಾಗತಿಕ ವಿಜ್ಞಾನ ಸಮುದಾಯಕ್ಕೆ 'ರಾಮನ್ ಎಫೆಕ್ಟ್' ಅನ್ವೇಷಣೆಯ ಪರಿಚಯವಾಯಿತು. ಸಿ.ವಿ.ರಾಮನ್‌ ಅವರ ಮಹತ್ತರ ಅನ್ವೇಷಣೆಗೆ 1930ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಯಿತು. ಕೇಂದ್ರ ಸಂಸ್ಕೃತಿ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ವಿಜ್ಞಾನ ವಸ್ತು ಸಂಗ್ರಹಾಲಯಗಳ ರಾಷ್ಟ್ರೀಯ ಸಮಿತಿ 1986ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕಮ್ಯುನಿಕೇಶನ್​ಗೆ ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಘೋಷಿಸುವಂತೆ ಕರೆ ನೀಡಿತು.

ರಾಮನ್ ಪರಿಣಾಮದ ಸಂಶೋಧನೆಯನ್ನು ಗೌರವಿಸಲು ಮತ್ತು ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವ ಸಲುವಾಗಿ ಎನ್‌ಸಿಎಸ್‌ಟಿಸಿ ಈ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ಸಲಹೆಗೆ ಸಮ್ಮತಿ ಸೂಚಿಸಿದ ಭಾರತ ಸರ್ಕಾರ, ಫೆಬ್ರವರಿ 28 ಅನ್ನು ಅಧಿಕೃತವಾಗಿ ವಿಜ್ಞಾನ ದಿನವನ್ನಾಗಿ ಘೋಷಿಸಿತು.

ವಿಜ್ಞಾನದ ಮಹತ್ವದೆಡೆಗೆ ಬೆಳಕು ಚೆಲ್ಲುವುದು ಮತ್ತು ದೈನಂದಿನ ಜೀವನದಲ್ಲಿ ವಿಜ್ಞಾನ ಹೇಗೆ ಬಳಕೆಯಾಗುತ್ತದೆ ಎನ್ನುವುದನ್ನು ತಿಳಿಸುವುದು, ಯುವ ಜನರನ್ನು ವಿಜ್ಞಾನ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು ಮತ್ತು ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದ್ಯೋಗವನ್ನು ಆರಿಸಿಕೊಳ್ಳುವಂತೆ ಉತ್ತೇಜಿಸುವುದು, ಯುವ ಜನತೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಮತ್ತು ಜನಸಾಮಾನ್ಯರಲ್ಲೂ ವೈಜ್ಞಾನಿಕ ಅನ್ವೇಷಣೆಗಳ ಕುರಿತು ಮನೋಭಾವನೆ ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನದ ಗುರಿ.

2024ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು 'ವಿಕಸಿತ ಭಾರತಕ್ಕಾಗಿ ಸ್ವದೇಶಿ ತಂತ್ರಜ್ಞಾನಗಳು' ಎಂಬ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ. ಇದು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದ ಗುರಿಗೆ ಪೂರಕವಾಗಿದೆ.

ರಾಮನ್ ಎಫೆಕ್ಟ್:ಸರ್ ಸಿ ವಿ ರಾಮನ್ ಅವರು ಅನ್ವೇಷಿಸಿರುವ ರಾಮನ್ ಪರಿಣಾಮ ಎನ್ನುವುದು, ಬೆಳಕು ಒಂದು ವಸ್ತುವಿನ ಮೂಲಕ ಸಾಗುವಾಗ ಚದುರುತ್ತದೆ ಮತ್ತು ಅದರ ಶಕ್ತಿಯಲ್ಲಿ ಬದಲಾವಣೆ ಉಂಟಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಆ ಬೆಳಕಿನ ಶಕ್ತಿಯಲ್ಲಿ ಉಂಟಾಗುವ ಬದಲಾವಣೆಯ ಕಾರಣದಿಂದ, ಮೂಲ ಬೆಳಕಿಗೆ ಹೋಲಿಸಿದರೆ, ಚದುರಿದ ಬೆಳಕಿನ ಬಣ್ಣ ಮತ್ತು ತರಂಗಾಂತರದಲ್ಲಿ ವ್ಯತ್ಯಾಸ ಕಂಡುಬರುತ್ತದೆ.

ರಾಮನ್ ಪರಿಣಾಮ ವಸ್ತುಗಳ ಸಂಯೋಜನೆ ಮತ್ತು ರಚನೆಯ ಕುರಿತಂತೆ ಮಹತ್ವದ ಮಾಹಿತಿ ಒದಗಿಸುವಲ್ಲಿ ಅತ್ಯಂತ ಮಹತ್ವದ್ದಾಗಿದೆ. ಚದುರಿದ ಬೆಳಕಿನಲ್ಲಿ ಬದಲಾದ ತರಂಗಾಂತರದ ಅಧ್ಯಯನ ಮಾಡುವುದರಿಂದ, ವಿಜ್ಞಾನಿಗಳಿಗೆ ವಿವಿಧ ವಸ್ತುಗಳ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳ ಕುರಿತು ಮಾಹಿತಿ ಪಡೆಯಲು ನೆರವಾಗುತ್ತದೆ. ಇದು ವೈದ್ಯಕೀಯ, ವಸ್ತು ವಿಜ್ಞಾನ, ಹವಾಮಾನ ವೀಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಹಳಷ್ಟು ಬಳಕೆಯಾಗುತ್ತದೆ.

ಇಂಡಿಯನ್​​ ಇನ್‌ಸ್ಟಿಟ್ಯೂಟ್​ ಆಫ್​ ಆಸ್ಟ್ರೋ ಫಿಸಿಕ್ಸ್ ಮುಕ್ತ ದಿನ: ಭಾನುವಾರ ಕೋರಮಂಗಲದ ಇಂಡಿಯನ್​​ ಇನ್‌ಸ್ಟಿಟ್ಯೂಟ್​ ಆಫ್​ ಆಸ್ಟ್ರೋ ಫಿಸಿಕ್ಸ್​ ಸಂಸ್ಥೆಯಲ್ಲಿ ಖಗೋಳಶಾಸ್ತ್ರದ ಆಸಕ್ತರಿಗಾಗಿ ಮತ್ತು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಮುಕ್ತ ದಿನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಲಿಕಾನ್ ಸಿಟಿ ಸೇರಿದಂತೆ ದೇಶದ ಇತರ ನಗರಗಳ 4,000ಕ್ಕೂ ಹೆಚ್ಚು ವಿಜ್ಞಾನಾಸಕ್ತರು ಪಾಲ್ಗೊಂಡಿದ್ದರು.

ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ)ಯಲ್ಲಿ ಮುಕ್ತ ದಿನ ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ ಪ್ರವೇಶಿಸಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಕ್ಯಾಂಪಸ್ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ:'ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ': ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ

Last Updated : Feb 28, 2024, 10:43 PM IST

ABOUT THE AUTHOR

...view details