ರಾಷ್ಟ್ರಧ್ವಜ ತಯಾರಿಕಾ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಮಾಹಿತಿ (ETV Bharat) ಹುಬ್ಬಳ್ಳಿ:ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಮಾನ್ಯತೆ ಪಡೆದ ದೇಶದ ಏಕೈಕ ರಾಷ್ಟ್ರಧ್ವಜ ತಯಾರಿಕಾ ಸಂಸ್ಥೆ ಹುಬ್ಬಳ್ಳಿಯ ಬೆಂಗೇರಿಯ ಧ್ವಜಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯ ಹಾಗೂ ನಿರಂತರ ಮಳೆ ಧ್ವಜ ಮಾರಾಟದ ಮೇಲೆ ಪರಿಣಾಮ ಬೀರಿದೆ.
ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯಲ್ಲಿ (ಕೆಕೆಜಿಎಸ್ಎಸ್) ರಾಷ್ಟ್ರಧ್ವಜಗಳ ಬೇಡಿಕೆ ಶೇ 50ರಷ್ಟು ಕುಸಿದಿದೆ. ಇದಕ್ಕೆ ನಿರಂತರ ಮಳೆ. ಹವಾಮಾನ ವೈಪರೀತ್ಯ, ಪ್ರವಾಹ ಮತ್ತು ರಸ್ತೆ ಸಂಚಾರ ಸಮಸ್ಯೆ ಕಾರಣವಾಗಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ವೇಳೆ ದಾಖಲೆಯ ವಹಿವಾಟು ನಡೆದಿತ್ತು. ಆದರೆ, ಈ ಸಲ ಜುಲೈವರೆಗೆ 97 ಲಕ್ಷ ಮೊತ್ತದ ವಹಿವಾಟು ಮಾತ್ರ ನಡೆದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಕೆಕೆಜಿಎಸ್ಎಸ್ ರಾಷ್ಟ್ರಧ್ವಜ ಮಾರಾಟದ ಅಂಕಿ - ಅಂಶ (ETV Bharat) "ಉತ್ತರ ಭಾರತ ಹಾಗೂ ದಕ್ಷಿಣ ಭಾರತದಿಂದ ರಾಷ್ಟ್ರಧ್ವಜಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿತ್ತು. ಈ ವರ್ಷ ಬಹಳ ಕಡಿಮೆಯಾಗಿದೆ. ಸಾಮಾನ್ಯವಾಗಿ ಪ್ರತಿವರ್ಷ 3 ರಿಂದ 3.5 ಕೋಟಿಯಷ್ಟು ಧ್ವಜ ಮಾರಾಟವಾಗುತ್ತಿದ್ದವು. ಮುಂದಿನ ಜನವರಿ 26 ರವರೆಗೆ ಮೂರೂವರೆ ಕೋಟಿ ವಹಿವಾಟು ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಆದರೆ, ಈ ವರ್ಷ ಮಳೆ, ಪ್ರವಾಹ, ಗುಡ್ಡಕುಸಿತ, ಹವಾಮಾನ ವೈಪರೀತ್ಯದಿಂದ ಬಹಳಷ್ಟು ತೊಂದರೆ ಅನುಭವಿಸವಂತಾಗಿದೆ" ಎಂದು ಅವರು ತಿಳಿಸಿದ್ದಾರೆ.
ಉತ್ಪಾದನೆಯೂ ಕುಂಠಿತ-ಸಂಸ್ಥೆ ಕಾರ್ಯದರ್ಶಿ:ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಪ್ರಕಾರ 9 ವಿವಿಧ ಅಳತೆಯ ಧ್ವಜಗಳನ್ನು ಸಿದ್ಧಪಡಿಸಲಾಗುತ್ತದೆ. 21x14, 12x8, 9x6, 6x4, 4.5x3, 3x2, 1.5x1, 9x6 ಹಾಗೂ 6x4 ಅಡಿ ಅಳತೆಯ ಧ್ವಜಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತದೆ. ಅಳತೆಗೆ ತಕ್ಕಂತೆ 250 ರೂ.ಯಿಂದ 30 ಸಾವಿರವರೆಗೆ ದರವಿದೆ. ಧ್ವಜ ತಯಾರಿಕೆಗೆ ಬಟ್ಟೆ ತಯಾರಿಸುವ ಮಗ್ಗ ಹಾಗೂ ಪರಿಕರಗಳಿಗೆ ನೀರು ಹೊಕ್ಕು ಖಾದಿ ಉತ್ಪಾದನೆ ಕುಂಠಿತವಾಗಿದೆ. ಆದರೆ, ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಕಳೆದ ವರ್ಷ ತಯಾರಿಸಿದ 1ಕೋಟಿ 80 ಲಕ್ಷದ ಧ್ವಜಗಳು ಸ್ಟಾಕ್ ಉಳಿದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರ ಬೇಡಿಕೆ ಇಳಿಕೆಗೆ ಕಾರಣ:ಸ್ವಾತಂತ್ರ್ಯ ಅಮೃತಮಹೋತ್ಸವ ನಿಮಿತ್ತ ಕೇಂದ್ರ ಸರ್ಕಾರ ಪಾಲಿಸ್ಟರ್, ಸಿಂಥೆಟಿಕ್ ಧ್ವಜಗಳ ತಯಾರಿಕೆ ಅನುಮತಿ ನೀಡಿದೆ. ಇದರಿಂದಲೂ ಬೇಡಿಕೆ ಕುಸಿಯಲು ಕಾರಣ ಎಂದು ಖಾದಿ ತಯಾರಿಕೆ ಸಂಸ್ಥೆ ಸಿಬ್ಬಂದಿ ಅನ್ನಪೂರ್ಣ ದೊಡ್ಡಮನಿ ಹೇಳಿದ್ದಾರೆ. ಅದರ ಜೊತೆಗೆ ಮಳೆಯೂ ಒಂದು ಕಾರಣವಾಗಿದೆ. ಆಗಸ್ಟ್ ತಿಂಗಳು ಬಂದರೆ ಜೂನ್, ಜುಲೈ ತಿಂಗಳಿಂದ ನಿರಂತರ ಕೆಲಸ ಮಾಡುತ್ತಿದ್ದೆವು. ಇದರಿಂದ ಓವರ್ ಟೈಮ್ ಡ್ಯೂಟಿ ಮಾಡಿ ಹೆಚ್ಚಿನ ಸಂಬಳ ಪಡೆಯುತ್ತಿದ್ದೆವು. ಈ ಬಾರಿ ಬೇಡಿಕೆ ಕಡಿಮೆ ಇರುವುದರಿಂದ ಸಂಸ್ಥೆ ಹಾಗೂ ಕಾರ್ಮಿಕರಿಗೆ ಹೊಡೆತ ಬಿದ್ದಿದೆ" ಎಂದು ಅಳಲು ತೋಡಿಕೊಂಡರು.
ಇದನ್ನೂ ಓದಿ:ಮೀನುಗಾರಿಕಾ ಋತು ಆರಂಭ: ಮತ್ಸ್ಯಬೇಟೆಗೆ ಸಮುದ್ರಕ್ಕಿಳಿದ ಕಡಲ ಮಕ್ಕಳು - Fishing Season Starts