ಕರ್ನಾಟಕ

karnataka

ETV Bharat / state

ವಿಜಯಪುರ: ಆಟವಾಡಲು ತೆರಳಿ ಕಾಣೆಯಾಗಿದ್ದ ಮೂವರು ಮಕ್ಕಳು ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆ - Death of three children

ಆಟವಾಡಲು ಮನೆಯಿಂದ ತೆರಳಿ ಕಾಣೆಯಾಗಿದ್ದ ಮಕ್ಕಳು ಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

By ETV Bharat Karnataka Team

Published : May 13, 2024, 4:31 PM IST

ಆಟವಾಡಲು ತೆರಳಿ ಕಾಣೆಯಾಗಿದ್ದ ಮೂವರು ಮಕ್ಕಳು ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆ
ಆಟವಾಡಲು ತೆರಳಿ ಕಾಣೆಯಾಗಿದ್ದ ಮೂವರು ಮಕ್ಕಳು ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆ (ETV Bharat)

ವಿಜಯಪುರ: ನಗರದಲ್ಲಿ ನಿನ್ನೆ ಕಾಣೆಯಾಗಿದ್ದ ಮೂವರೂ ಮಕ್ಕಳು ಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 11 ವರ್ಷದ ಅನುಷ್ಕಾ, 9 ವರ್ಷದ ವಿಜಯ್‌ ಹಾಗೂ 6 ವರ್ಷದ ಮಿಹಿರ್‌ ಎನ್ನುವ ಮಕ್ಕಳು ಮೃತ ದುರ್ದೈವಿಗಳಾಗಿದ್ದಾರೆ.

ನಿನ್ನೆ ಬೆಳಗ್ಗೆ ಗಚ್ಚಿನಕಟ್ಟಿ ಕಾಲೋನಿಯಲ್ಲಿ ಮಿಹಿರ್‌, ಅನುಷ್ಕಾ ಹಾಗೂ ವಿಜಯ್‌ ಆಟವಾಡಲೆಂದು ಮನೆಯಿಂದ ತೆರಳಿ ನಾಪತ್ತೆಯಾಗಿದ್ದರು. ಬಳಿಕ ಮನೆಯವರು ಸೇರಿದಂತೆ ನೆರೆಹೊರೆಯವರು ಮತ್ತು ಸ್ಥಳೀಯರು ಹುಡಕಾಟ ನಡೆಸಿದ್ದರು. ಹತ್ತಿರದಲ್ಲಿಯೇ ಶಾಂತಿನಿಕೇತನ ಶಾಲೆ, ಜ್ಯೋತಿ ಪೈಪ್‌ಫ್ಯಾಕ್ಟರಿ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿನ ಸಿಸಿಟಿವಿಯಲ್ಲಿ ಬೆಳಗ್ಗೆ 11 ಗಂಟೆವರೆಗೆ ಮಕ್ಕಳ ಚಲನವಲನ ದಾಖಲಾಗಿತ್ತು ನಂತರದಲ್ಲಿ ಈ ಮಕ್ಕಳ ಸುಳಿವು ಲಭ್ಯವಾಗಿರಲಿಲ್ಲ. ಬಳಿಕ ಪೋಷಕರು ಎಪಿಎಂಸಿ ಪೊಲೀಸ್‌ ಠಾಣೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ತನಿಖೆ ಆರಂಭಿಸಿದ ಪೊಲೀಸರು ಮನೆಯ ಹತ್ತಿರದಲ್ಲಿನ ಶಾಂತಿನಿಕೇತನ ಶಾಲೆ ಎದುರಿನ ಚರಂಡಿ ನೀರು ಶುದ್ಧೀಕರಣ ಘಟಕವಾದ ಎಸ್.ಟಿ.ಪಿ ಪ್ಲ್ಯಾಂಟ್​ಗೆ ತೆರಳಿ ವಿಚಾರಿಸಿದ್ದರು. ಆದರೆ, ಇದರ ನಿರ್ವಹಣೆಗೆ ಎಂದು ಇದ್ದವರು ಇಲ್ಲಿ ಮಕ್ಕಳು ಬಂದಿಲ್ಲ ಎಂದು ಉತ್ತರಿಸಿದ್ದರು. ಇಂದು ಮಧ್ಯಾಹ್ನವಾದರೂ ಮಕ್ಕಳು ಪತ್ತೆಯಾಗದ ಹಿನ್ನೆಲೆಯಲ್ಲಿ ಚರಂಡಿ ನೀರು ಶುದ್ಧೀಕರಣ ಪಕ್ಕದಲ್ಲಿನ ಸಿಮೆಂಟ್‌ ಇಟ್ಟಿಗೆ ತಯಾರಿಕಾ ಘಟಕದ ಮಾಲೀಕರು ಅನುಮಾನಗೊಂಡು ಎಸ್.ಟಿ.ಪಿ ಪ್ಲ್ಯಾಂಟ್‌ ಒಳ ರಸ್ತೆಗಳಲ್ಲಿ ಬಂದು ಹುಡುಕಾಟ ನಡೆಸಿದ ವೇಳೆ ಮಕ್ಕಳು ಶವವಾಗಿ ತೇಲುತ್ತಿದ್ದದ್ದು ಕಂಡು ಬಂದಿದೆ.

ಮಕ್ಕಳು ಇಲ್ಲಿಗೆ ಎಲ್ಲರ ಕಣ್ಣು ತಪ್ಪಿಸಿ ಹೇಗೆ ಬಂದರು ಘಟನೆಗೆ ನಿಖರ ಕಾರಣವೇನು ಎಂದು ಸದ್ಯ ತಿಳಿದು ಬಂದಿಲ್ಲವಾದರೂ ಈ ಶುದ್ಧೀಕರಣ ಘಟಕದಲ್ಲಿ ಅಲ್ಲಲ್ಲಿ ಅಳವಡಿಸಿದ್ದ ನೀರಿನ ಮಧ್ಯದ ಕಾರಂಜಿಗಳಿಂದ ಆಕರ್ಷಿತರಾಗಿ ಬಂದು ಕಾಲು ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಈ ಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ತಡೆಗೋಡೆ, ಸೂಕ್ತ ಸೆಕ್ಯೂರಿಟಿ, ಸಿಸಿಟಿವಿ ಇಲ್ಲದಿರುವುದು ಮತ್ತು ನಿರ್ವಹಣೆ ಜವಾಬ್ದಾರಿಯ ಮಹಾನಗರ ಪಾಲಿಕೆಯ ನಿರ್ಲಕ್ಯವೇ ಇದಕ್ಕೆ ಕಾರಣ ಎಂದು ಪೋಷಕರು ಮತ್ತು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ನಂತರ ಮಕ್ಕಳ ಶವಗಳನ್ನು ರಸ್ತೆಗೆ ಅಡ್ಡವಾಗಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಮತ್ತು ಅಪರ ಜಿಲ್ಲಾಧಿಕಾರಿ ಆಗಮಿಸಿ ಸೂಕ್ತ ಕ್ರಮ ಮತ್ತು ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಸದ್ಯ ಮೃತ ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಇದನ್ನೂ ಓದಿ:ವಿಜಯಪುರ: ಬಾವಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು - Two Boys Drowned

ABOUT THE AUTHOR

...view details