ಕರ್ನಾಟಕ

karnataka

ತುಂಗಭದ್ರಾ ಜಲಾಶಯ ಗೇಟ್​ ಪರಿಶೀಲಿಸಿದ ಡಿ ಕೆ ಶಿವಕುಮಾರ್; ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ- ಡಿಸಿಎಂ - DCM DK Shivakumar

By ETV Bharat Karnataka Team

Published : Aug 11, 2024, 4:10 PM IST

Updated : Aug 11, 2024, 5:03 PM IST

ಡಿಸಿಎಂ ಡಿ. ಕೆ ಶಿವಕುಮಾರ್ ಅವರು ತುಂಗಭದ್ರಾ ಡ್ಯಾಂನ ತುಂಡಾದ ಗೇಟ್​ ಚೈನ್​ಅನ್ನು​ ಪರಿಶೀಲನೆ ನಡೆಸಿದರು.

DCM DK Shivakumar
ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

ತುಂಗಭದ್ರಾ ಜಲಾಶಯ ಗೇಟ್​ ಪರಿಶೀಲಿಸಿದ ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

ಕೊಪ್ಪಳ :ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ಟಾದ ಹಿನ್ನೆಲೆ ಅನಿವಾರ್ಯವಾಗಿ 32 ಗೇಟ್​ಗಳ ಮೂಲಕ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ನದಿ ಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಡಿಸಿಎಂ ಡಿ. ಕೆ ಶಿವಕುಮಾರ್​ ತಿಳಿಸಿದ್ದಾರೆ.

ತುಂಗಭದ್ರಾ ಡ್ಯಾಂಗೆ ಭಾನುವಾರ ಭೇಟಿ ನೀಡಿ 19ನೇ ಕ್ರಸ್ಟ್ ಗೇಟ್ ವೀಕ್ಷಣೆ ಮಾಡಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

ನೀರನ್ನ ಹೊರಗಡೆ ಬಿಡದ ಹೊರತು ಗೇಟ್ ದುರಸ್ತಿ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದ ಕಾರಣ ತಂತ್ರಜ್ಞರ ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. ಕೇಂದ್ರ ಜಲ ಆಯೋಗದವರು ಕೂಡಾ ತಂತ್ರಜ್ಞರನ್ನು ಕಳುಹಿಸಿದ್ದಾರೆ. ನಾವು ಕೂಡಾ ನುರಿತ ತಂತ್ರಜ್ಞರನ್ನು ಕರೆಸಿದ್ದೇವೆ. ಶನಿವಾರ ರಾತ್ರಿಯಿಂದಲೇ ಅಧಿಕಾರಿಗಳ ಜೊತೆ ದೂರವಾಣಿ ಸಂಪರ್ಕದಲ್ಲಿದ್ದು, ಪ್ರತಿ ಕ್ಷಣದ ಮಾಹಿತಿ ಪಡೆಯುತ್ತಿದ್ದೇನೆ ಎಂದು ಹೇಳಿದರು.

ಅವರಿಗೆ ಈಗಾಗಲೇ ಜಲಾಶಯದ ಡಿಸೈನ್ ನೀಡಲಾಗಿದೆ. ಸದ್ಯ ಜಲಾಶಯದಿಂದ 98 ಸಾವಿರ ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ. 19ನೇ ಗೇಟ್ ಒಂದರಲ್ಲಿಯೇ 35 ಸಾವಿರ ಕ್ಯೂಸೆಕ್ ನೀರು ಹೊರ ಹೋಗುತ್ತಿದೆ. ಅಣೆಕಟ್ಟಿನ ಭದ್ರತೆ ದೃಷ್ಟಿಯಿಂದ ಎಲ್ಲಾ ಗೇಟ್​ಗಳ ಮೂಲಕ ನೀರನ್ನು ನದಿಗೆ ಬಿಡಲಾಗುತ್ತಿದೆ. ನೀರಿನ ಒತ್ತಡ ಕಡಿಮೆ ಮಾಡಲು ಅನಿವಾರ್ಯ ವಾಗಿ ಇನ್ನುಳಿದ ಗೇಟ್​ಗಳನ್ನು ಓಪನ್ ಮಾಡಬೇಕಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ತಿಳಿಸಲಾಗಿದೆ. ಇದನ್ನು ಕೂಡಲೇ ಸರಿಪಡಿಸುವಂತ ಕೆಲಸ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

ತುಂಗಭದ್ರಾ ಜಲಾಶಯ ಒಟ್ಟು 12 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಜೀವನದಿಯಾಗಿದೆ. ಇದು ನಮ್ಮ ರೈತರ, ಈ ದೇಶದ ಆಸ್ತಿಯಾಗಿದೆ. ಇದನ್ನ ಉಳಿಸಿಕೊಳ್ಳುವ ಮತ್ತು ಕಾಯ್ದುಕೊಳ್ಳುವ ಕೆಲಸ ನಮ್ಮದಾಗಿದೆ. ಯಾವುದೇ ಕಾರಣಕ್ಕೂ ನದಿ ಅಚ್ಚುಕಟ್ಟು ಪ್ರದೇಶದ ರೈತರು ಭಯಪಡುವ ಅವಶ್ಯಕತೆ ಇಲ್ಲ. ಜಲಾಶಯದಿಂದ 60 ಟಿಎಂಸಿ ನೀರು ಖಾಲಿ ಮಾಡಬೇಕಿದೆ. ಹೀಗಾಗಿ ‌ನೀರು ಹೊರಗಡೆ ಬಿಡಲಾಗ್ತಿದೆ ಎಂದು ಹೇಳಿದರು.

ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

ಇದೇ 13 ರಂದು ನಾನು ಮತ್ತು ಸಿಎಂ ಸಿದ್ದರಾಮಯ್ಯನವರು ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಆದರೆ ಈಗ ಅದನ್ನು ಮುಂದೂಡಲಾಗಿದೆ. ಇದು 60 ರಿಂದ 70 ವರ್ಷ ಹಳೆಯ ಜಲಾಶಯ. ಪ್ರಕೃತಿಯಲ್ಲಿ ಕೆಲವು ಸಲ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಈ ಘಟನೆಗೆ ಸಂಬಂಧಿಸಿದಂತೆ ನಾನು ಯಾವ ಅಧಿಕಾರಿಗಳನ್ನೂ ದೂರುವುದಿಲ್ಲ. ಅವರೆಲ್ಲ ತಮ್ಮ ತಮ್ಮ ಕೆಲಸವನ್ನು ಸರಿಯಾಗಿ ಮಾಡಿಕೊಂಡು ಹೋಗುತ್ತಿದ್ದಾರೆ. ಸದ್ಯ ಆಗಿರುವ ಸಮಸ್ಯೆಯನ್ನು ಬಗೆಹರಿಸುವ ಕೆಲಸದ ಕಡೆ ಮಾತ್ರ ನಾವು ಗಮನಹರಿಸುತ್ತೇವೆ ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ :ರೈತರು, ತುಂಗಭದ್ರಾ ಅಣೆಕಟ್ಟಿನ ಹಿತರಕ್ಷಣೆಗೆ ತಜ್ಞರ ವರದಿ ಆಧರಿಸಿ ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್ - Tungabhadra Dam

Last Updated : Aug 11, 2024, 5:03 PM IST

ABOUT THE AUTHOR

...view details