ಕರ್ನಾಟಕ

karnataka

By ETV Bharat Karnataka Team

Published : Sep 1, 2024, 7:50 PM IST

ETV Bharat / state

ಕನಕಪುರದಲ್ಲಿ ಜನಸ್ಪಂದನ ಕಾರ್ಯಕ್ರಮ: ಜನರ ಸಮಸ್ಯೆ ಆಲಿಸಿದ ಡಿ.ಕೆ. ಶಿವಕುಮಾರ್ - Janaspandana programme

ಡಿಸಿಎಂ ಡಿ.ಕೆ. ಶಿವಕುಮಾರ್​ ಇಂದು ಕನಕಪುರದ ತಮ್ಮ ನಿವಾಸದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿ, ನೂರಾರು ಜನರ ಅಹವಾಲುಗಳನ್ನು ಸ್ವೀಕರಿಸಿದರು.

ಜನಸ್ಪಂದನ ಕಾರ್ಯಕ್ರಮ
ಜನಸ್ಪಂದನ ಕಾರ್ಯಕ್ರಮ (ETV Bharat)

ರಾಮನಗರ:ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ, ಸಹಾಯ ಧನ, ನಿವೇಶನ, ಮನೆ, ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿ, ಸರ್ಕಾರಿ ಶಾಲೆ ಶಿಕ್ಷಕರ ನೇಮಕ, ಕಾಲೇಜು ಶುಲ್ಕ ಪಾವತಿಗೆ ಸಹಾಯ ಸೇರಿದಂತೆ ವಿವಿಧ ಅರ್ಜಿ ಹೊತ್ತು ತಂದ ನೂರಾರು ಜನರ ಸಮಸ್ಯೆಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪರಿಹಾರ ನೀಡುವ ಭರವಸೆ ಕೊಟ್ಟರು.

ಇಂದು ಕನಕಪುರದ ನಿವಾಸದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ ಶಿವಕುಮಾರ್ ಅವರು, ನೂರಾರು ಜನರ ಅಹವಾಲುಗಳನ್ನು ಸ್ವೀಕರಿಸಿದರು. ಉಯ್ಯಂಬಳ್ಳಿ ಪಂಚಾಯಿತಿ ಸದಸ್ಯರಾದ ರಮೇಶ್ ನಾಯಕ್ ಎಂಬುವರು ತಮ್ಮ ಗ್ರಾಮಸ್ಥರ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮಸ್ಥ ಮಲ್ಲೇಶ್ ಎಂಬುವರು ತೋಟಗಾರಿಕೆ ಇಲಾಖೆಯ ಫಾರಂಗೇಟ್ ಯೋಜನೆಯಲ್ಲಿ ಕೊಟ್ಟಿಗೆ ಕಟ್ಟಲು ಸಹಾಯ ದೊರಕಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.

ಇನ್ನು ಲತಾ ಬಾಯಿ ಎಂಬವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು. ಇನ್ನು ಸಿದ್ದ ನಾಯಕ್ ಎಂಬುವರು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಸಿಕೊಡಬೇಕು ಎಂದು ಮನವಿ ಸಲ್ಲಿಸಿದರು. ಈ ಎಲ್ಲಾ ಮನವಿಗಳನ್ನು ಪರಿಶೀಲಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಈ ಅರ್ಜಿಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.

ಇದಲ್ಲದೆ ಮಲ್ಲಪ್ಪನ ದೊಡ್ಡಿಯ ನಿವಾಸಿ ಮಹದೇವಸ್ವಾಮಿ ಎಂಬುವರು ಟ್ಯಾಕ್ಸಿ ಖರೀದಿ ಮಾಡಲು ಸರ್ಕಾರದಿಂದ ನೀಡುವ 3 ಲಕ್ಷ ಸಹಾಯಧನ ಕೊಡಿಸಬೇಕು ಎಂಬ ಮನವಿಗೆ ಶಿವಕುಮಾರ್ ಅವರು ಸಹಿ ಹಾಕಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರು. ಉಯ್ಯಂಬಳ್ಳಿ, ಯಡಮಾರನಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು ಎಂಬ ಗ್ರಾಮಸ್ಥರ ಮನವಿ ಒಪ್ಪಿದ ಡಿಕೆಶಿ ಸಮುದಾಯ ಭವನ ನಿರ್ಮಾಣದ ಭರವಸೆ ನೀಡಿದರು.

ಮೆಲ್ಲಕೋಟೆ ರೆಹಮಾನಿಯ ನಗರ ಕ್ವಾರೆ ರಸ್ತೆ. ವಾರ್ಡ್ 31ರ ಮೊಹಮದ್ ಅಸ್ಲಾಂ, ಕೊಳವೆಬಾವಿ ಇದ್ದರೂ ನೀರಿಲ್ಲ. ಸ್ಲಂ ಬೋರ್ಡ್ 20 ಮನೆಗಳಿದ್ದರೂ ನೀರು ಬರುತ್ತಿಲ್ಲ ಎಂದರು. ಕೂಡಲೇ ಈ ಬಗ್ಗೆ ಗಮನ ಹರಿಸುವಂತೆ ಡಿಸಿಎಂ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನಕಪುರ ಟೌನ್ ಮುತ್ತತ್ತಿ ವಠಾರ ನಿವಾಸಿ ಜಯಲಕ್ಷ್ಮಿ ಎಂಬುವರು ತಮಗೆ ನಿವೇಶನ ಆಗಿದ್ದು, ಮನೆ ಕಟ್ಟಿಕೊಡಲು ಹಣವನ್ನೂ ಪಾವತಿಸಿದ್ದು, ಕಲ್ಲು ಸಿಕ್ಕಿಲ್ಲ ಎಂಬ ಕಾರಣಕ್ಕೆ ಇನ್ನೂ ಮನೆ ಆಗಿಲ್ಲ ಎಂದರು. ಇವರ ಸಮಸ್ಯೆ ಬಗೆಹರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಶಿವಕುಮಾರ್ ಅವರು ಸೂಚನೆ ನೀಡಿದರು.

ಚನ್ನಪಟ್ಟಣದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಹಂಶಿಕಾ, ಹಂಶಿಣಿ ಅವರು ಕಾಲೇಜು ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಮನೆಗೆ ಕಳುಹಿಸಿದ್ದು, ಅವರಿಗೆ ಶುಲ್ಕ ಪಾವತಿಗೆ ನೆರವು ನೀಡಬೇಕು ಎಂದು ಶಶಾಂಕ್ ಎಂಬುವವರು ಮನವಿ ಸಲ್ಲಿಸಿದರು. ಇವರ ಅರ್ಜಿ ಸ್ವೀಕರಿಸಿದ ಶಿವಕುಮಾರ್ ಅವರು ಕಾಲೇಜಿನ ಜತೆ ಚರ್ಚೆ ಮಾಡಿ ನೆರವಿನ ಭರವಸೆ ನೀಡಿದ್ರು.

ಇದನ್ನೂ ಓದಿ:ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ 15 ದಿನಗಳ ಗಡುವು - Bengaluru Pothole

ABOUT THE AUTHOR

...view details