ಕರ್ನಾಟಕ

karnataka

15 ದಿನಗಳ ಪ್ರವಾಸಕ್ಕೆ ಹಣ ಪಡೆದು 13 ದಿನಕ್ಕೆ ಮುಕ್ತಾಯಗೊಳಿಸಿದ ಪ್ರಯಾಣ ಸಂಸ್ಥೆಗೆ ದಂಡ - Consumer Commission Order

By ETV Bharat Karnataka Team

Published : Apr 18, 2024, 7:09 AM IST

ನಿಗದಿತ ದಿನಗಳವರೆಗೆ ಪ್ರವಾಸ ಹಾಗೂ ಉತ್ತಮ ಸೇವೆ ಒದಗಿಸದ ಆರೋಪದ ಹಿನ್ನೆಲೆಯಲ್ಲಿ ಗ್ರಾಹಕನಿಗೆ ಪರಿಹಾರ ನೀಡುವಂತೆ ಪ್ರಮುಖ ಪ್ರಯಾಣ ಸಂಸ್ಥೆಯೊಂದಕ್ಕೆ ಗ್ರಾಹಕರ ಆಯೋಗವು ಸೂಚಿಸಿದೆ.

consumer-commission
ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ

ಬೆಂಗಳೂರು:15 ದಿನಗಳ ಪ್ರವಾಸ ಎಂದು ಗ್ರಾಹಕನಿಂದ ಹಣ ಪಡೆದು 13 ದಿನಕ್ಕೆ ಮುಕ್ತಾಯಗೊಳಿಸಿದ್ದಲ್ಲದೇ, ಉತ್ತಮ ಸೌಲಭ್ಯಗಳನ್ನು ಕಲ್ಪಿಸದ ಪ್ರಮುಖ ಪ್ರಯಾಣ ಸಂಸ್ಥೆಯಾದ ಥಾಮಸ್​ ಕುಕ್​ ಇಂಡಿಯಾ ಲಿಮಿಟೆಡ್​​​ಗೆ ನಗರದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 3 ಲಕ್ಷ ರೂ.ಗಳ ಪರಿಹಾರ ನೀಡಲು ಸೂಚನೆ ನೀಡಿದೆ.

ನಗರದ ಕಾಚರಕನಹಳ್ಳಿಯ ನಿವಾಸಿ ಕೆ.ರುದ್ರಮೂರ್ತಿ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ನಗರದ 1ನೇ ಹೆಚ್ಚುವರಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ಬಿ.ನಾರಾಯಣಪ್ಪ ಅವರ ನೇತೃತ್ವದ ತ್ರಿಸದಸ್ಯಪೀಠ, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದು, ಪರಿಹಾರ ನೀಡಲು ಸೂಚಿಸಿದೆ.

ಜತೆಗೆ ಪ್ರಕರಣ ಸಂಬಂಧ ಅರ್ಜಿದಾರರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾದ ಕಾರಣ ಥಾಮಸ್ ಕುಕ್ (ಇಂಡಿಯಾ) ಲಿಮಿಟೆಡ್​​​ ಕಂಪನಿಯು ಎರಡು ಲಕ್ಷ ರೂ. ಪರಿಹಾರ, ಸೇವಾ ನ್ಯೂನತೆಗಳಿಗಾಗಿ ಒಂದು ಲಕ್ಷ ರೂ. ಮತ್ತು ನ್ಯಾಯಾಂಗ ವೆಚ್ಚ ಐದು ಸಾವಿರ ರೂ.ಗಳನ್ನು ಆದೇಶದ ದಿನಾಂಕದಿಂದ ಎರಡು ತಿಂಗಳ ಒಳಗೆ ವಾರ್ಷಿಕ ಶೇ.10 ಬಡ್ಡಿಯೊಂದಿಗೆ ಅರ್ಜಿದಾರರಿಗೆ ಪಾವತಿಸಬೇಕು ಎಂದು ನಿರ್ದೇಶಿಸಿ ಆದೇಶ ಹೊರಡಿಸಿದೆ.

ಪ್ರವಾಸದ ಸಂದರ್ಭದಲ್ಲಿ ಕಾರಣಾಂತರಗಳಿಂದ ಲಂಡನ್​​ಗೆ​ ಹೋಗಲು ಸಾಧ್ಯವಾಗಿಲ್ಲ. ಆದರೆ, ಈ ರೀತಿಯ ಪ್ರವಾಸ ಕೈಗೊಂಡಾಗ ವೀಸಾ ಹಾಗೂ ವಿಮಾನದ ಟಿಕೆಟ್​ ಬುಕ್​ ಮಾಡುವುದು ಸೇರಿದಂತೆ ಇತರ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪ್ರಯಾಣಿಕರಿಗೆ ವ್ಯವಸ್ಥೆ ಮಾಡಿಸುವುದು ಪ್ರವಾಸ ಸಂಸ್ಥೆ ಕೆಲಸವಾಗಿರಲಿದೆ. ಆದರೆ, ನಿಗದಿತ ಸಮಯದಲ್ಲಿ ವೀಸಾ ಕೊಡಿಸುವುದು ಮತ್ತು ಟಿಕೆಟ್​ ಬುಕ್​ ಮಾಡುವ ವಿಚಾರದಲ್ಲಿ ಪ್ರವಾಸ ಸಂಸ್ಥೆ ವಿಫಲವಾಗಿದೆ. ಇದರಿಂದ ಲಂಡನ್​ ಪ್ರವಾಸ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ಪ್ರಕ್ರಿಯೆಯು ಸೇವಾ ನ್ಯೂನತೆಗೆ ಕಾರಣವಾಗಿದೆ. ಹೀಗಾಗಿ, ಪ್ರತಿವಾದಿಯಾಗಿರುವ ಥಾಮಸ್​ ಕುಕ್​ ಇಂಡಿಯಾ ಲಿಮಿಟೆಡ್​, ಅರ್ಜಿದಾರರಾದ ರುದ್ರಮೂರ್ತಿ ಅವರಿಗೆ ವೆಚ್ಚವನ್ನು ಭರಿಸಬೇಕು ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ಬೆಂಗಳೂರು ನಗರದ ಕಾಚರಕನಹಳ್ಳಿಯ ನಿವಾಸಿ ಕೆ.ರುದ್ರಮೂರ್ತಿ ಎಂಬುವರು ತಮ್ಮ ಕುಟುಂಬದೊಂದಿಗೆ ಥಾಮಸ್ ಕುಕ್ ಇಂಡಿಯಾ ಲಿಮಿಟೆಡ್ ಎಂಬ ಪ್ರವಾಸ ಕಂಪನಿಯಿಂದ 'ಗ್ರಾಂಡ್ ಬಾರ್ಗೈನ್​ ಟೂರ್ ಆಫ್​ ಯುರೋಪ್ - ಸೌತ್​ ಸ್ಪೆಷಲ್' ಹೆಸರಿನ 14 ರಾತ್ರಿ ಹಾಗೂ 15 ದಿನಗಳ ಪ್ರವಾಸಕ್ಕೆ ತೆರಳಲು ನಿರ್ಧರಿಸಿದ್ದರು. ಓರ್ವ ವ್ಯಕ್ತಿಗೆ ಜಿಎಸ್​ಟಿ ಹಾಗೂ ಟಿಸಿಎಸ್ ಸೇರಿ 3,79,535 ಪಾವತಿಸಬೇಕಾಗಿದ್ದು, ಅರ್ಜಿದಾರರು ಕುಟುಂಬದ ನಾಲ್ವರ ಜೊತೆಗೆ ಪ್ರವಾಸಕ್ಕೆ ತೆರಳಲು ನಿಶ್ಚಯಿಸಿ, ಕಂಪನಿಗೆ 16,37,000 ರೂ.ಗಳನ್ನು ಪಾವತಿಸಿದ್ದರು.

ಈ ಪ್ರವಾಸದಲ್ಲಿ ಯುರೋಪ್​ನ ಪ್ರಮುಖ ಸ್ಥಳಗಳಾದ ಲಂಡನ್, ಪ್ಯಾರೀಸ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಜರ್ಮನಿ, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯಾ ಹಾಗೂ ವ್ಯಾಟಿಕನ್ ಸಿಟಿಗೆ ಭೇಟಿ ಖಚಿತಪಡಿಸಲಾಗಿತ್ತು. ಜತೆಗೆ ಆಹಾರ, ವಸತಿ ಹಾಗೂ ಸಾರಿಗೆ ಸೌಲಭ್ಯವನ್ನೂ ಇದು ಒಳಗೊಂಡಿತು. ಆದರೆ, ಈ ಪ್ರವಾಸವು ಕಳೆದ ಮೇ. 24ರಂದು ಪ್ರಾರಂಭಗೊಂಡು ಜೂ.8 ರಂದು ಮುಕ್ತಾಯಗೊಂಡಿದೆ. ಪ್ರವಾಸ ಕಂಪನಿಯು 14 ರಾತ್ರಿ ಹಾಗೂ 15 ದಿನಗಳ ಪ್ರವಾಸವನ್ನು 12 ರಾತ್ರಿ ಹಾಗೂ 13 ದಿನಗಳಿಗೆ ಮೊಟಕುಗೊಳಿಸಿತು. ಅಲ್ಲದೇ, ಆಹಾರ, ವಸತಿ ಹಾಗೂ ಸಾರಿಗೆ ಸೌಲಭ್ಯಗಳನ್ನು ಸರಿಯಾಗಿ ನೀಡಿರಲಿಲ್ಲ. ಜತೆಗೆ, ಕಂಪನಿಯು ಪ್ರಸ್ತಾಪಿಸಿದ ಎಲ್ಲ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಿಲ್ಲ. ಪ್ರವಾಸದ ಮುಖ್ಯ ಭಾಗವಾಗಿರುವ ಲಂಡನ್​ಗೆ ತೆರಳಲಾಗಿರಲಿಲ್ಲ.

ಅಲ್ಲದೇ, ಪ್ರವಾಸವು ಕಳೆದ ಮೇ 24ರಂದು ಬೆಳಗ್ಗೆ 10:10 ಗಂಟೆಗೆ ಪ್ರಾರಂಭಗೊಳ್ಳಬೇಕಿತ್ತು. ಆದರೆ ದೂರುದಾರರ ವೀಸಾ ಬರುವುದು ವಿಳಂಬವಾದ ಕಾರಣ ಅವರು ಸಕಾಲಕ್ಕೆ ಹೊರಡಲು ಸಾಧ್ಯವಾಗಲಿಲ್ಲ. ವೀಸಾ ಎಂಬೆಸ್ಸಿಯು ಅಂದು ಸಂಜೆ ವೇಳೆಗೆ ದೂರುದಾರರ ವೀಸಾ ಅನುಮೋದಿಸಿತ್ತು. ಇದರಿಂದಾಗಿ ದೂರುದಾರರು ನೇರವಾಗಿ ಪ್ಯಾರಿಸ್​ ನಗರವನ್ನು ತಲುಪಿದ್ದರು. ಅಷ್ಟರಲ್ಲಿ ಪ್ರವಾಸದ ಲಂಡನ್ ನಗರದ ಭಾಗ ಮುಗಿದಿತ್ತು ಎಂದು ಕಂಪನಿಯು ಹೇಳಿತು ಎಂದು ಆರೋಪಿಸಿ ಅರ್ಜಿದಾರರು ಕಂಪನಿಯ ಸೇವಾ ನ್ಯೂನತೆ ಬಗ್ಗೆ ಬೆಂಗಳೂರಿನ ಮೊದಲನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ:ಬ್ಯಾಗ್ ಗೆ ಹೆಚ್ಚುವರಿ ಹಣ ಪಡೆದ ಶಾಪಿಂಗ್ ಮಳಿಗೆಗೆ 7 ಸಾವಿರ ರೂ. ದಂಡ ವಿಧಿಸಿದ ಕೋರ್ಟ್ - Consumer Court

ABOUT THE AUTHOR

...view details