ಕರ್ನಾಟಕ

karnataka

ETV Bharat / state

ಮಿಸ್ತ್ರಿ ಟೀಂನಿಂದ 2 ದಿನ ಲೋಕಸಭಾ ಸೋಲಿನ ಸತ್ಯಶೋಧನೆ, ಕೈ ನಾಯಕರ ಅಭಿಪ್ರಾಯ ಸಂಗ್ರಹ - Congress Meeting

ಲೋಕಸಭಾ ಚುನಾವಣೆಯ ಹಿನ್ನಡೆಗೆ ಕಾರಣವಾದ ಅಂಶಗಳನ್ನು ಅರಿಯಲು ಇಂದಿನಿಂದ ಕೆಪಿಸಿಸಿ ಕಚೇರಿಯಲ್ಲಿ ಎರಡು ದಿನ ಸಭೆಗಳು ನಡೆಯಲಿವೆ.

By ETV Bharat Karnataka Team

Published : Jul 11, 2024, 7:16 AM IST

Congress meeting
ಕಾಂಗ್ರೆಸ್ (ETV Bharat)

ಬೆಂಗಳೂರು: 2024ರ ಲೋಕಸಭಾ ಚುನಾವಣೆ ಫಲಿತಾಂಶದ ಹಿನ್ನಡೆಗೆ ಕಾರಣಗಳ ಹುಡುಕಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಮಿಸ್ತ್ರಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಈ ಸಮಿತಿ ಇಂದಿನಿಂದ ಕೆಪಿಸಿಸಿ ಕಚೇರಿಯಲ್ಲಿ 2 ದಿನಗಳ ಕಾಲ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಲಿದೆ.

ರಾಜ್ಯದಲ್ಲಿ ಕಾಂಗ್ರೆಸ್​ಗೆ ನಿರೀಕ್ಷಿಸಿದಷ್ಟು ಸ್ಥಾನಗಳು ಬಂದಿಲ್ಲ. 15 ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕೇವಲ 9 ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ನೀರಸ ಫಲಿತಾಂಶದ ಹಿನ್ನೆಲೆಯಲ್ಲಿ ಹೈಕಮಾಂಡ್ ಸತ್ಯಶೋಧನಾ ಸಮಿತಿ ರಚಿಸಿತ್ತು. ರಾಜ್ಯಕ್ಕೆ ಭೇಟಿ ನೀಡಿರುವ ಸಮಿತಿ ಸದಸ್ಯರು ಪಕ್ಷದ ಮುಖಂಡರು, ಪದಾಧಿಕಾರಿಗಳು, ಸಂಸದರು, ಶಾಸಕರು, ಕಾರ್ಯಾಧ್ಯಕ್ಷರನ್ನು ಭೇಟಿ ಮಾಡಿ ಅಭಿಪ್ರಾಯ, ಮಾಹಿತಿ ಕಲೆಹಾಕಲಿದ್ದಾರೆ.

ಎಲ್ಲಿ ಲೋಪಗಳಾಗಿವೆ ಎಂಬ ಬಗ್ಗೆ ಸಮಿತಿ ವಾಸ್ತವಿಕ ಅಂಶಗಳನ್ನು ಪಕ್ಷದ ಕಾರ್ಯಕರ್ತರು, ಮುಖಂಡರಿಂದ ಪಡೆದುಕೊಳ್ಳಲಿದೆ. ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಸರಣಿ ಸಭೆ ನಡೆಯಲಿದ್ದು ನಾಯಕರು, ಪದಾಧಿಕಾರಿಗಳು, ಮುಖಂಡರು ತಮ್ಮ ಅಭಿಪ್ರಾಯ ನೀಡಲಿದ್ದಾರೆ. ನಂತರ ಹೈಕಮಾಂಡ್​​​ಗೆ ವರದಿ ಸಲ್ಲಿಸಲಿದೆ.

ಸಚಿವರು, ಶಾಸಕರು, ಸಂಸದರ ಜೊತೆ ಸಭೆ: ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಮಧುಸೂಧನ್ ಮಿಸ್ತ್ರಿ ಟೀಂ ಸಭೆ ನಡೆಸಲಿದೆ. ಕ್ವೀನ್ಸ್ ರಸ್ತೆಯ ಕಚೇರಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಮಿಸ್ತ್ರಿ ಅವರಿಗೆ ಗೌರವ್ ಗೊಗೋಯ್ ಹಾಗೂ ಎಐಸಿಸಿ ನಾಯಕ ಹಿಬಿ ಹಿಡನ್ ಸಾಥ್ ನೀಡಲಿದ್ದಾರೆ. ರಾಜ್ಯದಿಂದ ಆಯ್ಕೆಯಾದ ಎಐಸಿಸಿ ಪದಾಧಿಕಾರಿಗಳು, ಸಿಡಬ್ಲ್ಯುಸಿ ಸದಸ್ಯರ ಜೊತೆ ಮೊದಲಿಗೆ ಸಭೆ ನಡೆಸಲಿದ್ದಾರೆ. ನಂತರ ಹಿರಿಯ ನಾಯಕರು, ಸಚಿವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಲೋಕಸಭೆ, ರಾಜ್ಯಸಭೆ ಸದಸ್ಯರ ಅಭಿಪ್ರಾಯಗಳನ್ನೂ ಆಲಿಸಲಿದ್ದಾರೆ. ನಂತರ ಶಾಸಕರು, ವಿಧಾನಪರಿಷತ್ ಸದಸ್ಯರ ಜೊತೆ ಮೀಟಿಂಗ್ ನಡೆಸಲಿದ್ದಾರೆ. ಆ ನಂತರ ಜಿಲ್ಲಾಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು, ಪರಾಜಿತ ಅಭ್ಯರ್ಥಿಗಳ ಬಳಿಯಿಂದಲೂ ಮಾಹಿತಿ ಕಲೆಹಾಕಲಿದ್ದಾರೆ. ಕಾಂಗ್ರೆಸ್ ಕಾರ್ಮಿಕ ಘಟಕ, ಎನ್​​ಎಸ್​​ಯುಐ, ಯೂತ್ ಕಾಂಗ್ರೆಸ್, ಮಹಿಳಾ ಘಟಕ, ಎಸ್ಸಿಎಸ್ಟಿ ಘಟಕ, ಒಬಿಸಿ, ಅಲ್ಪಸಂಖ್ಯಾತ ಘಟಕ, ಸೇವಾದಳದ ಸದಸ್ಯರ ಜೊತೆಗೂ ಸಭೆ ನಡೆಸಿ ಸೋಲಿನ ಕಾರಣಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಅಂತಿಮವಾಗಿ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಐವರು ಕಾರ್ಯಾಧ್ಯಕ್ಷರಿಂದಲೂ ಮಾಹಿತಿ ಪಡೆಯಲಿದ್ದಾರೆ.

ಅಭಿಪ್ರಾಯ ಸಂಗ್ರಹ ಹೇಗೆ?: ನಾಯಕರು, ಮುಖಂಡರ ನಡುವೆ ಹೊಂದಾಣಿಕೆ ಕೊರತೆಯಾಗಿರುವ ಬಗ್ಗೆ, ಸೋತಿರುವ ಕಡೆ ಸಮರ್ಥರನ್ನು ಕಣಕ್ಕಿಳಿಸಿರಲಿಲ್ವೇ?, ಸ್ಥಳೀಯ ಮಟ್ಟದ ಅಸಮಾಧಾನವೇನಾದ್ರೂ ಕಾರಣವಾಯ್ತೇ?, ಸ್ಥಳೀಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದಿಲ್ಲವೇ?, ಪ್ರತಿಪಕ್ಷಗಳ ಜೊತೆ ಸ್ಥಳೀಯ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ರಾ?.

ಇದನ್ನೂ ಓದಿ:ಮಹಾಮಾರಿ ಭೀತಿ: ಕಳೆದ 24 ಗಂಟೆಯಲ್ಲಿ 293 ಮಂದಿಯಲ್ಲಿ ಡೆಂಗ್ಯೂ ಪತ್ತೆ! - Dengue Cases

ಮತ ಪ್ರಚಾರ, ರಣ ನೀತಿ ರೂಪಿಸುವಲ್ಲಿ ಲೋಪಗಳಾಗಿವೆಯೇ?, ಜಾತಿ ಸಮೀಕರಣ ಈ ಬಾರಿ ಕೈಕೊಟ್ಟಿದ್ಯಾ?, ಮತದಾರರನ್ನ ಸೆಳೆಯುವಲ್ಲಿ ಆದ ವೈಫಲ್ಯಗಳೇನು?, ಗ್ಯಾರಂಟಿಗಳನ್ನು ಕೊಟ್ರೂ ನಾವು ಸೋತಿದ್ದೇಕೆ?, ಲಿಂಗಾಯತ, ಒಕ್ಕಲಿಗ ಸಮುದಾಯ ಕೈಹಿಡಿಯಲಿಲ್ಲವೇ?, ಹಳೇ ಮೈಸೂರು ಭಾಗದಲ್ಲಿ‌ ಸೋಲಿಗೆ ಕಾರಣಗಳೇನು?, ಉಸ್ತುವಾರಿ ಸಚಿವರು ಸರಿಯಾಗಿ ಜವಾಬ್ದಾರಿ ನಿಭಾಯಿಸಲಿಲ್ವೇ?, ಪಕ್ಷ ಸಂಘಟನೆ ಮಾಡದೇ ಕಾರ್ಯಕರ್ತರನ್ನು ಕಡೆಗಣನೆ ಮಾಡಲಾಗಿದೆಯಾ ಎಂಬಿತ್ಯಾದಿ ಪ್ರಶ್ನೆಗಳ ಮೂಲಕ ಸತ್ಯಶೋಧನಾ ಸಮಿತಿ ಮಾಹಿತಿ ಸಂಗ್ರಹಿಸಲಿದೆ.

ಇದನ್ನೂ ಓದಿ:ಬೆಳೆ ವಿಮೆ ಯೋಜನೆಯ ಅನುಮಾನ ಬಗೆಹರಿಸುವಂತೆ ಸಚಿವ ಚಲುವರಾಯಸ್ವಾಮಿ ನಿರ್ದೇಶನ - Crop Insurance Scheme

ವರದಿ ಆಧರಿಸಿ ಹೈಕಮಾಂಡ್ ಕ್ರಮ: ಸಮಿತಿ ನೀಡುವ ವರದಿ ಆಧರಿಸಿ ಹೈಕಮಾಂಡ್ ಕ್ರಮಗಳನ್ನು ಜರುಗಿಸಲಿದೆ. ಉಸ್ತುವಾರಿ ಸಚಿವರನ್ನು ಹೊಣೆಗಾರರನ್ನಾಗಿಸುವುದೂ ಸೇರಿ ಪಕ್ಷ ಸಂಘಟನೆಗೆ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ.

ABOUT THE AUTHOR

...view details