ಕರ್ನಾಟಕ

karnataka

ಹುಬ್ಬಳ್ಳಿ: ಮೇಲ್ಸೇತುವೆ ಕಾಮಗಾರಿಗೆ ಈದ್ಗಾ ಮೈದಾನದ ಕಾಂಪೌಂಡ್ ತೆರವಿಗೆ ಸಿದ್ಧತೆ - Hubballi Eidgah maidaan

By ETV Bharat Karnataka Team

Published : Aug 2, 2024, 8:25 AM IST

ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಗೆ ಈದ್ಗಾ ಮೈದಾನದ ಕಾಂಪೌಂಡ್ ತೆರವಿಗೆ ಭದ್ರತೆ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪತ್ರ ಬರೆದಿದೆ.

ಹುಬ್ಬಳ್ಳಿ ಮೇಲ್ಸೇತುವೆ
ಹುಬ್ಬಳ್ಳಿ ಮೇಲ್ಸೇತುವೆ (ETV Bharat)

ಹುಬ್ಬಳ್ಳಿ:ನಗರದ ಚನ್ನಮ್ಮ ವೃತ್ತದ ಫ್ಲೈಓವರ್ ಕಾಮಗಾರಿ‌ ಭರದಿಂದ ಸಾಗಿದೆ. ಈಗಾಗಲೇ ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈಗ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಗೆ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನ ಆವರಣದ ಕಾಂಪೌಂಡ್ ಭಾಗಶಃ ತೆರವಾಗಲಿದೆ.

ಈದ್ಗಾ ಮೈದಾನದ ಕಾಂಪೌಂಡ್ ತೆರವು ಕಾರ್ಯಕ್ಕೆ ಅನುಮತಿ ಹಾಗೂ ಭದ್ರತೆ ಕೋರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಹೆಚ್‌ಎಐ) ಅಧಿಕಾರಿಗಳು ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆಗೆ ಜುಲೈ 23ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ 'ಈಟಿವಿ ಭಾರತ'ಗೆ ಲಭ್ಯವಾಗಿದೆ.

ಚನ್ನಮ್ಮ ವೃತ್ತದಿಂದ ಕೋರ್ಟ್ ವೃತ್ತದ ಕಡೆ ಮತ್ತು ಚನ್ನಮ್ಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ತೆರಳುವ ಈದ್ಗಾ ಮೈದಾನದ ಅಕ್ಕಪಕ್ಕ ಅಂದಾಜು ಶೇ 10-15ರಷ್ಟು ಭಾಗ ತೆರವು ಆಗಲಿದೆ. ಮೇಲ್ಸೇತುವೆಗೆ ಕಾಮತ್ ಹೋಟೆಲ್ ಎದುರು ಬೃಹತ್ ಪಿಲ್ಲರ್, ಸಂಗೊಳ್ಳಿ ರಾಯಣ್ಣ ವೃತ್ತದ ಹೈಮಾಸ್ಟ್ ಕಂಬದ ಬಳಿ ಒಂದು ಪಿಲ್ಲರ್ ನಿರ್ಮಾಣ ಆಗಲಿದೆ. ಈ ಕಾಮಗಾರಿಗೆ ಪಕ್ಕದ ಉಪನಗರ ಪೊಲೀಸ್ ಠಾಣೆ ಕಟ್ಟಡದ ಶೇ.20ರಷ್ಟು ಭಾಗವೂ ತೆರವು ಆಗಲಿದೆ.

ಮೊದಲ ಹಂತದ 300 ಕೋಟಿ ರೂ ವೆಚ್ಚದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಎನ್‌ಹೆಚ್‌ಎಐ ಅಧಿಕಾರಿಗಳು ಮುಂದಾಗಿದ್ದಾರೆ. ಚನ್ನಮ್ಮ ವೃತ್ತವನ್ನು ಕೇಂದ್ರವಾಗಿರಿಸಿಕೊಂಡು ಮೊದಲ ಹಂತದಲ್ಲಿ 300 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಈದ್ಗಾ ಮೈದಾನದ ಕಾಂಪೌಂಡ್ ತೆರವಿಗೆ ಭದ್ರತೆ ನೀಡುವ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಂಜಿನಿಯರ್ ಗಂಗಾಧರ್ ತಿಳಿಸಿದ್ದಾರೆ.

ಹೆದ್ದಾರಿ ಪ್ರಾಧಿಕಾರದ ಪತ್ರದ ಸಾರಾಂಶ:ರಾಣಿ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಆವರಣದ ಎರಡೂ ಕಡೆಯ ಗೋಡೆಯನ್ನು ಭಾಗಶಃ ಒಡೆದು ಮೇಲ್ಸೇತುವೆ ಕಾಮಗಾರಿ ನಡೆಸಬೇಕಿದೆ. ಈ ಭಾಗದಲ್ಲಿ ಎರಡು ಪಿಲ್ಲರ್‌ಗಳು ನಿರ್ಮಾಣ ಆಗಲಿದ್ದು, ಭೂಸ್ವಾಧೀನದ ಪ್ರಸ್ತಾವ ಅಂತಿಮ ಹಂತದಲ್ಲಿದೆ. ಈ ಕುರಿತು ಜುಲೈ 6ರಂದು ಜಿಲ್ಲಾಧಿಕಾರಿ, ಪೊಲೀಸ್ ಕಮಿಷನ‌ರ್ ಮತ್ತು ಹು-ಧಾ ಮಹಾನಗರ ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ಸಭೆ ನಡೆಸಿ, ನೀಲ ನಕ್ಷೆಯಂತೆ ಪಿಲ್ಲ‌ರ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಿದ್ದು, ಯೋಜನೆ ಅನುಷ್ಠಾನಕ್ಕೆ ಪೊಲೀಸ್‌ ಭದ್ರತೆ ನೀಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಸಹಾಯಕ ಎಂಜಿನಿಯರ್ ಅವರು ಪೊಲೀಸ್ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಮೇಕೆದಾಟು ವೈಭವ: WATCH VIDEO - mekedatu drone view

ABOUT THE AUTHOR

...view details