ಕರ್ನಾಟಕ

karnataka

ಗ್ಯಾರಂಟಿ ಯೋಜನೆ ಸ್ಥಗಿತದ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

By ETV Bharat Karnataka Team

Published : Jan 31, 2024, 3:43 PM IST

ಎಲ್ಲ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕೊಟ್ಟ ಭರವಸೆಯಂತೆ ನಾವು ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಯಾವುದೇ ಕಾರಣಕ್ಕೂ ಆ ಯೋಜನೆಗಳನ್ನು ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ. ಎಲ್ಲ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಗಡಿ ಶಾಸಕ ಬಾಲಕೃಷ್ಣ ಯಾವ ಸಂದರ್ಭದಲ್ಲಿ ಏನು ಹೇಳಿದ್ದಾರೋ ಗೊತ್ತಿಲ್ಲ. ಆದರೆ, ನಾವು ಯಾವ ಕಾರಣಕ್ಕೂ ನಮ್ಮ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ. ಬಡವರ ಯೋಜನೆಗಳಾಗಿರುವ ಗ್ಯಾರಂಟಿಗಳು ಮುಂದುವರೆಯಲಿವೆ. ಅವುಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

ಕನ್ನಡ ಬೋರ್ಡ್ ಕಡ್ಡಾಯ ಸುಗ್ರೀವಾಜ್ಞೆಗೆ ಸಹಿಹಾಕದೇ ಕಡತವನ್ನು ರಾಜ್ಯಪಾಲರು ವಾಪಸ್ ಕಳುಹಿಸಿಲ್ಲ. ಕಡತ ತಲುಪುವ ವೇಳೆಗೆ ಅಧಿವೇಶನದ ದಿನಾಂಕ ಪ್ರಕಟವಾಗಿತ್ತು. ಹಾಗಾಗಿ ಸಹಿ ಹಾಕಿಲ್ಲ. ಅಧಿವೇಶನದಲ್ಲಿಯೇ ಬಿಲ್ ಪಾಸ್ ಮಾಡಿಕೊಂಡು ಕಳುಹಿಸಿ ಎಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ. ಇದರಲ್ಲಿ ವಿವಾದ ಏನೂ ಇಲ್ಲ. ನಾವು ಸದನದಲ್ಲಿಯೇ ಬಿಲ್ ಮಂಡಿಸಿ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡು ರಾಜ್ಯಪಾಲರಿಗೆ ಕಳುಹಿಸಿಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಬಜೆಟ್ ಬಗ್ಗೆ ನಮ್ಮ ನಿರೀಕ್ಷೆಗಳಿವೆ. ಆದರೆ ಅದರ ಬಗ್ಗೆ ಇಂದು ಮಾತನಾಡುವುದಿಲ್ಲ. ನಾಳೆ ಬಜೆಟ್ ಮಂಡನೆಯಾದ ನಂತರ ಆ ಕುರಿತು ಪ್ರತಿಕ್ರಿಯೆ ನೀಡುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ. ಇಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿದ್ದೇನೆ. ಅವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಏನು ಮಾಡಿದ್ದಾರೆ ಎಂದು ಪರಿಶೀಲನೆ ಮಾಡಿದೆ. ನಾವು ಅಧಿಕಾರಕ್ಕೆ ಬಂದು 8 ತಿಂಗಳಾಗಿದೆ. ಅಷ್ಟರಲ್ಲಿ ಎಲ್ಲಿ ಹೋಗಿದ್ದೀರಿ. ಏನು ಮಾಡಿದ್ದೀರಿ. ಜಿಲ್ಲಾಡಳಿತಕ್ಕೆ ಏನು ಸಲಹೆ ಕೊಟ್ಟಿದ್ದೀರಿ ಎಂದು ಪರಿಶೀಲಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಅಧಿಕಾರಿಗಳು ಜಾತ್ಯತೀತತೆ, ಸಂವಿಧಾನಕ್ಕೆ ಬದ್ಧರಾಗಿರಬೇಕು: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details