ಕರ್ನಾಟಕ

karnataka

ETV Bharat / state

ಮುಡಾ: ಚುನಾವಣಾ ಆಯೋಗ ನೋಟಿಸ್‌ ಕೊಟ್ಟರೆ ಉತ್ತರ ನೀಡುವೆ- ಸಿಎಂ - CM Siddaramaiah

ಹಿಂದುಳಿದ ವರ್ಗದ ವ್ಯಕ್ತಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾನೆಂಬ ಹೊಟ್ಟೆ ಉರಿಯಿಂದ ಇವೆಲ್ಲಾ ನಡೆಯುತ್ತಿವೆ. ನನ್ನ ವಿರುದ್ಧ ನೀಡಿರುವ ದೂರಿಗೆ ಚುನಾವಣಾ ಆಯೋಗ ನೋಟಿಸ್​​ ಕೊಟ್ಟರೆ, ಉತ್ತರಿಸುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

By ETV Bharat Karnataka Team

Published : Jul 11, 2024, 1:25 PM IST

CM SIDDARAMAIAH
ಸಿಎಂ ಸಿದ್ದರಾಮಯ್ಯ (ETV Bharat)

ಸಿಎಂ ಸಿದ್ದರಾಮಯ್ಯ (ETV Bharat)

ಮೈಸೂರು:"ಚುನಾವಣಾ ಆಯೋಗ ನನಗೆ ನೋಟಿಸ್​ ಕೊಟ್ಟರೆ ಉತ್ತರ ನೀಡುತ್ತೇನೆ" ಎಂದು ಮೈಸೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಲ್ಲಿನ ತಮ್ಮ ನಿವಾಸದೆದುರು ಸ್ಥಳೀಯವಾಗಿ ಜನತಾ ದರ್ಶನ ನಡೆಸಿದ ಬಳಿಕ ಮುಖ್ಯಮಂತ್ರಿಗಳು ಮಾಧ್ಯಮಗಳೊಂದಿಗೆ ಮಾತನಾಡಿದರು.

"ಮುಡಾ ಬಹಳ ಹಿಂದಿನಿಂದಲೂ ಗಬ್ಬೆದ್ದು ಹೋಗಿದೆ. ಅದನ್ನು ಸರಿ ಮಾಡುತ್ತೇನೆ. ನಮ್ಮ ಮುಡಾ ಪ್ರಕರಣ, ಹಗರಣವಲ್ಲ. ನಮ್ಮದು ಸರಿ ಇದೆ. ಪರಿಹಾರದ ಬದಲು ನಿವೇಶನ ಕೊಟ್ಟಿದ್ದಾರೆ. 2021ರಲ್ಲಿ ಬಿಜೆಪಿ ಸರ್ಕಾರ 50:50ರ ನಿಯಮ ಮಾಡಿದ್ದಾರೆ. ಅದರಂತೆ ನಮಗೆ ಸೈಟ್‌ ನೀಡಿದ್ದಾರೆ. ಬಿಜೆಪಿಯವರು ನಾಳೆ ಪ್ರತಿಭಟನೆ ಮಾಡುತ್ತಿರುವುದು ರಾಜಕೀಯ ಉದ್ದೇಶಕ್ಕಾಗಿ. ನಾವೂ ಸಹ ರಾಜಕೀಯವಾಗಿಯೇ ಮಾಡುತ್ತೇವೆ, ರಾಜಕೀಯವಾಗಿಯೇ ಎದುರಿಸುತ್ತೇನೆ" ಎಂದರು.

"ಹಲವು ವರ್ಷಗಳಿಂದ ರೈತರಿಗೆ ಅನುಕೂಲವಾಗಲು ಇರುವ ನಿಯಮಗಳನ್ನು ಬಳಸಿಕೊಂಡು ಆಯುಕ್ತರು, ಅಧಿಕಾರಿಗಳು ಹಾಗೂ ದಲ್ಲಾಳಿಗಳಿಂದಾಗಿ ಮುಡಾ ಗಬ್ಬೆದ್ದು ಹೋಗಿದೆ. ಈಗಾಗಲೇ ಇಬ್ಬರು ಐಎಎಸ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖಾ ವರದಿ ಬಂದ ನಂತರ ಮುಂದಿನ ಕ್ರಮವಾಗುತ್ತದೆ" ಎಂದು ಸಿಎಂ ತಿಳಿಸಿದರು.

"ನನ್ನ ಪತ್ನಿಗೆ ಸೇರಿದ ಭೂಮಿಯನ್ನು ಮುಡಾದವರು ಯಾವುದೇ ಮಾಹಿತಿ ನೀಡದೇ ವಶಪಡಿಸಿಕೊಂಡು ನಿವೇಶನ ಮಾಡಿ ಸಾರ್ವಜನಿಕರಿಗೆ ಹಂಚಿದ್ದಾರೆ. ನನಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಈ ಬಗ್ಗೆ 50:50 ಅನುಪಾತದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ವಿಜಯನಗರದಲ್ಲಿ ಬದಲಿ ನಿವೇಶನ ಕೊಟ್ಟಿದ್ದಾರೆ. ಇದು ಭೂಮಿ ಕಳೆದುಕೊಂಡ ನಮಗೆ ಪರಿಹಾರ. ಬೇಕಿದ್ದರೆ ನಮಗೆ ಕೊಟ್ಟಿರುವ ನಿವೇಶನವನ್ನು ವಾಪಸ್‌ ಪಡೆಯಲಿ. ನಮ್ಮ ಭೂಮಿಯ ಹಿಂದಿನ ಮಾರುಕಟ್ಟೆ ದರ 62 ಕೋಟಿ ರೂಪಾಯಿ ನೀಡಲಿ" ಸಿಎಂ ಹೇಳಿದರು.

"ವಾಲ್ಮೀಕಿ ನಿಗಮದ ಹಗರಣದಲ್ಲಿ ಸರ್ಕಾರಿ ಖಜಾನೆಯಿಂದಲೇ 187 ಕೋಟಿ ಹಣ ವರ್ಗಾವಣೆ ಆಗಿದೆ ಎಂಬುದಕ್ಕೆ ಇನ್ನೂ ಅಧಿಕೃತವಾದ ಯಾವ ವರದಿಯೂ ಬಂದಿಲ್ಲ. ನಿಗಮಕ್ಕೆ ಖಜಾನೆಯಿಂದ ಹಣ ವರ್ಗಾವಣೆ ಆಗುವುದು ನನ್ನ ಗಮನಕ್ಕೆ ಬರುವುದಿಲ್ಲ. ಹಣವಿದ್ದರೆ ಅಧಿಕಾರಿಗಳು ಆ ಕೆಲಸ ಮಾಡುತ್ತಾರೆ. ನಾನು ಯಾವುದೇ ರೀತಿ ಹಣ ವರ್ಗಾವಣೆಗೆ ಸಹಿ ಹಾಕಿಲ್ಲ. ಸಿಬಿಐ, ಇಡಿ, ಹಾಗೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ, ಈಗ ಎಲ್ಲವೂ ತನಿಖಾ ಹಂತದಲ್ಲೇ ಇದೆ" ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ:ವಾಲ್ಮೀಕಿ ನಿಗಮದ ಹಗರಣ: ಇಡಿ ದಾಳಿ ಅವಶ್ಯಕತೆ ಇರಲಿಲ್ಲ- ಡಿಸಿಎಂ ಡಿ.ಕೆ.ಶಿವಕುಮಾರ್ - DCM D K Shivakumar

ABOUT THE AUTHOR

...view details