ದಾವಣಗೆರೆ:"ಪತ್ರಿಕೋದ್ಯಮದಿಂದ ನ್ಯಾಯ ಸಿಗುತ್ತೆ ಎಂದು ಜನ ನಂಬಿಕೆ ಇಟ್ಟಿದ್ದಾರೆ. ಆ ನಿರೀಕ್ಷೆಗಳು ಸುಳ್ಳಾಗಬಾರದು. ಮಾಧ್ಯಮದ ಕೆಲಸ ಸತ್ಯ ನಿಷ್ಠೆಯಿಂದ ಕೂಡಿರಬೇಕು. ಧ್ವನಿ ಇಲ್ಲದವರಿಗೆ, ಅವಕಾಶ ವಂಚಿತರಿಗೆ ಮಾಧ್ಯಮ ಆಸರೆಯಾಗಬೇಕು. ಸರ್ಕಾರ ಹೇಗೆ ಸಾಗಬೇಕು ಎಂಬ ಎಚ್ಚರಿಕೆ, ಸಲಹೆ ನೀಡುವ ಕೆಲಸ ಪತ್ರಿಕೋದ್ಯಮ ಮಾಡ್ಬೇಕು" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆಯಲ್ಲಿ ಶನಿವಾರ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. "ನಾನು ಈ ಸಮ್ಮೇಳನದಲ್ಲಿ ಅತ್ಯಂತ ಸಂತೋಷದಿಂದ ಭಾಗಿಯಾಗಿದ್ದೇನೆ. ಡಿ.ವಿ.ಗುಂಡಪ್ಪನವರು ಈ ಸಂಘವನ್ನು ಸ್ಥಾಪಿಸಿದ್ದರು. ಸುದೀರ್ಘಕಾಲದವರೆಗೆ ಪತ್ರಕರ್ತ ಸಂಘ ನಡೆದುಕೊಂಡು ಬಂದಿದೆ. ಬಾಬಾ ಸಾಹೇಬ್ ಅಂಬೇಡ್ಕರ್, ಗಾಂಧೀಜಿಯವರು ಪತ್ರಿಕೋದ್ಯಮದಿಂದ ಹಲವು ಸಮುದಾಯಗಳ ಪರ ಜನಜಾಗೃತಿ ಮಾಡುವ ಕೆಲಸ ಮಾಡಿದ್ದರು. ಮಾಧ್ಯಮಗಳು ಸ್ವತಂತ್ರಪೂರ್ವದಲ್ಲೂ ಮಹತ್ವದ ಪಾತ್ರ ವಹಿಸಿವೆ. ಸ್ವಾತಂತ್ರ್ಯಾ ಬಳಿಕ ಪ್ರಜಾಪ್ರಭುತ್ವ ಕಾಯುವ, ಸಂವಿಧಾನ ಕಾಯುವ, ಅಭಿವೃದ್ಧಿ ಯಾವ ದಿಕ್ಕಿನಲ್ಲಿ ಸಾಗಿದೆ ಎಂದು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿವೆ" ಎಂದರು.
"ಸಮಾಜದಲ್ಲಿ ಕಂದಾಚಾರ, ಮೌಢ್ಯ ಆಚಾರಗಳನ್ನು ಪೋಷಿಸಬಾರದು. ಈ ಹಿಂದೆ ನಾನು ಸಿಎಂ ಆಗಿದ್ದಾಗ ಕಾಗೆ ಬಂದು ಕಾರ್ ಮೇಲೆ ಕೂತಿದ್ದೇ ತಡ ಈ ಟಿವಿಗಳಲ್ಲಿ ಚರ್ಚೆ ಆರಂಭವಾಯಿತು. ಚಾಮರಾಜನಗರ ಜಿಲ್ಲೆಗೆ ಸಿಎಂ ಆದವರು ಹೋದರೆ ಸಿಎಂ ಸ್ಥಾನ ಹೋಗುತ್ತೆ ಎಂಬಂತ ಮೌಢ್ಯಗಳಿಗೆ ಆದ್ಯತೆ ಕೊಡಬಾರದು" ಎಂದು ಹೇಳಿದರು.
"ಸಮ ಸಮಾಜ ನಿರ್ಮಾಣವಾದರೆ, ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬಂದರೆ ಶೋಷಣೆ ಮಾಡಲು ಆಗಲ್ಲ ಎಂದು ಪಟ್ಟಭದ್ರ ಹಿತಾಸಕ್ತಿಗಳ ಸಂಚು ಮಾಡುತ್ತಿವೆ" ಎಂದು ಸಿಎಂ ಇದೇ ವೇಳೆ ಅಭಿಪ್ರಾಯಪಟ್ಟರು.