ಕರ್ನಾಟಕ

karnataka

ETV Bharat / state

ಒಂದೆಡೆ ಜಾತಿ ಜನಗಣತಿ, ಇನ್ನೊಂದೆಡೆ ಒಳಮೀಸಲಾತಿ ಜಾರಿಗೆ ಕೂಗು: ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲು

ರಾಜ್ಯದಲ್ಲೀಗ ಒಂದೆಡೆ ಜಾತಿ ಜನಗಣತಿ, ಇನ್ನೊಂದೆಡೆ ಒಳಮೀಸಲಾತಿ ಜಾರಿ ಬಗ್ಗೆ ತೀವ್ರ ಒತ್ತಾಯದ ಕೂಗು ಕೇಳಿಬರುತ್ತಿದೆ. ರಾಜಕೀಯ ಲಾಭ, ನಷ್ಟದ ಲೆಕ್ಕಾಚಾರ ಹೊಂದಿರುವ ಇವುಗಳ ಬಗ್ಗೆ ಸರ್ಕಾರ ಸ್ಷಷ್ಟ ನಿಲುವು ತೆಗೆದುಕೊಳ್ಳುವ ಇಕ್ಕಟ್ಟಿನಲ್ಲಿದೆ.

By ETV Bharat Karnataka Team

Published : 5 hours ago

siddaramaiah government
ಸಿಎಂ, ಡಿಸಿಎಂ ಹಾಗೂ ಇತರ ಸಚಿವರು (Etv Bharat)

ಬೆಂಗಳೂರು:ರಾಜ್ಯದಲ್ಲಿ ಈಗ ಜಾತಿ ಜನಗಣತಿಯ ಸದ್ದು ಜೋರಾಗಿ ಕೇಳಿ ಬರುತ್ತಿದೆ. ಜಾತಿ ಜನಗಣತಿ ವರದಿ ಜಾರಿಗೊಳಿಸುವಂತೆ ಹಿಂದುಳಿದ ಸಮುದಾಯದ ನಾಯಕರು ಒತ್ತಡ ಹೇರುತ್ತಿದ್ದಾರೆ. ಇದರ ಮಧ್ಯೆ ಒಳಮೀಸಲಾತಿ ಜಾರಿಗೊಳಿಸುವ ಕೂಗೂ ಗಟ್ಟಿಯಾಗುತ್ತಿದೆ. ಜಾತಿ ಜನಗಣತಿ ಹಾಗೂ ಒಳಮೀಸಲಾತಿ ಜಾರಿಗೆ ಪರ ವಿರೋಧ ಬಲವಾಗಿರುವ ಮಧ್ಯೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒತ್ತಡಕ್ಕೆ ಸಿಲುಕಿದೆ.

ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಂದೆ ದೊಡ್ಡ ಸವಾಲು ಎದುರಾಗಿದೆ. ಎರಡೂ ಜಾತಿ ಆಧಾರಿತ ನಿರ್ಧಾರಗಳು ರಾಜಕೀಯವಾಗಿ ವೈರುಧ್ಯಗಳನ್ನು ಹೊಂದಿರುವುದು ಸರ್ಕಾರಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ರಾಜಕೀಯವಾಗಿ ಲಾಭ, ನಷ್ಟದ ಲೆಕ್ಕಾಚಾರ ಹೊಂದಿರುವ ಜಾತಿ ಜನಗಣತಿ ಹಾಗೂ ಒಳಮೀಸಲಾತಿ ಜಾರಿಗೆ ಬಲವಾದ ಪರ - ವಿರೋಧ ಕೂಗುಗಳಿವೆ. ರಾಜಕೀಯವಾಗಿ ಹಿನ್ನಡೆಯಾಗದ ರೀತಿಯಲ್ಲಿ ಎರಡನ್ನೂ ಜಾರಿಗೊಳಿಸುವ ಅನಿವಾರ್ಯತೆ ರಾಜ್ಯ ಸರ್ಕಾರದ ಮೇಲಿದೆ.‌

ಜಾತಿ ಜನಗಣತಿ ಜಾರಿಗೆ ಒತ್ತಾಯ:ಜಾತಿ ಗಣತಿ ವರದಿ ಜಾರಿ ಸಂಬಂಧ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಜಾರಿಗೆ ಒಲವು ಹೊಂದಿದ್ದಾರೆ‌. ಆದರೆ ಪಕ್ಷದಲ್ಲಿನ ಬಲಾಢ್ಯ ಸಮುದಾಯದ ನಾಯಕರು ವರದಿ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದಲ್ಲೇ ವರದಿ ಜಾರಿ ಸಂಬಂಧ ಪರ, ವಿರೋಧ ಕೂಗುಗಳು ಪ್ರಬಲವಾಗಿದೆ. ಇತ್ತ, ರಾಹುಲ್ ಗಾಂಧಿ ದೇಶಾದ್ಯಂತ ಜಾತಿ ಗಣತಿ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲೇ ಘೋಷಣೆ ಮಾಡಿದ್ದರು. ಪಕ್ಷದ ನಿಲುವು ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿನ ಪ್ರಬಲ ಸಮುದಾಯವಾದ ಒಕ್ಕಲಿಗ ಹಾಗೂ ಲಿಂಗಾಯತ ನಾಯಕರು ಜಾತಿ ಗಣತಿ ವರದಿ ಜಾರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ವರದಿ ಜಾರಿ ಕಗ್ಗಂಟಾಗಿ ಪರಿಣಮಿಸಿದೆ.

2014ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯಾದ್ಯಂತ ಎಲ್ಲಾ ಜಾತಿ ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮನೆ ಮನೆ ಸಮೀಕ್ಷೆಗೆ ಆದೇಶ ನೀಡಿದ್ದರು. ಆಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಹೆಚ್.ಕಾಂತರಾಜ್ ಸಮೀಕ್ಷೆಯ ಉಸ್ತುವಾರಿ ಹೊತ್ತಿದ್ದರು. 2016ಕ್ಕೆ ಸಮೀಕ್ಷೆ ಪೂರ್ಣಗೊಂಡಿದ್ದರೂ, ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ ಎಂಬ ಕಾರಣಕ್ಕೆ ಸಮೀಕ್ಷೆ ವರದಿ ಬಿಡುಗಡೆಯಾಗಿಲಿಲ್ಲ.‌ ಅಲ್ಲಿಂದೀಚೆಗೆ ಹೆಚ್‌.ಕಾಂತರಾಜ್ ವರದಿ ಎಂದೇ ಬಿಂಬಿತವಾಗಿರುವ ಸಮೀಕ್ಷಾ ವರದಿ ನನೆಗುದಿಗೆ ಬಿದ್ದಿದೆ. ವರದಿ ಸಿದ್ಧವಾಗಿದ್ದರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹೆಜ್ಜೇನಿಗೆ ಕೈ ಹಾಕುವುದು ಬೇಡ ಎಂದು ಹಿಂದಿನ ಸರ್ಕಾರಗಳು ವರದಿಯ ತಂಟೆಗೆ ಹೋಗಿರಲಿಲ್ಲ.

ಜಾರಿಗೆ ಸಿಎಂ ಉತ್ಸುಕತೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳು ಹಾಗೂ ಇತರ ಜಾತಿಗಳನ್ನೊಳಗೊಂಡಂತೆ ರಾಜ್ಯದ ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡುವ ಜವಾಬ್ದಾರಿಯನ್ನು ಆಯೋಗಕ್ಕೆ ‌ನೀಡಲಾಗಿತ್ತು. ರಾಜ್ಯದ ಎಲ್ಲ ವರ್ಗಗಳ/ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಣೆಗೆ ಸೂಚಿಸಲಾಗಿತ್ತು. ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜು ಸಮಿತಿ ದತ್ತಾಂಶ ಪ್ರಕಾರ ಸಿದ್ಧಪಡಿಸಿದ ವರದಿಯನ್ನು ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯಗೆ ಇದೇ ಫೆಬ್ರವರಿಯಲ್ಲಿ ಹಸ್ತಾಂತರ ಮಾಡಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವರದಿ ಬಹಿರಂಗ ಹಾಗೂ ಜಾರಿಗೆ ಉತ್ಸುಕತೆ ತೋರಿದ್ದಾರೆ.

ವರದಿ ಜಾರಿ ಸಂಬಂಧ ಉಪಸಮಿತಿ:ಕಾಂಗ್ರೆಸ್ ಅಹಿಂದ ನಾಯಕರು ಜಾತಿ ಗಣತಿ ಜಾರಿಗೆ ಪಟ್ಟು ಹಿಡಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಾತಿ ಗಣತಿ ವರದಿ ಜಾರಿಯಿಂದ ಪ್ರಬಲ ಸಮುದಾಯದ ಜನರು ಕಾಂಗ್ರೆಸ್ ವಿರುದ್ಧ ನಿಲ್ಲುವ ಆತಂಕ ಹಲವರಲ್ಲಿದೆ. ಹೀಗಾಗಿ, ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಜಾರಿ ಸಂಬಂಧ ಉಪಸಮಿತಿ ರಚಿಸಿ, ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿದೆ. ಜಾತಿವಾರು ಸಮೀಕ್ಷೆ ಜಾರಿಗೊಳಿಸಿದರೆ ಪ್ರಬಲ ಸಮುದಾಯದ ಮತಬ್ಯಾಂಕ್ ಕಳೆದುಕೊಳ್ಳುವ ಭೀತಿ ಕಾಂಗ್ರೆಸ್ ಸರ್ಕಾರದ್ದಾಗಿದೆ.

ಈ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಮಾತನಾಡಿ, "170 ಕೋಟಿ ರೂಪಾಯಿ ಖರ್ಚು ಮಾಡಿ ಈ ಸಮೀಕ್ಷೆ ಮಾಡಲಾಗಿದೆ. ಇದು ಸಮಗ್ರ ಕರ್ನಾಟಕ ಜನತೆಯನ್ನು ಒಳಗೊಂಡಿದೆ. ಎಲ್ಲರ ಸ್ಥಿತಿಗತಿಗಳನ್ನು ಶೈಕ್ಷಣಿಕವಾಗಿ ಆರ್ಥಿಕವಾಗಿ ಅಳತೆ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ ಎಲ್ಲರ ವಿಚಾರಗಳಿವೆ. ಇದಕ್ಕೆ ಲಿಂಗಾಯತ ದಲಿತರು, ಹೊರತಾಗಿಲ್ಲ. ದುರ್ಬಲ ವರ್ಗದವರಿಗೆ ಮೀಸಲಾತಿ ಕೊಡಲು ಇದರಿಂದ ಸಾಧ್ಯ. ವರದಿ ಜಾರಿ ಆದ ಮೇಲೆ, ಚರ್ಚೆ ಸಮಯದಲ್ಲಿ ಅದು ವೈಜ್ಞಾನಿಕವೋ, ಇಲ್ಲವೋ ಗೊತ್ತಾಗತ್ತೆ. ಮುಂದಿನ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನ ಅನುಕೂಲಕರವಾಗಿರುತ್ತೆ ಅಂತ ಭಾವಿಸುತ್ತೇವೆ" ಎಂದಿದ್ದಾರೆ.

ಒಳಮೀಸಲಾತಿ ಜಾರಿ ಹಿಂದೆ ಒಳಏಟಿನ ಭೀತಿ:ರಾಜ್ಯ ಸರ್ಕಾರಕ್ಕೆ ಎದುರಾಗಿರುವ ಮತ್ತೊಂದು ಸವಾಲು ಒಳಮೀಸಲಾತಿ ಜಾರಿ. ದಲಿತ ಸಮುದಾಯದವರು ಅದರಲ್ಲೂ ಎಡ ಸಮುದಾಯದ ನಾಯಕರು ಒಳಮೀಸಲಾತಿ ಸಂಬಂಧ ಸದಾಶಿವ ಆಯೋಗದ ವರದಿ ಜಾರಿಗೆ ಪಟ್ಟುಹಿಡಿದಿದ್ದಾರೆ. ಒಳಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್ ಇತ್ತೀಚೆಗಷ್ಟೆ ಈ ಸಂಬಂಧ ಇದ್ದ ಗೊಂದಲವನ್ನು ನಿವಾರಿಸಿತ್ತು. ಆಗಸ್ಟ್ 1ರಂದು ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ, ರಾಜ್ಯ ಸರ್ಕಾರಗಳು ಎಸ್​​​ಸಿ ಸಮುದಾಯದಲ್ಲಿ ಹೆಚ್ಚು ಹಿಂದುಳಿದವರನ್ನು ಗುರುತಿಸಬಹುದು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯೊಳಗೆ ಪ್ರತ್ಯೇಕ ಕೋಟಾಗಳೊಂದಿಗೆ ಒಳಮೀಸಲಾತಿ ನೀಡಬಹುದು ಎಂದು ಮಹತ್ವದ ಆದೇಶ ನೀಡಿತ್ತು. ಆ ಮೂಲಕ ಒಳಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೇ ನೀಡಿದೆ. ಹೀಗಾಗಿ, ಸಿದ್ದರಾಮಯ್ಯ ಸರ್ಕಾರ ಮೇಲೆ ಒಳಮೀಸಲಾತಿ ಮೇಲಿನ ಸದಾಶಿವ ಆಯೋಗ ವರದಿ ಜಾರಿಗೆ ಎಸ್​​ಸಿ ನಾಯಕರು ಒತ್ತಡ ಹೇರುತ್ತಿದ್ದಾರೆ.

ಇದನ್ನೂ ಓದಿ:ಜಗಮಗಿಸುವ ಮೈಸೂರು ದಸರಾ ದೀಪಾಲಂಕಾರಕ್ಕೆ ಮನಸೋತ ಸಿಎಂ; ಸಚಿವರೊಂದಿಗೆ ಅಂಬಾರಿ ಬಸ್​ನಲ್ಲಿ ರೌಂಡ್ಸ್

ಒಳಮೀಸಲಾತಿಗೆ ಎಸ್​​ಸಿ ಎಡ ಸಮುದಾಯ ನಾಯಕರು ತೀವ್ರ ಒತ್ತಡ ಹಾಕುತ್ತಿದ್ದಾರೆ. ಆದಷ್ಟು ಬೇಗ ಜಾರಿಗೆ ಕ್ರಮ ವಹಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರೂ, ಒಳಮೀಸಲಾತಿಯಲ್ಲಿನ ಒಳಏಟಿನ ಬಗ್ಗೆಯೂ ಭೀತಿ ಎದುರಾಗಿದೆ. ಈ ಬಗ್ಗೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ 2012ರ ಜೂನ್ 14ರಂದು ವರದಿ ಸಲ್ಲಿಸಿತ್ತು. ಸದಾಶಿವ ಆಯೋಗವು ಜನಸಂಖ್ಯೆ ಆಧರಿಸಿ, ಆಗ ಪರಿಶಿಷ್ಟರಿಗೆ ಇದ್ದ ಶೇ.15 ಮೀಸಲಾತಿ ಪ್ರಮಾಣವನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಗುಂಪು 1ಕ್ಕೆ (ಎಡಗೈ) ಶೇ.6, ಗುಂಪು 2ಕ್ಕೆ (ಬಲಗೈ) ಶೇ.5, ಗುಂಪು 3 (ಆದಿ ಆಂಧ್ರ, ಅಡಿಯಾ, ಭಂಧಿ, ಬೇಡ ಜಂಗಮ, ಹೊಲಯದಾಸರಿ ಸೇರಿ 42 ಜಾತಿಗಳು) ಶೇ.1, ಗುಂಪು 4ಕ್ಕೆ (ಅಸ್ಪೃಶ್ಯರಲ್ಲದ ಗುಂಪು- ಬಂಜಾರ, ಭೋವಿ, ಕೊರಚ, ಕೊರಮ ಮತ್ತು ಇತರ ಸಂಬಂಧಿತ ಜಾತಿಗಳು) ಶೇ.3 ಎಂದು ವರ್ಗೀಕರಿಸಿ ಶಿಫಾರಸು ಮಾಡಿತ್ತು.

ಸಿದ್ದರಾಮಯ್ಯ ಸರ್ಕಾರದ ಅಂಗಳಕ್ಕೆ ಚೆಂಡು: ಕಳೆದ ಬೊಮ್ಮಾಯಿ ಸರ್ಕಾರ, ಸಂಪುಟ ಉಪಸಮಿತಿ ರಚಿಸಿ ಅದರ ಶಿಫಾರಸಿನ ಮೇಲೆ ಒಳಮೀಸಲಾತಿ ಕಲ್ಪಿಸಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಿಜೆಪಿಗೆ ಅದರ ಪ್ರತಿಕೂಲ ಪರಿಣಾಮ ವಿಧಾನಸಭೆ ಚುನಾವಣೆಯಲ್ಲಾಗಿತ್ತು. ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರವೂ ಕಳೆದ ವರ್ಷ ಒಳಮೀಸಲಾತಿ ಹೊಣೆಯನ್ನು ಕೇಂದ್ರ ಸರ್ಕಾರದ ಮೇಲೆ ಹಾಕಿ ಸುಮ್ಮನಾಗಿತ್ತು. ಆದರೆ, ಈಗ ಸುಪ್ರೀಂಕೋರ್ಟ್​​ನಲ್ಲಿ ಒಳಮೀಸಲಾತಿ ಕಲ್ಪಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿರುವುದರಿಂದ ಚೆಂಡು ವಾಪಸ್​​ ಸಿದ್ದರಾಮಯ್ಯ ಸರ್ಕಾರದ ಅಂಗಳಕ್ಕೆ ಬಿದ್ದಿದೆ. ಇತ್ತ ಕಾಂಗ್ರೆಸ್​​ನ ಎಡಗೈ ಸಮುದಾಯದ ನಾಯಕರು, ಸಚಿವರು, ಸ್ವಾಮಿಗಳು ಒಳಮೀಸಲಾತಿ ವರದಿ ಜಾರಿಗೆ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ:'ಸರ್ಕಾರ ಸ್ಪಂದಿಸುತ್ತಿಲ್ಲ, ನಾಳೆನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ': ರಾಜು ಕಾಗೆ ಆಕ್ರೋಶ

ಆದರೆ, ಇತ್ತ ಕಾಂಗ್ರೆಸ್​​ನ ಬಲಗೈ ಎಸ್​​ಸಿ ಸಮುದಾಯ ನಾಯಕರು, ಬಂಜಾರ, ಭೋವಿ ಸಮುದಾಯ ನಾಯಕರು ಒಳಮೀಸಲಾತಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಇದರ ಜಾರಿಯಿಂದ ರಾಜಕೀಯ ನಷ್ಟದ ಆತಂಕ ಎದುರಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೇಲಾದ ಪರಿಣಾಮ ಇದಕ್ಕೆ ಸಾಕ್ಷಿ‌. ಹೀಗಾಗಿ, ಸಿಎಂ ಒಳಮೀಸಲಾತಿ ವರದಿ ಜಾರಿ ಸಂಬಂಧ ಅಡಕತ್ತರಿಗೆ ಸಿಲುಕಿದ್ದಾರೆ. ರಾಜಕೀಯ ಲಾಭ, ನಷ್ಟ, ಪರ ವಿರೋಧದ ಕಗ್ಗಂಟು ಎದುರಾಗಿದೆ.

''ಸದಾಶಿವ ಆಯೋಗ ವರದಿಯ ಸೂತ್ರದಲ್ಲಿ ಮತ್ತು ಈಗಿನ ಜಾತಿವಾರು ಸಮೀಕ್ಷೆಯ ದತ್ತಾಂಶದ ಆಧಾರದಲ್ಲಿ ಒಳಮೀಸಲಾತಿ ಕಲ್ಪಿಸಲು ಅವಕಾಶ ಇದೆ. ಹಿಂದಿನ ಸರ್ಕಾರ ಸದಾಶಿವ ಆಯೋಗ ವರದಿ ತಿರಸ್ಕರಿಸಿ, ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯ ಸಂಪುಟ ಉಪಸಮಿತಿ ವರದಿ ಶಿಫಾರಸಿನ‌ ಮೇರೆಗೆ ಅವೈಜ್ಞಾನಿಕವಾಗಿ ಒಳಮೀಸಲಾತಿ ಘೋಷಿಸಿತ್ತು. ಆದರೆ, ಈಗ ಜಾತಿವಾರು ಸಮೀಕ್ಷೆಯ ದತ್ತಾಂಶವನ್ನು ಬಳಸಿ ಒಳಮೀಸಲಾತಿ ಕಲ್ಪಿಸಬಹುದು. ಇದಕ್ಕೆ ಬಲಗೈ ಹಾಗೂ ಬಂಜಾರ, ಭೋವಿ ಸಮುದಾಯದವರು ಬೆಂಬಲಿಸುವ ಮಾತುಗಳನ್ನಾಡುತ್ತಿದ್ದಾರೆ. ಹೀಗಾಗಿ, ಆದಷ್ಟು ಬೇಗ ಒಳಮೀಸಲಾತಿ ಜಾರಿಗೊಳಿಸಿದರೆ ಉತ್ತಮ'' ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:'ಆಕಾಶದತ್ತ ಚಿಗುರಿತಲೇ, ಬೇರೆಲ್ಲ ಮುದ್ದಾಯಿತಲೇ ಪರಾಕ್': ಕಾರ್ಣಿಕ ನುಡಿದ ಗೊರವಯ್ಯ

ABOUT THE AUTHOR

...view details