ಕರ್ನಾಟಕ

karnataka

ETV Bharat / state

ಹಾವೇರಿ ಬಾಲಕನ ಸಾವು ಪ್ರಕರಣ: ಇಬ್ಬರು ಅಧಿಕಾರಿಗಳ ಅಮಾನತು

ಹಾವೇರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

By ETV Bharat Karnataka Team

Published : 5 hours ago

HAVERI TRAGIC CASE
ಅಮಾನತಾದ ಅಧಿಕಾರಿಗಳು (ETV Bharat)

ಹಾವೇರಿ: ಪಟ್ಟಣದ ಚರಂಡಿಯಲ್ಲಿ ಬಾಲಕ ನಿವೇದನ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತ ಮತ್ತು ಕಿರಿಯ ಆರೋಗ್ಯ ನಿರೀಕ್ಷಕನನ್ನು ಅಮಾನಗೊಳಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮೌಖಿಕ ಆದೇಶದ ಹಿನ್ನೆಲೆ ಜಿಲ್ಲಾಧಿಕಾರಿ ವಿಜಯ್​ ಮಹಾಂತೇಶ್​ ಅಮಾನತು ಮಾಡಿದ್ದಾರೆ.

ನಗರಸಭೆ ಪೌರಾಯುಕ್ತ ಪರಶುರಾಮ್ ಎಂ. ಛಲವಾದಿ ಮತ್ತು ಕಿರಿಯ ಆರೋಗ್ಯ ನಿರೀಕ್ಷಕ ರಮೇಶ್ ಆರ್. ಮುಂಜೋಜಿ ಅಮಾನತಾದ ಅಧಿಕಾರಿಗಳು. ಚರಂಡಿ ಕಾಲುವೆ ಮೇಲಿನ ಕಲ್ಲು ಮುಚ್ಚದೇ ನಿರ್ಲಕ್ಷ್ಯ ವಹಿಸಿದ ಕಾರಣ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಗುರುವಾರ ಆದೇಶಿಸಿದ್ದಾರೆ.

ಹಾವೇರಿ ಬಾಲಕನ ಸಾವು ಪ್ರಕರಣ (ETV Bharat)

ನಗರದಲ್ಲಿ ಎಡೆಬಿಡದೇ ಸುರಿದ ಮಳೆಗೆ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ 10 ವರ್ಷದ ಬಾಲಕ ನಿವೇದನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗವೇ ಈ ಘಟನೆ ನಡೆದಿದ್ದರಿಂದ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿತ್ತು.

ಘಟನೆಯ ವಿವರ:ಗುರುವಾರ ಬೆಳಗ್ಗೆ ತನ್ನ ಸ್ನೇಹಿತರ ಜೊತೆ ನಿವೇದನ ಚರಂಡಿಯಲ್ಲಿ ನೀರು ಹರಿಯುತ್ತಿದ್ದನ್ನ ದೃಶ್ಯ ನೋಡುತ್ತ ನಿಂತಿದ್ದ. ಈ ವೇಳೆ ಹಠಾತ್ ಕಾಲುಜಾರಿ ಚರಂಡಿಗೆ ಬಿದ್ದು ನೀರಲ್ಲಿ ಕೊಚ್ಚಿ ಹೋಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ಬಾಲಕನ ಪತ್ತೆ ಕಾರ್ಯ ನಡೆಸಿದ್ದರು. ಜಿಲ್ಲಾಧಿಕಾರಿ ವಿಜಯ್​ ಮಹಾಂತೇಶ್ ದಾನಮ್ಮನವರ್, ಹಾವೇರಿ ಎಸ್ಪಿ ಅಂಶುಕುಮಾರ್ ಕೂಡ ಸ್ಥಳಕ್ಕಾಗಮಿಸಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು. ಬಾಲಕ ಮುಳುಗಿದ ಸ್ಥಳದಲ್ಲಿಂದ ಹಿಡಿದು ಸುಮಾರು 100 ಮೀಟರ್ ವರೆಗೆ ಚರಂಡಿಯಲ್ಲಿ ಪತ್ತೆ ಕಾರ್ಯ ನಡೆಸಲಾಗಿತ್ತು. ಸತತ ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಬಾಲಕನ ದೇಹ ಪತ್ತೆಯಾಗಿತ್ತು. ತಕ್ಷಣ ಆ್ಯಂಬುಲೆನ್ಸ್​ನಲ್ಲಿ ಬಾಲಕನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೆ ಆತ ಮೃತಪಟ್ಟಿದ್ದನು.

ಸಾವಿಗೆ ಸಂತಾಪ ಸೂಚಿಸಿದ ಡಿಸಿ:ಬಾಲಕನ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ವಿಜಯ್​ ಮಹಾಂತೇಶ್, ಈ ಘಟನೆ ನಡೆಯಬಾರದಿತ್ತು. ಆದರೆ, ನಡೆದು ಹೋಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಜಿಲ್ಲಾಡಳಿತ ಮುಂಜಾಗ್ರತೆ ವಹಿಸಲಿದೆ. ಮೃತ ನಿವೇದನ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಎಲ್ಲ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು. ಆತನ ಆತ್ಮಕ್ಕೆ ದೇವರು ಶಾಂತಿ ನೀಡಲಿ, ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದರು.

ಆದರೆ, ಪುತ್ರನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಬಂಧಿಕರು, ಸಾರ್ವಜನಿಕರು ರೋಧಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಮಧ್ಯೆ ಆಕ್ರೋಶಕೊಂಡ ಸ್ಥಳೀಯರು, ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆಲ್ಲ ಅವೈಜ್ಞಾನಿಕ ಕಾಮಗಾರಿ ಹಾಗೂ ಸರಿಯಾಗಿ ಕಾಲುವೆ ನಿರ್ಮಿಸದಿರುವುದೇ ಕಾರಣ ಎಂದು ಆರೋಪಿಸಿದರು. ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬರಬೇಕು, ನಮಗೆ ನ್ಯಾಯ ಸಿಗಬೇಕು ಎಂದು ಪಟ್ಟುಹಿಡಿದ ಪ್ರಸಂಗ ಕೂಡ ನಡೆಯಿತು. ಸ್ಥಳಕ್ಕೆ ಬರುತ್ತಿದ್ದಂತೆ ತರಾಟೆಗೆ ತಗೆದುಕೊಂಡರು.

ಅಂತ್ಯಕ್ರಿಯೆ: ನಿವೇದನ ಮೃತದೇಹದ ಮರಣೋತ್ತರ ಪರೀಕ್ಷೆ ನಂತರ ಮನೆಗೆ ಶವ ತರಲಾಯಿತು. ಶವ ತರುತ್ತಿದ್ದಂತೆ ಸಂಬಂಧಿಕರ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಸೇರಿದ ಜನರು ಸಹ ಕಣ್ಣೀರಿಟ್ಟರು. ತಂದೆ ಬಸವರಾಜ್ ಮಗನ ಮೃತದೇಹಕ್ಕೆ ಅಂತಿಮ ಪೂಜೆ ಸಲ್ಲಿಸಿದ ನಂತರ ಮೃತದೇಹದ ಅಂತ್ಯಕ್ರಿಯೆ ಕೂಡ ನಡೆಸಲಾಯಿತು.

ಮೃತ ನಿವೇದನ ಮೊನ್ನೆ ನಡೆದ ದಸರಾದಲ್ಲಿ ಆಯುಧ ಪೂಜೆಯ ದಿನ ತನ್ನ ಸೈಕಲ್‌ ಪೂಜೆ ಮಾಡಿದ್ದ ಪೋಟೋ, ತಂಗಿ ಆಧ್ಯ ಅಣ್ಣನ ಜನ್ಮದಿನಕ್ಕೆ ವಿಷ್ ಮಾಡಿದ ವಿಡಿಯೋ ನೆರೆದವರು ಮೊಬೈಲ್‌ನಲ್ಲಿ ಹರಿದಾಡುತ್ತಿದ್ದು, ಸಹೋದರರ ಪ್ರೇಮ ನೋಡಿದವರು ಕಣ್ಣಾಲಿಗಳಲ್ಲಿ ನೀರು ತುಂಬಿ ಬಂದಿತ್ತು.

ಇದನ್ನೂ ಓದಿ:ಹಾವೇರಿ: ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿಹೋಗಿದ್ದ 12 ವರ್ಷದ ಬಾಲಕ ಸಾವು

ABOUT THE AUTHOR

...view details